ವರ್ಷದಿಂದ ವರ್ಷಕ್ಕೆ ಈ ಸರ್ಕಾರಿ ಶಾಲೆಗೆ ದಾಖಲಾತಿ ಏರುತ್ತಿರುವುದೇಕೆ?
ಚಾಮರಾಜನಗರ, ನವೆಂಬರ್ 20: ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ರೂಪಿಸಿರುವ ಖ್ಯಾತಿ ಶಾಲೆಯ ಶಿಕ್ಷಕರಿಗೆ ಸಲ್ಲುತ್ತದೆ.
ಕರ್ನಾಟಕ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಒಂದು ಉತ್ತಮ ಶಾಲೆಯನ್ನಾಗಿ ಮಾಡುವಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಕಾರ್ಯಕ್ಷಮತೆಯನ್ನು ಮೆಚ್ಚಲೇಬೇಕು. ಇದೀಗ ಈ ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಕಂಡ ಪಾಲಕರು ಸ್ವಯಂ ಪ್ರೇರಣೆಯಿಂದ ಖಾಸಗಿ ಶಾಲೆ ಬಿಡಿಸಿ ಈ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲಿಸುತ್ತಿರುವುದು ಕಂಡು ಬರುತ್ತಿದೆ.
ಸ್ವಂತ ಹಣದಿಂದ ಶೌಚಾಲಯ
ಶಾಲೆಯ ಮುಖ್ಯಶಿಕ್ಷಕ ರವಿಕುಮಾರ್ ಅವರು ಎಸ್ ಡಿಎಂಸಿ ಸದಸ್ಯರ ಸಹಕಾರದಿಂದ ಸರ್ಕಾರದ ಅನುದಾನದ ಜತೆಗೆ ತಮ್ಮ ಕೈಯಿಂದಲೂ ಹಣ ಖರ್ಚು ಮಾಡಿ ಶಾಲೆಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿದ್ದಾರೆ. ಇದರೊಂದಿಗೆ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಶಾಲೆಯಲ್ಲಿ ನೈರ್ಮಲ್ಯದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಶಿಕ್ಷಕರ ಬದ್ಧತೆ ಶಾಲೆಯ ಮಕ್ಕಳು ಓದು, ಬರಹದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿರಲು ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಐವತ್ತು ರುಪಾಯಿ ಖರ್ಚಿನಲ್ಲೇ ಈ ಶಿಕ್ಷಕರು ಎಂಥ ಅದ್ಭುತ ಮಾಡಿದರು!
ಸಮವಸ್ತ್ರವೂ ವಿಶೇಷ
ಇಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯ ಸಮವಸ್ತ್ರವೂ ಭಿನ್ನ ಎನಿಸುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲೇ ವಾರದಲ್ಲಿ ಎರಡು ದಿನ ಟೀ ಶರ್ಟ್ ಮತ್ತು ಪ್ಯಾಂಟ್ ಸಮವಸ್ತ್ರದ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ, ಶುದ್ಧತೆಗೆ ಇಲ್ಲಿ ಪ್ರಾಮುಖ್ಯ ನೀಡಲಾಗಿದೆ.
ಯುಕೆಜಿಯಿಂದ ಒಂದರವರೆಗೆ ಇಂಗ್ಲಿಷ್ ಮಾಧ್ಯಮ
ಯುಕೆಜಿಯಿಂದ ಒಂದನೇ ತರಗತಿವರಗೆ ಇಂಗ್ಲಿಷ್ ಮಾಧ್ಯಮ ಬೋಧನೆ ಮಾಡಲಾಗುತ್ತಿದೆ. ಶಾಲೆಯಲ್ಲಿ ಯುಕೆಜಿಯಿಂದ ಎಂಟನೇ ತರಗತಿವರಗೆ 495 ಮಕ್ಕಳು ದಾಖಲಾಗಿದ್ದಾರೆ. ಶಾಲೆಯ ಪರಿಸರ, ಶಿಕ್ಷಕರ ಶ್ರಮ ಮತ್ತು ಗುಣಮಟ್ಟದ ಬೋಧನೆಯನ್ನು ಪೋಷಕರು ಮೆಚ್ಚಿದ್ದರಿಂದಲೇ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ.
ಕನ್ನಡ ಶಾಲೆ ಮುಚ್ಚದಂತೆ ಕನ್ನಡಪರ ಹೋರಾಟಗಾರರ ಪ್ರತಿಭಟನೆ
ಮಕ್ಕಳಿಗೆ ಸಾಕಷ್ಟು ಸವಲತ್ತು
ಸರ್ಕಾರಿ ಸೌಲಭ್ಯಗಳನ್ನು ಮಕ್ಕಳಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಶಾಲಾ ಶಿಕ್ಷಕರು ಸೇರಿದಂತೆ ಎಲ್ಲರೂ ಪರಿಶ್ರಮ ವಹಿಸಿ ಕೆಲಸ ಮಾಡುತ್ತಿದ್ದು ಇದು ಶಾಲಾ ಅಭಿವೃದ್ಧಿಗೆ ಮತ್ತು ಶಿಕ್ಷಣ ನೀಡಲು ಸಾಧ್ಯವಾಗಿದೆ. ಇದರೊಂದಿಗೆ ಖಾಸಗಿ ಶಾಲೆಯ ಮಕ್ಕಳಿಗೆ ಸರಿಸಮನಾದ ಸವಲತ್ತುಗಳನ್ನು ನೀಡಲು ಮಾಧ್ಯಮ ಮೇಲುಸ್ತುವಾರಿ ಸಮಿತಿಯವರು ಸಹಕಾರ ನೀಡುತ್ತಿರುವುದು ಸಂತಸದ ವಿಚಾರ. ಇನ್ನು ಶಾಲೆ ಉತ್ತಮವಾಗಿ ಕಾರ್ಯನಿರ್ವಹಿಸಲು ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರವನ್ನು ಪ್ರಾಂಶುಪಾಲರಾದ ನಾಗಪ್ಪ ಹಂಗಳ ಅವರು ಸ್ಮರಿಸುತ್ತಾರೆ.