ಚಾಮರಾಜನಗರದಲ್ಲಿ ಮಳೆ; ಗೋಪಿನಾಥಂ ಸೇತುವೆ ಜಲಾವೃತ
ಚಾಮರಾಜನಗರ, ಆಗಸ್ಟ್, 04: ಚಾಮರಾಜನಗರ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳ ಉಕ್ಕಿ ಹರಿಯುತ್ತಿದ್ದು, ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಮೆಟ್ಟೂರು ಜಲಾಶಯದ ಹಿನ್ನೀರು ಹೆಚ್ಚಾದ ಪರಿಣಾಮ ಹನೂರು ತಾಲೂಕಿನ ಗೋಪಿನಾಥಂನ ಚಿಕ್ಕ ಸೇತುವೆ ಸಂಪೂರ್ಣ ಜಲಾವೃತವಾಗಿದೆ.
ಗೋಪಿನಾಥಂನಿಂದ ಆಲಂಬಾಡಿ, ಜಂಬಲ್ ಪಟ್ಟಿ, ಮಾರಿಕೊಟ್ಟಾಯಂ ಹಾಗೂ ಹೊಗೆನಕಲ್ ಜಲಪಾತಕ್ಕೆ ತೆರಳುವ ಮಾರ್ಗ ಕಡಿತಗೊಂಡಿದೆ. ಹೊಗೆನಕಲ್ ಬಳಿ ನೀರು ಸೇತುವೆ ಮೇಲೆ ಹರಿದ ಕಾರಣ ಸಾರಿಗೆ ಸಂಸ್ಥೆ ಬಸ್ವೊಂದು ಅರ್ಧದಲ್ಲಿಯೇ ನಿಂತಿದ್ದು, ಪ್ರಯಾಣಿಕರು ಪರದಾಡಿದ್ದಾರೆ.
ಚಾಮರಾಜನಗರ ಡ್ಯಾಂಗಳ ಅಭಿವೃದ್ಧಿಗೆ ಕ್ರಮ; ನಿಜಗುಣರಾಜು
ಸ್ವಲ್ಪ ಸಮಯದ ನಂತರ ಬಸ್ ಅನ್ನು ನೀರಿನಿಂದ ಹೊರಗೆ ತರಲು ಸಿಬ್ಬಂದಿಗಳು ಹರಸಾಹಸವನ್ನೇ ಪಟ್ಟರು. ನದಿಗಳು ಉಕ್ಕಿ ಹರಿಯುತ್ತಿರುವ ಕಾರಣ ಆ ಮಾರ್ಗದಲ್ಲಿ ಸಾರಿಗೆ ಸಂಚಾರ ಸ್ಥಗಿತವಾಗುವ ಎಲ್ಲಾ ಲಕ್ಷಣಗಳು ಎದ್ದುಕಾಣುತ್ತಿವೆ.
ಮಳೆ ಹೆಚ್ಚಾಗಿ ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಶಾಲೆಗೆ ಹಲವು ಮಕ್ಕಳು ಹಾಜರಾಗಿಲ್ಲ ಎಂದು ಗೋಪಿನಾಥಂ ಗ್ರಾಮದ ಸ್ಥಳೀಯರು ತಿಳಿಸಿದ್ದಾರೆ. ಹಳ್ಳ, ಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಮಕ್ಕಳು ಅತಂಕಕ್ಕೆ ಒಳಗಾಗಿ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮಳೆ ಅಬ್ಬರದ ಭಯದಿಂದ ಪೋಷಕರು ಕೂಡ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ತಿರಸ್ಕರಿಸುತ್ತಿದ್ದಾರೆ.
ಮತ್ತೊಂದೆಡೆ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಹೊಗೆನಕಲ್ ಜಲಪಾತದಲ್ಲಿ ನೀರಿನ ರಭಸ ಹೆಚ್ಚಾದ ಹಿನ್ನೆಲೆಯಲ್ಲಿ ಮೊಸಳೆಯೊಂದು ದರ್ಶನ ನೀಡಿದೆ. ಭಾರೀ ಗಾತ್ರದ ಮೊಸಳೆಯೊಂದು ದಡದಲ್ಲಿ ಬಂದು ಠಿಕಾಣಿ ಹೂಡಿದ್ದ ವಿಡಿಯೋವೊಂದನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.
ಇನ್ನು ಚಾಮರಾಜನಗರ ಜಿಲ್ಲೆಯ ಹಲವೆಡೆ ಬೆಳಗ್ಗೆಯಿಂದಲೂ ಬಿಟ್ಟು ಬಿಡದೇ ಜೋರಾಗಿ ಮಳೆಯಾಗುತ್ತಿದ್ದು, ಕೊಳ್ಳೇಗಾಲದ 7-8 ಊರುಗಳು ಮತ್ತೇ ನೆರೆ ಭೀತಿಯಲ್ಲಿವೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ ಹಲವು ಗ್ರಾಮಗಳ ಜನರಿಗೆ ಆತಂಕ ಶುರುವಾಗಿದೆ.
Recommended Video