ಗುಂಡ್ಲುಪೇಟೆ: ಸಮಯಪ್ರಜ್ಞೆಯಿಂದ 70 ಮಂದಿ ಜೀವ ಉಳಿಸಿದ ಕೆಎಸ್ಸಾರ್ಟಿಸಿ ಚಾಲಕ
ಗುಂಡ್ಲುಪೇಟೆ, ಅಕ್ಟೋಬರ್ 08 : ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಕಮರಿಗೆ ಬೀಳಬೇಕಾಗಿದ್ದ ಬಸ್ ಹಾಗೂ ಬಸ್ ನಲ್ಲಿದ್ದ 70 ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ನಡೆದಿದೆ.
ಬಂಡೀಪುರ, ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರ ಜಾತ್ರೆ
ಎಂದಿನಂತೆ ಗುಂಡ್ಲುಪೇಟೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಕೆಎಸ್ಆರ್ಟಿಸಿ ಬಸ್ ಮಧ್ಯಾಹ್ನ ತೆರಳಿದ್ದು, ಮರಳಿ ಬರುವಾಗ ಬಸ್ನ ಬ್ರೇಕ್ ವಿಫಲರಾಗಿದ್ದರಿಂದ ಬಸ್ ಕಮರಿಗೆ ಬೀಳುವ ಹಂತದಲ್ಲಿತ್ತು.
ಈ ಸಮಯದಲ್ಲಿ ಬಸ್ ಚಾಲಕ ಚಿನ್ನಸ್ವಾಮಿ ಸಮಯ ಪ್ರಜ್ಞೆಯಿಂದ ಬಸ್ನ್ನು ಯಾವುದೇ ರೀತಿಯಲ್ಲಿ ಅಪಾಯವಿಲ್ಲದಂತೆ ಕಬ್ಬಿಣದ ತಡೆಗೋಡೆಗೆ ತಂದು ನಿಲ್ಲಿಸಿದ್ದು ಎಲ್ಲರೂ ನೆಮ್ಮದಿಯುಸಿರು ಬಿಡುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಬಸ್ ಪ್ರಪಾತಕ್ಕೆ ಬಿದ್ದು ಭಾರೀ ಅನಾಹುತ ಸಂಭವಿಸುವ ಸಾಧ್ಯವಿತ್ತು.
ಗುಂಡ್ಲುಪೇಟೆ ಮತ್ತು ಹಿಮವದ್ಗೋಪಾಲಸ್ವಾಮಿ ಬೆಟ್ಟದ ನಡುವೆ ಕೇವಲ ಕೆಎಸ್ಆರ್ಟಿಸಿ ಬಸ್ಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಖಾಸಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಆದರೆ ಮೇಲಿಂದ ಮೇಲೆ ಇಂತಹ ಅವಘಡಗಳು ನಡೆಯುತ್ತಿದ್ದು, ಚಾಲಕರ ಸಮಯಪ್ರಜ್ಞೆಯಿಂದ ಭಾರೀ ಅನಾಹುತಗಳು ತಪ್ಪಿವೆ. ಇನ್ನಾದರೂ ಅಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸಲು ಯೋಗ್ಯವಾದ ಬಸ್ಗಳನ್ನೇ ವ್ಯವಸ್ಥೆ ಮಾಡಲಿ ಎನ್ನುವುದೇ ಎಲ್ಲರ ಆಶಯವಾಗಿದೆ.