ಅಳಲು ತೋಡಿಕೊಂಡ ಗುಂಡ್ಲುಪೇಟೆ ಗಿರಿಜನರ ಸ್ಥಿತಿ ಹೀಗಿದೆ ನೋಡಿ...
ಚಾಮರಾಜನಗರ, ಸೆಪ್ಟೆಂಬರ್.16: ಗುಡಿಸಲು ರಹಿತ ರಾಜ್ಯ ಮಾಡುವುದಾಗಿ ಅಧಿಕಾರಕ್ಕೆ ಬರುವ ಎಲ್ಲ ಸರ್ಕಾರಗಳು ಹೇಳುತ್ತಿವೆಯಾದರೂ ಗುಡಿಸಲಲ್ಲಿ ಜೀವನ ಸಾಗಿಸುವ ಕುಟುಂಬಗಳಿಗೆ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡುವ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ.
ಆಧುನಿಕ ಯುಗದಲ್ಲಿಯೂ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವವರನ್ನು ನಾವು ಇಂದಿಗೂ ಕಾಣಬಹುದಾಗಿದೆ. ಹತ್ತಾರು ವರ್ಷಗಳಿಂದ ನೆಲೆಸಿದ್ದರೂ ಬಹಳಷ್ಟು ಕಡೆ ನೆಲೆಸಿರುವ ಕುಟುಂಬಗಳಿಗೆ ಅವರ ಹೆಸರಿನಲ್ಲಿ ನಿವೇಶನವಿಲ್ಲ.
'ಕಾಡಿನಲ್ಲೆ ಹುಟ್ಟಿ ಕಾಡಿನಲ್ಲೇ ಬದುಕಿ ಸಾಯುತ್ತೇವೆ!'
ಮಳೆ ಬಂದರೆ ಸೋರುವ, ಗಾಳಿ ಬಂದರೆ ಹಾರಿಹೋಗುವಂತಹ ಮೂಲಭೂತ ಸೌಲಭ್ಯಗಳೇ ಇಲ್ಲದ ಗುಡಿಸಲುಗಳಲ್ಲಿ ಜನರು ವಾಸ ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ. ಇಂದಿಗೂ ಗುಂಡ್ಲುಪೇಟೆಯ ನೇನೆಕಟ್ಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಈ ಬಡಾವಣೆಯಲ್ಲಿ ಸುಮಾರು 50ಕ್ಕೂ ಹೆಚ್ಚಿನ ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.
ಮೂಲಭೂತ ಸೌಲಭ್ಯ ವಂಚಿತರಾಗಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಸುಮಾರು 200 ಜನರಿದ್ದು, ಪಂಚಾಯಿತಿ ವತಿಯಿಂದ 37 ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಗಿದೆ. ಆದರೆ ಮನೆ ಕಟ್ಟಲು ಈ ಕುಟುಂಬದವರಿಗೆ ಸಾಧ್ಯವಾಗದ ಕಾರಣದಿಂದ ಇನ್ನೂ ಕೂಡ ಗುಡಿಸಲಲ್ಲೇ ಜೀವನ ಸಾಗಿಸುತ್ತಿದ್ದಾರೆ.
ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ: ಕರಡಿಬೊಕ್ಕೆ ಗಿರಿಜನರ ಕಣ್ಣೀರು
ಇಲ್ಲಿ ನೆಲೆಸಿರುವ ಕುಟುಂಬಗಳ ಪೈಕಿ ಪುರುಷರು ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಕೊಡೆ, ಸ್ಟೌವ್ ಮಿಕ್ಸಿ ರಿಪೇರಿ ಮಾಡಿದರೆ, ಮಹಿಳೆಯರು ತಮ್ಮ ಮಕ್ಕಳೊಂದಿಗೆ ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿರುವವರು ಗಿರಿಜನರಾಗಿದ್ದು ಇಲ್ಲಿನ ಅಭಿವೃದ್ಧಿಗೆ ಈ ಹಿಂದೆಯೇ ಅನುದಾನ ಬಂದಿದ್ದರೂ ಅದನ್ನು ಬಳಕೆ ಮಾಡಿಕೊಂಡಿಲ್ಲ.
ಅನುದಾನ ಹಿಂದಕ್ಕೆ ಹೋಗಿದೆ ಎಂಬ ಆರೋಪವೂ ಇಲ್ಲಿ ಕೇಳಿ ಬರುತ್ತಿದೆ. ಈ ಗಿರಿಜನರು ಡೊಂಗ್ರಿಗೆರೇಸಿಯಾ ಜನಾಂಗದವರಾಗಿದ್ದು, ಸುಮಾರು 40 ವರ್ಷದ ಹಿಂದಿನಿಂದಲೂ ಹುಣಿಸೆತೋಪಿನ ಬಳಿ ಬೀಡುಬಿಟ್ಟಿದ್ದರು. ಆ ನಂತರ 2012ರಲ್ಲಿ ಹೊಂಗೆಮರದ ತಪ್ಪಲಿನಲ್ಲಿ ಗುಡಿಸಲು ಹಾಕಿಕೊಂಡಿದ್ದರು.
ದುಬಾರೆ ಅರಣ್ಯ ಪ್ರವಾಸಿಗರಿಗೆ ಸ್ವರ್ಗ, ಗಿರಿಜನರಿಗೆ ನರಕ
ಆದರೆ ಭಾರೀ ಮಳೆಯಿಂದ ಇವರ ಗುಡಿಸಲುಗಳು ಕೊಚ್ಚಿಹೋದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಎರಡು ಎಕರೆ ಭೂಮಿ ಗುರುತಿಸಿ ಎಲ್ಲರಿಗೂ ಮನೆಗಳು, ಕುಡಿಯುವ ನೀರು ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿ ಅವರನ್ನು ಕರ್ನಾಟಕ ಗೃಹನಿರ್ಮಾಣ ಮಂಡಳಿ ಬಡಾವಣೆಯ ಸಮೀಪಕ್ಕೆ ಸ್ಥಳಾಂತರಿಸಿತು.
ಅಲ್ಲಿಗೆ ಕೈ ತೊಳೆದುಕೊಂಡ ತಾಲೂಕು ಆಡಳಿತ ಬಳಿಕ ಸರ್ಕಾರದಿಂದ ಸೌಲಭ್ಯ ಒದಗಿಸುವ ಕೆಲಸವನ್ನು ಮಾಡಲೇ ಇಲ್ಲ. ಪರಿಣಾಮ ಇವತ್ತು ಈ ಕುಟುಂಬಗಳು ನಿಕೃಷ್ಟ ಬದುಕನ್ನು ಸಾಗಿಸುತ್ತಿವೆ. ಸದ್ಯ ಪರಿಸ್ಥಿತಿಯಲ್ಲಿ ಇಲ್ಲಿ ಮಳೆಬಂದರೂ, ಬಿಸಿಲು ಬಂದರೂ ತೊಂದರೆ ತಪ್ಪಿದಲ್ಲ ಎಂಬಂತಾಗಿದೆ.
ಕೂಡಲೇ ಸಂಬಂಧಿಸಿದವರು ನಮ್ಮತ್ತ ಗಮನಹರಿಸಿ ಅಗತ್ಯ ಸೌಕರ್ಯಗಳನ್ನು ದೊರಕಿಸಿಕೊಡಿ ಎಂದು ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ.