ಇನ್ಮುಂದೆ ಬಂಡೀಪುರದಲ್ಲಿ ಸಸ್ಯಾಹಾರಿ ಪ್ರಾಣಿಗಳಿಗಿಲ್ಲ ಆಹಾರದ ಚಿಂತೆ
ಚಾಮರಾಜನಗರ, ಆಗಸ್ಟ್ 05: ಅರಣ್ಯದಲ್ಲಿ ಹರಡಿ ಬೆಳೆಯುತ್ತಿರುವ ಲಂಟಾನ ಮಾರಕವಾಗಿ ಪರಿಣಮಿಸುತ್ತಿದ್ದು, ಅದನ್ನು ತೆರವುಗೊಳಿಸಿ ಅರಣ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
Recommended Video
ಈಗಾಗಲೇ ಬಂಡೀಪುರ ಅರಣ್ಯದಲ್ಲಿ ಎಲ್ಲೆಂದರಲ್ಲಿ ಲಂಟಾನ ಬೆಳೆದಿದ್ದು ಅವುಗಳಿಂದಾಗಿ ಹುಲ್ಲುಗಳಾಗಲೀ, ಮರ ಗಿಡಗಳಾಗಲೀ ಬೆಳೆಯದೆ ಕಾಡುಗಳಿಗೆ ಸಂಚಕಾರ ತಂದೊಡ್ಡುತ್ತಿವೆ. ಲಂಟಾನ ಜತೆ ಪಾರ್ಥೇನಿಯಂ, ಹಿಪೋಟೊನಿಯಂ ಕೂಡ ವಿಶಾಲವಾಗಿ ಹಬ್ಬಿ ಬೆಳೆಯುತ್ತಿರುವುದರಿಂದ ಅವುಗಳನ್ನು ನಾಶ ಮಾಡಿ ಲಂಟಾನವಿದ್ದ ಅರಣ್ಯ ಪ್ರದೇಶದಲ್ಲಿ ಹುಲ್ಲು ಬೆಳೆಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿರುವುದು ಸಂತಸದ ವಿಚಾರವಾಗಿದೆ.
ಬಂಡೀಪುರದಲ್ಲಿ ಹುಲ್ಲುಗಾವಲು ನಿರ್ಮಾಣ
ನಾಗರಹೊಳೆ ಅಭಯಾರಣ್ಯದಲ್ಲಿ ಹುಲ್ಲು ಬೆಳೆಸುವ ಕಾರ್ಯ ಪ್ರಗತಿಯಲ್ಲಿದ್ದರೆ, ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯ ವ್ಯಾಪ್ತಿಯಲ್ಲಿ ಸುಮಾರು 27 ಹೆಕ್ಟೇರ್ ಪ್ರದೇಶದಲ್ಲಿ ಹುಲ್ಲುಗಾವಲು ನಿರ್ಮಾಣ ಮಾಡುವ ಮೂಲಕ ಯೋಜನೆಗೆ ಮುನ್ನುಡಿ ಬರೆಯಲಾಗುತ್ತಿದೆ. ಈಗಾಗಲೇ ಬಂಡಿಪುರ ಅರಣ್ಯ ಸಂರಕ್ಷಿತ ಪ್ರದೇಶವಾದ ಮದ್ದೂರು ವಲಯದ ನಿಂಗಳ್ಳಿ ಕಾರಪುರ, ಚೆಲುವರಾಜಕಟ್ಟೆ, ಹುಲಿ ಕಟ್ಟೆ ಹಾಗೂ ದಾರಿಪುರ ಕೆರೆ ಪ್ರದೇಶಗಳಲ್ಲಿ27 ಹೆಕ್ಟೇರ್ ಪ್ರದೇಶದಲ್ಲಿ ಉತ್ತಮವಾಗಿ ಹುಲ್ಲು ಬೆಳೆದಿದ್ದು, ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರ ಸಿಕ್ಕಂತಾಗಿದೆ.
ಬಂಡೀಪುರದಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಿ ಕಂದಕ ನಿರ್ಮಾಣ
ಮರಗಿಡಗಳಿಗೆ ಮಾರಕವಾದ ಲಂಟಾನ
ಅರಣ್ಯದ ಮರಗಳ ನಡುವೆ ಪೊದೆಗಳಂತೆ ಹರಡುವ ಲಂಟಾನ ಚಿಕ್ಕದಾದ ಮುಳ್ಳುಗಳಿಂದ ಕೂಡಿದ್ದು, ಕೆಂಪು, ಹಸಿರು, ನೇರಳೆ, ಗುಲಾಬಿ, ಕಿತ್ತಳೆ ಬಣ್ಣದ ಹೂವುಗಳನ್ನು ಬಿಡುತ್ತದೆ. ಅಲ್ಲದೆ ಸುಮಾರು 20 ಅಡಿಗೂ ಹೆಚ್ಚು ಎತ್ತರಕ್ಕೆ ಪೊದೆಯಾಗಿ ಬೆಳೆಯುತ್ತದೆ. ನೆಲದಿಂದ ಪೋಷಕಾಂಶಗಳನ್ನು ಹೀರಿ, ಸೂರ್ಯನ ಬೆಳಕು ನೆಲದ ಮೇಲೆ ಬೀಳದಂತೆ ತಡೆಯುತ್ತದೆ. ಇದರಿಂದಾಗಿ ಇದರಡಿಯಲ್ಲಿ ಯಾವುದೇ ಗಿಡ, ಮರಗಳು ಬೆಳೆಯದೆ ಸಾಯುತ್ತವೆ.
19ನೇ ಶತಮಾನದಲ್ಲಿ ಕಾಲಿಟ್ಟ ಲಂಟಾನ
19ನೇ ಶತಮಾನದಲ್ಲಿ ಆಲಂಕಾರಿಕ ಸಸ್ಯವಾಗಿ ಹೆಜ್ಜೆಯಿಟ್ಟ ಈ ಸಸ್ಯ ಬಹುಬೇಗ ದೇಶದಾದ್ಯಂತ ಹಬ್ಬಿತು. ಒಂದು ಮೂಲದ ಪ್ರಕಾರ ಇದು ದೇಶದಲ್ಲಿ ಸುಮಾರು 13 ದಶಲಕ್ಷ ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಿದೆ. ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇದು ಆಕ್ರಮಣಕಾರಿಯಾಗಿ ಬೆಳೆಯುತ್ತಿರುವುದು ಅರಣ್ಯಕ್ಕೆ ಹಾನಿಕಾರಕವಾಗಿದೆ. ಕಾರಣ ಇದು ಬೆಳೆಯುವಲ್ಲಿ ಬೇರೆ ಯಾವುದೇ ಸಸ್ಯಗಳು ಹುಟ್ಟುವುದಿಲ್ಲ. ಜತೆಗೆ ಬೇಸಿಗೆಯಲ್ಲಿ ಒಣಗುವುದರಿಂದ ಕಾಡ್ಗಿಚ್ಚು ರಭಸದಿಂದ ಹೊತ್ತಿ ಉರಿಯಲು ಕಾರಣವಾಗುತ್ತಿದೆ. ಇದನ್ನು ಅರಣ್ಯದಿಂದ ತೆರವುಗೊಳಿಸಿ ಹುಲ್ಲು ಬೆಳೆಸುವುದು ಕೂಡ ಸವಾಲಾಗಿದೆ. ಆದರೂ ಅರಣ್ಯ ಇಲಾಖೆ ಹಂತ ಹಂತವಾಗಿ ಹುಲ್ಲುಬೆಳೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಬಂಡೀಪುರದಲ್ಲಿ ಏಳು ಸಾವಿರ ಎಕರೆ ಅರಣ್ಯ ಒತ್ತುವರಿಯಾಗಿದೆಯೇ?
ಸಸ್ಯಾಹಾರಿ ಪ್ರಾಣಿಗಳಿಗೆ ದೊರೆಯಲಿದೆ ಆಹಾರ
ಹುಲ್ಲು ಬೆಳೆಸುವುದರಿಂದ ಆಹಾರ ಅಸಮತೋಲನ ಕಡಿಮೆಯಾಗಿ ಕಾಡುಪ್ರಾಣಿಗಳು ಆಹಾರ ಅರಸಿ ಅರಣ್ಯದಂಚಿನ ಜಮೀನುಗಳಿಗೆ ನುಗ್ಗುವುದು ಕಡಿಮೆಯಾಗಲಿದೆ. ಜತೆಗೆ ಒಂದೆಡೆಯಿಂದ ಮತ್ತೊಂದೆಡೆಗೆ ವಲಸೆ ಹೋಗುವುದು ತಪ್ಪಲಿದೆ. ಜಿಂಕೆ, ಕಾಡುಕೋಣಗಳು, ಮೊಲ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಿಗೂ ಆಹಾರ ದೊರಕಲಿದೆ. ಇದರಿಂದ ಮಾಂಸಾಹಾರಿ ಪ್ರಾಣಿಗಳಿಗೂ ಆಹಾರ ದೊರಕಿ ಆಹಾರ ಸರಪಳಿ ಸಮತೋಲನ ಕಾಣಲಿದೆ.
ಸುಮಾರು ಐದು ವರ್ಷ ಅವಧಿಯ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿದ್ದೇ ಆದರೆ ಆಕ್ರಮಣಕಾರಿಯಾಗಿ ಹರಡಿ ಬೆಳೆದಿರುವ ಲಂಟಾನ ನಾಶವಾಗಿ ಹಸಿರುಯುಕ್ತ ವಲಯ ಸೃಷ್ಟಿಯಾಗುವ ಎಲ್ಲ ಸಾಧ್ಯತೆಗಳಿವೆ. ಅರಣ್ಯ ಪ್ರದೇಶದಲ್ಲಿ ಲಂಟಾನ ತೆರವುಗೊಳಿಸಿ ಹುಲ್ಲುಗಾವಲು ನಿರ್ಮಿಸುವ ಯೋಜನೆ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಜಾರಿಗೆ ಬಂದಿದೆ ಎನ್ನಲಾಗಿದೆ.
ಹಚ್ಚಹಸಿರಿನಿಂದ ಕಂಗೊಳಿಸಲಿದೆ ಬಂಡೀಪುರ
ಸದ್ಯ ಬಂಡೀಪುರದ ಮದ್ದೂರು ವಲಯ ವ್ಯಾಪ್ತಿಯಲ್ಲಿ 27 ಹೆಕ್ಟೇರ್ ಪ್ರದೇಶದಲ್ಲಿ ಹುಲ್ಲುಗಾವಲು ನಿರ್ಮಾಣ ಮಾಡಲಾಗಿದ್ದು, ಉಳಿದಂತೆ ಕಲ್ಕೆರೆ, ಮದ್ದೂರು, ಗೋಪಾಲಸ್ವಾಮಿ ಬೆಟ್ಟ ಹಾಗೂ ಮದ್ದೂರು ವಲಯಗಳಲ್ಲಿ ಬೆಳೆಯಲಾಗಿರುವ ಹುಲ್ಲುಗಾವಲು ಪ್ರದೇಶವನ್ನು ಪಿಸಿಸಿಎಫ್ ಗಳಾದ ರಾಜ್ ಕಿಶೋರ್ ಸಿಂಗ್ ಹಾಗೂ ಮಧು ಶರ್ಮ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಂಡೀಪುರ ಅರಣ್ಯದ ಬಹುತೇಕ ಪ್ರದೇಶಗಳು ಹಚ್ಚಹಸಿರಿನಿಂದ ಕಂಗೊಳಿಸುವ ದಿನಗಳು ದೂರವಿಲ್ಲ.