ಚಾಮರಾಜನಗರ: ಕೇರಳದ ಐವರು ದರೋಡೆಕೋರರ ಬಂಧನ
ಚಾಮರಾಜನಗರ, ಫೆಬ್ರವರಿ 08: ಕೇರಳದ ವ್ಯಕ್ತಿಯನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಅಂತರರಾಜ್ಯ ಐವರು ದರೋಡೆಕೋರರನ್ನು ಗುಂಡ್ಲುಪೇಟೆ ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರ ಹಿಡಿಯಲು ಮಾರು ವೇಷ ಧರಿಸಿದ ಮೈಸೂರು ಪೊಲೀಸರು
ಕೇರಳಮೂಲದ ಶೈಜು, ಅಜಿನ್, ಸೈಜು, ಗೋಕುಲ್, ಸಂದೀಪ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಜನವರಿ 14ರಂದು ಕೇರಳದ ಅಬ್ದುಲ್ಲಾ ಎಂಬುವವರ ಕಾರನ್ನು ಸುಲ್ತಾನ್ ಬತ್ತೇರಿ ರಸ್ತೆಯ ಕಗ್ಗಳದಹುಂಡಿ ಬಳಿ ಅಡ್ಡಗಟ್ಟಿ ಅವರ ಬಳಿಯಿಂದ 38 ಸಾವಿರ ರೂಪಾಯಿಗಳನ್ನು ದರೋಡೆ ಮಾಡಿದ್ದರು.
ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ಹದಿನೈದು ದಿನಗಳ ಕಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡವು ಕೇರಳ ಸೇರಿದಂತೆ ವಿವಿಧೆಡೆಗೆ ತೆರಳಿ ದರೋಡೆಕೋರರ ಬಗ್ಗೆ ಮಾಹಿತಿ ಕಲೆ ಹಾಕಿ ಕೊನೆಗೂ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 15ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಬಂಧಿತರಿಂದ 2500 ರೂಪಾಯಿ ನಗದು ಮತ್ತು ಐದು ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.