JLRಗೆ ಹಸ್ತಾಂತರವಾಗುತ್ತಾ ಗೋಪಿನಾಥಂ ಮಿಸ್ಟ್ರಿ ಟ್ರೇಲ್ ಕ್ಯಾಂಪ್?
ಚಾಮರಾಜನಗರ, ಅಕ್ಟೋಬರ್ 27: ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿರುವ ಹನೂರು ತಾಲ್ಲೂಕಿನ ಗೋಪಿನಾಥಂ ಸಮೀಪದ ಮಿಸ್ಟ್ರಿ ಟ್ರೇಲ್ ಕ್ಯಾಂಪ್ ನ ನಿರ್ವಹಣೆ ಅರಣ್ಯ ಇಲಾಖೆಗೆ ಕಷ್ಟವಾಗುತ್ತಿರುವುದರಿಂದ ಅದನ್ನು ಸರ್ಕಾರಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ (ಜೆಎಲ್ಆರ್)ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದ್ದು, ಇದು ಪರಿಸರ ಪ್ರಿಯರಿಗೆ ಬೇಸರ ತಂದಿದೆ.
ಇದಕ್ಕೆ ಕಾರಣವೂ ಇದ್ದು, ಅರಣ್ಯ ಇಲಾಖೆಯ ಒಡೆತನದಲ್ಲಿರುವ ಕ್ಯಾಂಪ್ ನಲ್ಲಿ ತಂಗುವುದಕ್ಕೆ ನಿಗದಿಪಡಿಸಿರುವ ಬೆಲೆ ಅತ್ಯಂತ ಕಡಿಮೆ ಇದ್ದು, ಪರಿಸರದ ಬಗ್ಗೆ ಆಸಕ್ತಿವುಳ್ಳ ಸಾಮಾನ್ಯ ಜನರು ಕೂಡ ಇಲ್ಲಿ ಉಳಿದುಕೊಳ್ಳಬಹುದಾಗಿದೆ. ಆದರೆ, ಜೆಎಲ್ಆರ್ ಗೆ ನೀಡಿದ ನಂತರ ಸಾಮಾನ್ಯ ಜನರಿಗೆ ಅಲ್ಲಿ ಉಳಿದುಕೊಳ್ಳಲು ಸಾಧ್ಯವೇ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಮುಂದೆ ಓದಿ...
ಜನಸಾಮಾನ್ಯರ ವಾಸ್ತವ್ಯ ಸಾಧ್ಯವಿಲ್ಲ
ಕ್ಯಾಂಪ್ ಸಿರಿವಂತರಿಗೆ ಮಾತ್ರ ಕೈಗೆಟುಕಲಿದೆ ಎಂಬುದು ಜನ ಸಾಮಾನ್ಯರ ಆರೋಪವಾಗಿದೆ. ಕ್ಯಾಂಪ್ನಲ್ಲಿ ಅರಣ್ಯ ಇಲಾಖೆಯು ಪ್ರತಿ ಟೆಂಟ್ ಗೆ 1,600 ರೂ. ದರ ನಿಗದಿ ಪಡಿಸಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಜೆಎಲ್ಆರ್ ನಿರ್ವಹಿಸುತ್ತಿರುವ ಲಾಡ್ಜ್, ರೆಸಾರ್ಟ್ ಗಳ ದಿನದ ಬಾಡಿಗೆ ಏಳೆಂಟು ಸಾವಿರ ರೂಪಾಯಿಯಷ್ಟು ಇರುತ್ತದೆ. ಜತೆಗೆ ಇದರ ದರ ನಿಗದಿಪಡಿಸುವ ಅಧಿಕಾರವೂ ಅವರದ್ದೇ ಆಗಿರುತ್ತದೆ. ಇದರಿಂದ ದುಬಾರಿ ಹಣ ನೀಡಿ ಜನ ಸಾಮಾನ್ಯರು ಅಲ್ಲಿಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ.
ಅರಣ್ಯದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಡಿಆರ್ ಎಫ್ಒಗಳ ವಿಶೇಷ ತಂಡ ರಚನೆ
ಅರಣ್ಯ ನಿಯಮ ಪಾಲಿಸದ ಆರೋಪ
ಇನ್ನೊಂದೆಡೆ ಅರಣ್ಯ ಪ್ರದೇಶದ ಒಳಗಿರುವ ವಸತಿ ಗೃಹ, ನಿರೀಕ್ಷಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಹಾಗೂ ವಾಣಿಜ್ಯ ಉದ್ದೇಶದ ಸಂಸ್ಥೆಗಳಿಗೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರಿ ಸಮಿತಿ 2018ರಲ್ಲಿ ಹೇಳಿದೆ. ಗಾಳಿಬೋರೆ, ಭೀಮೇಶ್ವರಿ ಹಾಗೂ ಬಿಆರ್ಟಿಯ ಕೆ.ಗುಡಿಯಲ್ಲೂ ಜೆಎಲ್ಆರ್ ರೆಸಾರ್ಟ್ ಗಳನ್ನು ನಡೆಸುತ್ತಿದೆ. ಇದಕ್ಕೆ ಯಾವುದೇ ಪೂರ್ವಾನುಮತಿ ಪಡೆದಿಲ್ಲ ಎನ್ನಲಾಗಿದೆ. ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅನ್ವಯ, ಈ ರೆಸಾರ್ಟ್ ಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಹಾಗೂ ಕೇಂದ್ರ ಪರಿಸರ ಸಚಿವಾಲಯ ವತಿಯಿಂದ ಸೂಕ್ತ ಅನುಮತಿ ಪಡೆಯುವಂತೆ ಆದೇಶಿಸಲಾಗಿದೆ. ಆದರೆ ಇದನ್ನು ಪಾಲಿಸುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.
ಹಲವು ಸಭೆ ಸಮಾರಂಭಕ್ಕೆ ವೇದಿಕೆ
ಇದೀಗ ಪ್ರವಾಸಿಗರಿಗೆ ಭೇಟಿಗೆ ಅವಕಾಶ ನೀಡುತ್ತಿದ್ದರೂ, ಹೆಚ್ಚಿನ ಮನೋರಂಜನಾ ಚಟುವಟಿಕೆಗಳಿಗೆ ಇಲ್ಲಿ ಅವಕಾಶ ಇಲ್ಲ. ಜೊತೆಗೆ, ಎರಡು ರಾಜ್ಯಗಳ ಗಡಿ ಭಾಗದಲ್ಲಿ ಕ್ಯಾಂಪ್ ಇರುವುದರಿಂದ ಹಲವು ಸಭೆಗಳಿಗೆ ಇದು ವೇದಿಕೆಯಾಗಿದೆ. ಎರಡು ರಾಜ್ಯಗಳ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳು ಇಲ್ಲಿ ಸಭೆಗಳನ್ನು ನಡೆಸುವ ಮೂಲಕ ಗಡಿಭಾಗದಲ್ಲಾಗುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸುತ್ತಾ ಬಂದಿವೆ. ಕ್ಯಾಂಪ್ ಹಸ್ತಾಂತರಿಸುವುದರಿಂದ ಅಂತಹ ಸಭೆಗಳನ್ನು ನಡೆಸುವುದಕ್ಕೆ ಅವಕಾಶ ಇರುವುದಿಲ್ಲ ಎನ್ನಲಾಗುತ್ತಿದೆ.
Recommended Video
ಕ್ಯಾಂಪ್ ನಿರ್ವಹಣೆ ಕಷ್ಟ ಸಾಧ್ಯವಂತೆ
ಮಿಸ್ಟ್ರಿ ಟ್ರೇಲ್ ಕ್ಯಾಂಪ್ ಅರಣ್ಯ ಇಲಾಖೆ ವಶದಲ್ಲಿರುವುದರಿಂದ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಮುಂದೆ ಬೇರೆ ಸಂಸ್ಥೆ ನಿರ್ವಹಿಸುವುದರಿಂದ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದಂತಾಗುತ್ತದೆ ಎಂಬ ಆತಂಕವೂ ಇಲ್ಲದಿಲ್ಲ. ಕ್ಯಾಂಪ್ ನಿರ್ವಹಣೆ ಕಷ್ಟವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿಲ್ಲ ಎಂಬ ನೆಪವೊಡ್ಡಿ ಅರಣ್ಯ ಇಲಾಖೆ ಕ್ಯಾಂಪ್ ಅನ್ನು ಜೆಎಲ್ಆರ್ ವಶಕ್ಕೆ ನೀಡುತ್ತಿದೆ. ಪ್ರವಾಸೋದ್ಯಮ ಉದ್ದೇಶಕ್ಕೆ ಕ್ಯಾಂಪ್ ಬಳಕೆಯಾಗುವುದರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾಗ ಬಹುದೆಂಬ ಭಯವೂ ಇಲ್ಲದಿಲ್ಲ.