ಗುಂಡ್ಲುಪೇಟೆಯಲ್ಲಿ ಸ್ಫೋಟಗೊಂಡ ಸುದ್ದಿ ದಿಟವಾದರೆ ಬಿಜೆಪಿಗೆ ಕಷ್ಟಕಷ್ಟ
Recommended Video
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ಇದೀಗ ತಳಮಳ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿಸಿರುವ ನಿರಂಜನ್ ಕುಮಾರ್ ಬಯಕೆಗೆ ರಾಜ್ಯ ನಾಯಕರು ಎಳ್ಳು-ನೀರು ಬಿಡುವ ಲಕ್ಷಣಗಳು ಎದ್ದು ಕಾಣುತ್ತಿದ್ದು, ಇದು ಜನರಲ್ಲಿ ಕುತೂಹಲ ಮೂಡಿಸಿದ್ದರೆ, ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ನಿಧನದ ನಂತರ ನಡೆದ ಉಪಚುನಾವಣೆ ವೇಳೆ ರಾಜ್ಯದಾದ್ಯಂತ ಮನೆ ಮಾತಾದ ಮತ್ತು ಕುತೂಹಲ ಸೃಷ್ಠಿಸಿದ್ದ ವಿಧಾನಸಭಾ ಕ್ಷೇತ್ರ ಗುಂಡ್ಲುಪೇಟೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುವುದು ಖಚಿತವಾಗಿದೆ.
ಕ್ಷೇತ್ರ ಪರಿಚಯ: ಗುಂಡ್ಲುಪೇಟೆಯಲ್ಲಿ ದಿ. ಮಹದೇವ ಪ್ರಸಾದ್ ಕುಟುಂಬದ್ದೇ ರಾಜ್ಯಭಾರ
ಕಾಂಗ್ರೆಸ್ ನಿಂದ ಮತ್ತೆ ಸಚಿವೆ ಗೀತಾ ಮಹದೇವಪ್ರಸಾದ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಅವರಿಗೆ ಪೈಪೋಟಿ ಕೊಡಬಲ್ಲ ಸ್ಪರ್ಧಿಯನ್ನು ಕಣಕ್ಕಿಳಿಸಲು ರಾಜ್ಯ ಬಿಜೆಪಿಯಲ್ಲಿ ತಯಾರಿ ನಡೆದಿದೆ. ಕಳೆದೆರಡು ಚುನಾವಣೆಯಿಂದಲೂ ಸೋಲನ್ನೇ ಅನುಭವಿಸುತ್ತಿರುವ ನಿರಂಜನ್ ಕುಮಾರ್ ಅವರನ್ನು ಕೈ ಬಿಟ್ಟು, ಅಲ್ಲಿಂದ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ವದಂತಿ ಹರಡಿದೆ.
ಇದು ನಿಜವೋ, ಸುಳ್ಳೋ ಗೊತ್ತಾಗಿಲ್ಲ. ಆದರೆ ಗುಂಡ್ಲುಪೇಟೆಯ ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಈ ವಿಚಾರ ಸಂಚಲನ ಸೃಷ್ಟಿಸಿರುವುದಂತೂ ಸತ್ಯ.
ಬಿಜೆಪಿಯಲ್ಲಿ ಅಸಮಾಧಾನ
ಬಿಜೆಪಿಯ ನಾಯಕನಾಗಿ ಸ್ಥಳೀಯ ಜನತೆಗೆ ಹತ್ತಿರವಾಗಿರುವ ನಿರಂಜನ್ ಕುಮಾರ್ ಅವರಿಗೆ ಟಿಕೆಟ್ ನೀಡದೆ ಹೊರಗಿನ ವ್ಯಕ್ತಿಗಳಿಗೆ ಟಿಕೆಟ್ ನೀಡಲು ಮುಂದಾಗಿರುವುದು ಸ್ಥಳೀಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಅಸಮಾಧಾನವನ್ನುಂಟು ಮಾಡಿದೆ. ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ನಿರಂಜನ್ ಕುಮಾರ್ ಗೆಲುವು ಕಷ್ಟಸಾಧ್ಯವಾಗಿತ್ತು. ಏಕೆಂದರೆ ಇಡೀ ಆಡಳಿತ ಯಂತ್ರವೇ ಅಲ್ಲಿ ಗೀತಾಮಹದೇವಪ್ರಸಾದ್ ಅವರ ಪರ ಕೆಲಸ ಮಾಡಿತ್ತು. ಜೊತೆಗೆ ಅನುಕಂಪವೂ ಅವರತ್ತ ಇತ್ತು.
ಕೈಕಟ್ಟಿ ಕುಳಿತಿಲ್ಲ ನಿರಂಜನ್
ಈಗ ಬದಲಾದ ಕಾಲದಲ್ಲಿ ಎಲ್ಲವೂ ಅಂದುಕೊಂಡಂತಿಲ್ಲ. ಜತೆಗೆ ಉಪಚುನಾವಣೆಯಲ್ಲಿ ಸೋತ ತಕ್ಷಣ ನಿರಂಜನ್ ಕುಮಾರ್ ಕೈಕಟ್ಟಿ ಕುಳಿತಿಲ್ಲ. ಪಕ್ಷ ಸಂಘಟನೆ ಸೇರಿದಂತೆ ಪಕ್ಷದ ಎಲ್ಲ ರೀತಿಯ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಈ ಬಾರಿ ಅವರ ಬದಲಿಗೆ ಬೇರೆ ಯಾರಿಗೆ ಟಿಕೆಟ್ ನೀಡಿದರೂ ಅದರ ಲಾಭ ಕಾಂಗ್ರೆಸ್ ಗೆ ಆಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬೆಚ್ಚಿಬಿದ್ದಿರುವ ಮುಖಂಡರು, ಕಾರ್ಯಕರ್ತರು
ಈ ಎಲ್ಲದರ ನಡುವೆ ಗುಂಡ್ಲುಪೇಟೆಯಿಂದ ವಿ.ಸೋಮಣ್ಣ ಸ್ಪರ್ಧಿಸುತ್ತಾರಂತೆ ಎಂಬ ವದಂತಿಗಳು ಹರಡುತ್ತಿದ್ದಂತೆಯೇ ನಿರಂಜನ್ ಕುಮಾರ್ ಸೇರಿದಂತೆ ಹಲವು ನಾಯಕರು ಬೆಚ್ಚಿ ಬಿದ್ದಿದ್ದಾರೆ. ಈ ಸಂಬಂಧ ಸಭೆಯನ್ನು ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನಿರಂಜನ್ ಅಭ್ಯರ್ಥಿ ಎಂದು ಪರೋಕ್ಷ ಸೂಚನೆ
ಇತ್ತೀಚೆಗೆ ನಡೆದ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ,ಮುಖಂಡ ಸಿ.ಎಸ್.ನಿರಂಜನಕುಮಾರ್ ಅವರನ್ನು ಬೆಂಬಲಿಸಿ- ಅವರನ್ನು ಗೆಲ್ಲಿಸಿ ಎಂದು ಹೇಳುವುದರೊಂದಿಗೆ ಪರೋಕ್ಷವಾಗಿ ಪಕ್ಷದ ಅಭ್ಯರ್ಥಿ ನಿರಂಜನಕುಮಾರ್ ಎಂದು ಘೋಷಿಸಿದ್ದರು. ಹೀಗಿರುವಾಗ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಸಚಿವ ಸೋಮಣ್ಣ ಗುಂಡ್ಲುಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿದ್ದು, ಅವರಿಗೆ ಟಿಕೆಟ್ ಖಚಿತವಾಗಿದೆ ಎಂದು ವದಂತಿ ಹಬ್ಬಿರುವುದಕ್ಕೆ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತರಿಂದ ಪಕ್ಷ ತೊರೆಯುವ ಬೆದರಿಕೆ
ಒಂದು ವೇಳೆ ನಮ್ಮ ಆಗ್ರಹವನ್ನು ಕಡೆಗಣಿಸಿ ನಿರಂಜನ್ ಕುಮಾರ್ ಬದಲಿಗೆ ವಿ.ಸೋಮಣ್ಣ ಅವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ರಾಜೀನಾಮೆ ನೀಡಿ, ಪಕ್ಷೇತರವಾಗಿ ನಿಲ್ಲಿಸಿ ಗೆಲ್ಲಿಸುವ ನಿರ್ಧಾರಕ್ಕೂ ಅಭಿಮಾನಿಗಳು ಬಂದಿದ್ದಾರೆ. ಆದರೆ ಬಿಜೆಪಿ ಮುಖಂಡ ನಿರಂಜನ್ ಕುಮಾರ್, ಇದು ವದಂತಿ ಇದಕ್ಕೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ. ಈ ಬಗ್ಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತನಾಡಿ, ಗೊಂದಲಕ್ಕೆ ತೆರೆ ಎಳೆಯುವುದಾಗಿ ಹೇಳಿದ್ದಾರೆ. ಆದರೆ ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಫೆಬ್ರವರಿ 22ರಂದು ಬಿಜೆಪಿ ಕಾರ್ಯಕರ್ತರ ಸಭೆ
ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಫೆಬ್ರವರಿ 22ರಂದು ಬೆಳಗ್ಗೆ 10.30ಕ್ಕೆ ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಕಾರ್ಯಕರ್ತರ ಸಭೆಯನ್ನು ನಿರಂಜನ್ ಕುಮಾರ್ ಕರೆದಿದ್ದು, ಇದರಲ್ಲಿ ಟಿಕೆಟ್ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಮಹತ್ವದ ವಿಚಾರಗಳ ಬಗ್ಗೆ ಕಾರ್ಯಕರ್ತರ ಸಮ್ಮುಖದಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ರಾಜ್ಯ ನಾಯಕರ ನಿರ್ಧಾರವೇನು?
ಇಲ್ಲಿ ನಡೆಯುತ್ತಿರುವ ಬೆಳವಣಿಗೆ ಬಿಜೆಪಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದ್ದು, ಪಕ್ಷದ ರಾಜ್ಯ ನಾಯಕರು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಅಭ್ಯರ್ಥಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಗೋಚರವಾಗಲಿವೆ.