ಚಾಮರಾಜನಗರದಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಸರ್ಕಾರಿ ಶಾಲೆ
ಚಾಮರಾಜನಗರ, ಜುಲೈ 27: ಚಾಮರಾಜನಗರ ತಾಲೂಕಿನ ಹೊನ್ನೇಗೌಡನ ಗುಂಡಿ ಗ್ರಾಮದಲ್ಲಿ ಕಳೆದ ಐವತ್ತು ವರ್ಷಗಳಿಂದ ಅಕ್ಷರ ದಾಸೋಹ ನಡೆಸಿಕೊಂಡು ಬಂದಿದ್ದ ಸರಕಾರಿ ಶಾಲೆಯೊಂದು 'ಕಣ್ಮುಚ್ಚಿದ' ಸುದ್ದಿ ಬಂದಿದೆ.
ಕರ್ನಾಟಕದ ಗಡಿ ಭಾಗದ ಜಿಲ್ಲೆಗಳ ಪಟ್ಟಿಯಲ್ಲಿ ಬರುವ ಚಾಮರಾಜನಗರದಲ್ಲಿ ಸರಕಾರಿ ಶಾಲೆಗಳ ಮಾರಣಹೋಮದ ಪಟ್ಟಿಗೆ ಇದು ಹೊಸ ಸೇರ್ಪಡೆ ಅಷ್ಟೆ. 1967ರಲ್ಲಿ ಹೋನ್ನೇಗೌಡನ ಗುಂಡಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗಿತ್ತು. ಅಲ್ಲಿಂದ ಇಲ್ಲೀವರೆಗೂ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಜ್ಞಾನ ಸಂಪಾದನೆ ಮಾಡಿದ್ದರು. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಒಬ್ಬೇ ಒಬ್ಬ ವಿದ್ಯಾರ್ಥಿ ಇಲ್ಲಿ ದಾಖಲಾತಿ ಪಡೆಯದ ಹಿನ್ನೆಲೆಯಲ್ಲಿ ಸರಕಾರಿ ಶಾಲೆಯೊಂದು ಅನಿವಾರ್ಯವಾಗಿ ಬಾಗಿಲು ಎಳೆಸಿಕೊಳ್ಳುತ್ತಿದೆ.
ಶ್ರೀನಿವಾಸಪುರದ ವೈ ಹೊಸಕೋಟೆ ಸರಕಾರಿ ಶಾಲೆ; ಅಧಿಕಾರಿಗಳ ಗಿಳಿಪಾಠದ ಉತ್ತರ
ಖಾಸಗಿ ಶಾಲೆಗಳು ಸೃಷ್ಟಿಸಿರುವ ಶಿಕ್ಷಣದ ಅಭಿರುಚಿ ಹಾಗೂ ಆಂಗ್ಲ ಮಾಧ್ಯಮ ನಿರ್ಮಿಸಿರುವ ಮಾರುಕಟ್ಟೆಯ ಅನಿವಾರ್ಯತೆ ಸರಕಾರಿ ಶಾಲೆಗಳ ಮಾರಣಹೋಮಕ್ಕೆ ನಾಂದಿ ಹಾಡಿ ಸುಮಾರು 2 ದಶಕಗಳು ಕಳೆಯುತ್ತಿವೆ. ರಾಜ್ಯದ ಹಲವು ಭಾಗಗಳಲ್ಲಿ ಮಕ್ಕಳಿಲ್ಲದೆ ಸರಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಚಾಮರಾಜನಗರ ತಾಲೂಕಿನಲ್ಲಿ ಈ ಪ್ರಕ್ರಿಯೆ ಇನ್ನಷ್ಟು ಬಿರುಸು ಪಡೆದುಕೊಂಡಿದೆ. ಸದ್ಯ ಹೊನ್ನೇಗೌಡನ ಗುಂಡಿ ಗ್ರಾಮದ ಶಾಲೆ ಹೊಸ ನಿದರ್ಶನ.
ಗ್ರಾಮದಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇಲ್ಲಿ ಹುಟ್ಟುವ ಮಕ್ಕಳಿಗೆ ಸಾಂಪ್ರದಾಯಿಕ ಕಲಿಕೆ ಆರಂಭವಾಗುತ್ತಿದ್ದದ್ದು ಇದೇ ಕಿರಿಯ ಪ್ರಾಥಮಿಕ ಶಾಲೆಯಿಂದ ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.
ಆದರೆ 2011-12ರ ಶೈಕ್ಷಣಿಕ ವರ್ಷದ ಹೊತ್ತಿಗೆ ದಾಖಲಾತಿ ಕಡಿಮೆಯಾಗುತ್ತಾ ಬಂತು. ಆ ವರ್ಷ ಕೇವಲ 9 ಮಕ್ಕಳು ಗ್ರಾಮದ ಸರಕಾರಿ ಶಾಲೆಗೆ ದಾಖಲಾದರು. 2012-13ರಲ್ಲಿ 8, 2013-14ರಲ್ಲಿ 7, 2014-15ರಲ್ಲಿ 10, 2015-16ರಲ್ಲಿ 9, 2016-17ರಲ್ಲಿ 5, 2017-18ರಲ್ಲಿ 4, 2018-19 ಸಾಲಿನಲ್ಲಿ ಇಬ್ಬರು ಮಕ್ಕಳು ಶಾಲೆಗೆ ದಾಖಲಾಗಿದ್ದರು. ಕಳೆದ ವರ್ಷ ಇಡೀ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕರಿಂದಾಗಿ ಉಳಿದುಕೊಂಡಿದ್ದ ಶಾಲೆ, ಈ ಶೈಕ್ಷಣಿಕ ವರ್ಷದಲ್ಲಿ ಯಾವುದೇ ದಾಖಲಾತಿಗಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿದೆ. ಕಳೆದ ವರ್ಷ ದಾಖಲಾತಿ ಪಡೆದ ವಿದ್ಯಾರ್ಥಿಗಳೂ ಈಗ ಖಾಸಗಿ ಶಾಲೆಗೆ ಸೇರ್ಪಡೆಗೊಂಡಿದ್ದಾರೆ.
ಉರುಳುತ್ತಿದ್ದ ಸರ್ಕಾರಿ ಶಾಲೆಯನ್ನು ಉಳಿಸಿದ ಅಪಾರ್ಟ್ಮೆಂಟ್ ನಿವಾಸಿಗಳು
ಸರಕಾರ ಪ್ರಾಥಮಿಕ ಹಂತದಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ಬೋಧನೆಗೆ ಮನಸ್ಸು ಮಾಡಿತ್ತು. ಜತೆಗೆ ಪ್ರೋತ್ಸಾಹಕ ಯೋಜನೆಗಳ ಮೂಲಕ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಮೇಲ್ಮಟ್ಟದ ತಿಳಿವಳಿಕೆಯಲ್ಲಿ ಹುಟ್ಟಿದ ಯೋಜನೆಗಳು ಸರಕಾರಿ ಶಾಲೆಗಳ ಮುಚ್ಚುವಿಕೆಯನ್ನು ತಡೆಯಲು ಸಹಾಯ ಮಾಡುತ್ತಿಲ್ಲ.