ಬಂಡೀಪುರ ರೆಸಾರ್ಟ್ ನಲ್ಲಿ ಗೀತಾ ಮಹದೇವಪ್ರಸಾದ್ ವಿಶ್ರಾಂತಿ
Recommended Video
ಚಾಮರಾಜನಗರ, ಮೇ 14: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾರರ ಮನವೊಲಿಸಲು ಹಗಲು ರಾತ್ರಿ ಎನ್ನದೆ ಓಡಾಡಿದ ಸ್ಥಳೀಯ ಅಭ್ಯರ್ಥಿಗಳು ಮತದಾರರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.
ಮತದಾನ ಮುಗಿದ ಹಿನ್ನಲೆಯಲ್ಲಿ ಗೆಲುವು ಯಾರಿಗೆ ಎಂಬ ಕುತೂಹಲ ಅವರನ್ನು ಕಾಡುತ್ತಿದ್ದರೂ ಕೆಲವರು ವಿಶ್ರಾಂತಿಗೆ ತೆರಳಿದ್ದಾರೆ.
ಮತಯಾಚನೆಗೆ ತೆರಳಿದ ಸಚಿವೆ ಮೋಹನಕುಮಾರಿ ವಿರುದ್ಧ ಮಹಿಳೆಯರು ಗರಂ
ಎಲ್ಲ ಗ್ರಾಮಗಳಿಗೂ ತೆರಳಿ ಬಿಸಿಲಿನಲ್ಲಿ ಮತಯಾಚನೆ ಮಾಡಿ ದಣಿದಿದ್ದ ಕಾಂಗ್ರೆಸ್ ಅಭ್ಯರ್ಥಿ, ಸಚಿವೆ ಗೀತಾಮಹದೇವಪ್ರಸಾದ್ ಅವರು ಬಂಡೀಪುರ ಸಮೀಪದ ಸರಾಯ್ ರೆಸಾರ್ಟಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮೇ 12ರಂದು ಸ್ವಗ್ರಾಮ ಹಾಲಹಳ್ಳಿಯಲ್ಲಿ ಮತದಾನ ಮಾಡಿ ಕೆಲವು ಗ್ರಾಮಗಳ ಮತಗಟ್ಟೆಗೆ ಭೇಟಿ ನೀಡಿದ್ದರು. ನಂತರ ರಾತ್ರಿ 8 ಗಂಟೆ ವೇಳೆಗೆ ಪುತ್ರ ಗಣೇಶ್ ಪ್ರಸಾದ್ ಕುಟುಂಬದ ಇಬ್ಬರು ಸದಸ್ಯರೊಂದಿಗೆ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯ ಸರಾಯ್ ರೆಸಾರ್ಟಿಗೆ ತೆರಳಿ ವಿಶ್ರಾಂತಿಯಲ್ಲಿದ್ದಾರೆ.
ಮತಯಾಚನೆ ಸಂದರ್ಭದಲ್ಲಿ ಬಿರಿಬಿಸಿಲನ್ನು ಲೆಕ್ಕಿಸದೆ ಮನೆಮನೆಗೆ ತೆರಳುವುದು ಹಾಗೂ ರೋಡ್ ಶೋ ನಡೆಸಿ ದಣಿದಿದ್ದ ಸಚಿವೆ ಗೀತಾಮಹದೇವ ಪ್ರಸಾದ್ ಕಡೆಯ ದಿನಗಳಲ್ಲಿ ರೋಡ್ ಶೋಗೆ ಸೀಮಿತರಾಗಿದ್ದರು. ಸ್ವಲ್ಪವೂ ವಿರಾಮ ದೊರಕದೆ ಹೈರಾಣಾಗಿದ್ದ ಅವರು ಮತದಾನ ದಿನ ಸಮೀಪಿಸುತ್ತಿದ್ದಂತೆ ಹೆಜ್ಜೆಯಿಡಲೂ ಸಾಧ್ಯವಾಗದಷ್ಟು ಬಳಲಿದ್ದರು. ಇದರಿಂದ ಪಟ್ಟಣದ ಬಹುತೇಕ ವಾರ್ಡ್ ಗಳಲ್ಲಿ ಮನೆಗಳಿಗೆ ತೆರಳುವುದಿರಲಿ ರೋಡ್ ಶೋ ನಡೆಸಲೂ ಸಾಧ್ಯವಾಗಿರಲಿಲ್ಲ. ಇದರಿಂದ ವಿಶ್ರಾಂತಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಇನ್ನೊಂದೆಡೆ ನಾಮಪತ್ರ ಸಲ್ಲಿಸುವ ಮೊದಲೇ ಮತಯಾಚನೆ ಪ್ರಾರಂಭಿಸಿದ ನಿರಂಜನಕುಮಾರ್ ಕೂಡ ಬಳಲಿದ್ದರೂ ಅದನ್ನು ಲೆಕ್ಕಿಸದೆ ದಿನೇ ದಿನೇ ಹೆಚ್ಚಾಗುತ್ತಿದ್ದ ಬೆಂಬಲದಿಂದ ಆಶಾಭಾವನೆ ಹೊಂದಿದ್ದ ಅವರು ಮತಗಟ್ಟೆಗಳ ಭೇಟಿ ನಂತರ ವಿವಿಧ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತಿದ್ದಾರೆ. ಮೇ 13ರಂದು ಬೆಳಗ್ಗೆಯಿಂದಲೂ ಪಕ್ಷದ ಕಚೇರಿಯಲ್ಲಿ ಕುಳಿತು ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಕುತೂಹಲ ಒಂದಷ್ಟು ಆತಂಕ ಎಲ್ಲವೂ ಕಾಡುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರಾನೇರ ಸ್ಪರ್ಧೆ ಇರುವುದು ಕಂಡು ಬಂದಿದ್ದರಿಂದ ಗೆಲುವು ಯಾರಿಗೆ ಎಂಬುದು ಎಲ್ಲರನ್ನು ಕಾಡುತ್ತಿರುವ ಕುತೂಹಲವಾಗಿದೆ.