ಚಾಮರಾಜನಗರದಲ್ಲಿ ಹೆಚ್ಚುತ್ತಲೇ ಇದೆ ಬಾಲ್ಯ ವಿವಾಹದ ಪಿಡುಗು!
ಚಾಮರಾಜನಗರ, ಜೂನ್.29: ನಮ್ಮ ಸರ್ಕಾರಗಳು, ಸ್ವಯಂ ಸೇವಾ ಸಂಸ್ಥೆಗಳು, ಪೊಲೀಸರು ಅದೆಷ್ಟೇ ಪ್ರಯತ್ನಪಟ್ಟರೂ, ಬಾಲ್ಯ ವಿವಾಹದ ಪಿಡುಗನ್ನು ನಮ್ಮಲ್ಲಿ ಕಡಿಮೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಬಹುತೇಕ ಗುಡ್ಡಗಾಡು ಪ್ರದೇಶವನ್ನೇ ಒಳಗೊಂಡಿರುವ ಚಾಮರಾಜನಗರ ಜಿಲ್ಲೆ.
ಜಿಲ್ಲೆಯ ಅಭಿವೃದ್ಧಿಗೆ ಕೋಟಿ ಕೋಟಿ ಸುರಿದರೂ ಜನ ಮಾತ್ರ ಇನ್ನೂ ಅಜ್ಞಾನದಿಂದ ಹೊರಬಂದಂತಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ಪ್ರಯತ್ನಗಳು.
ಅತಿಥಿ- ಅಭ್ಯಾಗತರಿಗೆ ಮದುಮಕ್ಕಳೇ ಉಡುಗೊರೆ ಕೊಟ್ಟ ಅಪರೂಪದ ಮದುವೆ
ಮಕ್ಕಳ ಸಹಾಯವಾಣಿ 1098ರ ದಾಖಲೆಗಳ ಪ್ರಕಾರ 2018ರ ಮಾರ್ಚ್1ರಿಂದ ಮೇ 31ರವರೆಗೆ ಬಾಲ್ಯವಿವಾಹಕ್ಕೆ ಸಂಬಂಧಿಸಿ ಮಕ್ಕಳ ಸಹಾಯವಾಣಿಗೆ ಬಂದ ಕರೆಗಳ ಸಂಖ್ಯೆ 25. ಈ ಪೈಕಿ 19 ಪ್ರಕರಣಗಳಲ್ಲಿ ಬಾಲ್ಯ ವಿವಾಹ ನಿಲ್ಲಿಸಲಾಗಿದೆ.
2015 ಜೂನ್ ನಿಂದ ಈ ಸಹಾಯವಾಣಿ ಮೂಲಕ ತಡೆಯಲ್ಪಟ್ಟ ಬಾಲ್ಯವಿವಾಹಗಳ ಸಂಖ್ಯೆ 132! ವಿಚಿತ್ರವೆಂದರೆ ಈ ಅವಧಿಯಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿ ದಾಖಲಾದ ಎಫ್ಐಆರ್ ಗಳ ಸಂಖ್ಯೆ ಕೇವಲ 8. ಅದೂ 3 ವರ್ಷಗಳ ಅವಧಿಯಲ್ಲಿ.
ಮೂಲಗಳ ಪ್ರಕಾರ ಮಕ್ಕಳ ಸಹಾಯವಾಣಿಯ ಕಣ್ಣು ತಪ್ಪಿಸಲು ಪಕ್ಕದ ತಮಿಳುನಾಡಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಸಿಕೊಂಡು ಬರುವ ಪ್ರವೃತ್ತಿಯೂ ಈಗ ಹೆಚ್ಚುತ್ತಿದೆಯಂತೆ. ಇದನ್ನೆಲ್ಲ ತಡೆಯಬೇಕಾದರೆ ಜನ ಈಗಾಲಾದರೂ ಎಚ್ಚೆತ್ತುಕೊಳ್ಳಬೇಕಿದೆ.