ಬಣ್ಣಾರಿ-ದಿಂಭಂ ಘಾಟ್ನಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧ
ಚಾಮರಾಜನಗರ, ಫೆಬ್ರವರಿ 12 : ಬಣ್ಣಾರಿ-ದಿಂಭಂ ಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 948 ಹಾದು ಹೋಗುತ್ತದೆ.
ರಸ್ತೆ ಸುರಕ್ಷತಾ ಸಮಿತಿಯ ತೀರ್ಮಾನದಂತೆ ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯ ತನಕ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಕಾಡುಪ್ರಾಣಿಗಳ ಹಿತದೃಷ್ಠಿಯಿಂದ ಈರೋಡ್ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ.
ಬಂಡೀಪುರದ ಮೇಲೆ ಮತ್ತೆ ಕೇರಳ ಕಣ್ಣು: ರಸ್ತೆಗೆ 500 ಕೋಟಿ ರೂ ಮೀಸಲು
ವಾಹನಗಳ ವೇಗದ ಮಿತಿಯನ್ನು ಗಂಟೆಗೆ 30 ಕಿ.ಮೀ.ಗೆ ನಿಗದಿ ಪಡಿಸಲಾಗಿದೆ. ಘಾಟ್ನಲ್ಲಿನ 27 ಹೇರ್ ಪಿನ್ ತಿರುವಿನಲ್ಲಿ 12ಕ್ಕಿಂತ ಹೆಚ್ಚು ಚಕ್ರಗಳನ್ನು ಹೊಂದಿರುವ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಪರಿಸರ ಪ್ರೇಮಿಗಳಿಗೆ ಜಯ : ಬಂಡೀಪುರದಲ್ಲಿ ಎಲಿವೇಟೆಡ್ ರಸ್ತೆ ಇಲ್ಲ
ಬಣ್ಣಾರಿ ಮತ್ತು ಹಾಸನೂರು ಚೆಕ್ಪೋಸ್ಟ್ಗಳಲ್ಲಿ ವಾಹನಗಳ ತೂಕವನ್ನು ಪರಿಶೀಲಿಸಿದ ನಂತರ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತೆ ಈ ರಸ್ತೆ ಇದೆ.
ಬಂಡೀಪುರ: ಮನುಷ್ಯರ ತೆವಲಿಗೆ ವನ್ಯಪ್ರಾಣಿಗಳು ಬಲಿಯಾಗಬೇಕೇ?
ಈ ಪ್ರದೇಶದಲ್ಲಿ ಹಾದು ಹೋಗುವ ವಾಹನಗಳಿಗೆ ಪ್ರವೇಶ ಶುಲ್ಕವನ್ನು ಸಹ ನಿಗದಿ ಮಾಡಲಾಗಿದೆ. ಸರ್ಕಾರಿ, ತುರ್ತು ವಾಹನಗಳಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಚೆಕ್ಪೋಸ್ಟ್ನಲ್ಲಿ ಶುಲ್ಕ ಪಾವತಿ ಮಾಡಬೇಕು.
ಶುಲ್ಕದ ವಿವರ : 4 ಚಕ್ರದ ವಾಹನ 20, ವ್ಯಾನ್ 30, ಲಘು ಮತ್ತು ಭಾರಿ ವಾಣಿಜ್ಯ 4 ಚಕ್ರಗಳ ವಾಹನ, ಚಿಕ್ಕಲಾರಿ 20, 6 ಚಕ್ರದ ವಾಹನಕ್ಕೆ 50, 8 ಚಕ್ರದ ವಾಹನಗಳಿಗೆ 60, 10 ಚಕ್ರದ ವಾಹನಗಳಿಗೆ 80, 12 ಚಕ್ರದ ವಾಹನಗಳಿಗೆ 100 ರೂ. ಶುಲ್ಕ ನಿಗದಿ ಮಾಡಲಾಗಿದೆ.