ಗುಂಡ್ಲುಪೇಟೆಯಲ್ಲಿ ದಿಢೀರ್ ಕಾಣಿಸಿಕೊಂಡ ಕರಡಿಯಿಂದ ಹೆದ್ದಾರಿ ಬಂದ್
ಗುಂಡ್ಲುಪೇಟೆ, ಜೂನ್ 20: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಹೆದ್ದಾರಿ ಪಕ್ಕದ ಗ್ರಾಮದಲ್ಲಿ ಕರಡಿಯೊಂದು ಇಂದು ದಿಢೀರ್ ಪ್ರತ್ಯಕ್ಷವಾಯಿತು. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಲ್ಲದೆ, ವಿಷಯ ತಿಳಿದು ಜನ ಸ್ಥಳದಲ್ಲಿ ಜಮಾಯಿಸಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೂ ತಡೆಯುಂಟಾದ ಘಟನೆ ನಡೆಯಿತು.
ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗರಗನಹಳ್ಳಿ ಬಳಿಯ ನಿವಾಸಿ ಮಹದೇವಪ್ಪ ಎಂಬುವವರ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ ಕರಡಿಯೊಂದು ಕಾಣಿಸಿಕೊಂಡಿದೆ.
ಜಮೀನಿನ ಮಾಲೀಕ ಮಹದೇವಪ್ಪ ಅವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದೆ. ಅಷ್ಟರಲ್ಲಿ ಕಿರುಚಾಡಿಕೊಂಡಾಗ ಸುತ್ತಮುತ್ತಲಿನ ಸಾರ್ವಜನಿಕರು ಬಂದು ಕರಡಿಯನ್ನು ಓಡಿಸಿದ್ದಾರೆ. ಅಲ್ಲಿಂದ ಓಡಿಹೋದ ಕರಡಿಯು ಪಕ್ಕದಲ್ಲಿರುವ ಬೇಲಿಯಲ್ಲಿ ಅಡಗಿಕೊಂಡಿತು. ತಕ್ಷಣ ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಬಲೆಯಲ್ಲಿ ಸೆರೆ ಹಿಡಿದು ಕಾಡಿಗೆ ಬಿಡಲು ಪ್ರಯತ್ನಿಸಿದರು. ಆದರೆ ಆಕ್ರೋಶಗೊಂಡ ಕರಡಿಯು ಸಿಬ್ಬಂದಿ ಮೇಲೆಯೇ ಎರಗಲು ಮುಂದಾಯಿತು.
ತಕ್ಷಣ ಎಚ್ಚೆತ್ತ ಸಿಬ್ಬಂದಿ ಕರಡಿಯಿಂದ ತಪ್ಪಿಸಿಕೊಂಡು ಪಕ್ಕದಲ್ಲಿ ನಿಲ್ಲುವಷ್ಟರಲ್ಲಿ ಕರಡಿಯು ಮರವನ್ನೇರಿ ಕುಳಿತುಕೊಂಡಿತು. ಆಗಲೇ ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಕೈಬಿಟ್ಟ ಅರಣ್ಯ ಸಿಬ್ಬಂದಿ ಮರವನ್ನೇರಿರುವ ಕರಡಿಯು ಕತ್ತಲಾಗಿರುವುದರಿಂದ ಇಳಿದು ವಾಪಸ್ ಕಾಡಿಗೆ ತೆರಳುತ್ತದೆ ಎಂಬ ವಿಶ್ವಾಸದಿಂದ ವಾಪಸ್ಸಾಗಿದ್ದಾರೆ.
ಸ್ಥಳಕ್ಕೆ ಎಸಿಎಫ್ ರವಿಕುಮಾರ್ ಆರ್ಎಫ್ಒ ನವೀನ್, ಬೇಗೂರು ಪೊಲೀಸ್ ಠಾಣೆ ಎಎಸ್ಐ ಗುರುಸಿದ್ದಯ್ಯ ಭೇಟಿ ನೀಡಿದ್ದರು.
ಈ ಎಲ್ಲಾ ನಾಟಕ ವೀಕ್ಷಿಸಲು ಜನರು ಸಮರೋಪಾದಿಯಲ್ಲಿ ನೆರೆದಿದ್ದರಿಂದ ಸುಮಾರು ಹೊತ್ತು ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು.