ಮುಗ್ಧ ಮಗುವಿನ ಕಣ್ಣನ್ನೇ ಇಲ್ಲವಾಗಿಸಿದ ಚಾಮರಾಜನಗರದ ನಕಲಿ ವೈದ್ಯೆ
ಚಾಮರಾಜನಗರ, ಜನವರಿ 06: ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ನಕಲಿ ವೈದ್ಯರು ನೀಡಿದ ಔಷಧಿ ಕಣ್ಣನ್ನೇ ಕಿತ್ತುಕೊಳ್ಳುವಂತೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ನಡೆದಿದೆ.
ಕುಮಾರ್ ಎಂಬುವರ ಪುತ್ರಿ ನಾಲ್ಕು ವರ್ಷದ ದೀಕ್ಷಿತಾ, ನಕಲಿ ವೈದ್ಯೆ ನೀಡಿದ ಔಷಧಿಗೆ ಕಣ್ಣು ಕಳೆದು ಕೊಂಡಿದ್ದು, ತೆರಕಣಾಂಬಿಯಲ್ಲಿ ಕ್ಲೀನಿಕ್ ನಡೆಸುತ್ತಿರುವ ವೈದ್ಯೆ ಎಂದು ಹೇಳಿಕೊಳ್ಳುತ್ತಿರುವ ಡಾ. ಕೋಕಿಲಾ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಚಿತೆಯಿಂದೆದ್ದ ಮಗು! ಇದು ಪವಾಡವಲ್ಲ, ವೈದ್ಯರ ಬೇಜವಾಬ್ದಾರಿ!
ಕೋಕಿಲ ಅವರು ತಾನು ವಾಸ ಮಾಡುವ ಮನೆಯ ಕೆಳಭಾಗದಲ್ಲಿ ನಾಮಫಲಕವಿಲ್ಲದೆ ಕ್ಲೀನಿಕ್ ನಡೆಸುತ್ತಿದ್ದಾರೆ. ಕಳೆದ ಅಕ್ಟೋಬರ್ 21ರಂದು ಈ ಕ್ಲೀನಿಕ್ ಗೆ ಕುಮಾರ್ ತನ್ನ ಪುತ್ರಿ ದೀಕ್ಷಿತಾಳನ್ನು ಕರೆದುಕೊಂಡು ಹೋಗಿ, ಜ್ವರಕ್ಕೆ ಔಷಧಿ ನೀಡುವಂತೆ ಹೇಳಿದ್ದಾರೆ. ಜ್ವರ ಇರುವುದನ್ನು ನೋಡಿ ಕೆಲವು ಮಾತ್ರೆ ಹಾಗೂ ಔಷಧಿಗಳನ್ನು ನೀಡಿ ಕಳುಹಿಸಿದ್ದಾರೆ. ಆ ಔಷಧಿಯನ್ನು ಕುಮಾರ್ ತಮ್ಮ ಮಗುವಿಗೆ ನೀಡಿದ್ದಾರೆ.
ಆದರೆ ಮಗುವಿನ ಜ್ವರ ಮಾತ್ರ ಕಡಿಮೆಯಾಗಲಿಲ್ಲ. ಜತೆಗೆ ಕಣ್ಣು ಊದಿಕೊಂಡು ಮಗು ಅಳತೊಡಗಿತ್ತು. ಒಂದೆರಡು ದಿನಗಳ ಬಳಿಕ ಕುಮಾರ್ ತನ್ನ ಮಗುವನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗುವಿನ ಪರಿಸ್ಥಿತಿ ಕಂಡು ಬೆರಗಾದ ವೈದ್ಯರು ಕೂಡಲೇ ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.
ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ನೀಡಲಾಯಿತಾದರೂ ಮಗುವಿನ ಕಣ್ಣಿನಲ್ಲಿ ದೃಷ್ಠಿ ಮಾತ್ರ ಬರಲೇ ಇಲ್ಲ. ಇದೀಗ ಮಗು ದೃಷ್ಠಿ ವಂಚಿತವಾಗಿದೆ. ಮುಂದೆ ಬದುಕಿ ಬಾಳಬೇಕಾಗಿದ್ದ ಮಗು ದೃಷ್ಟಿಕಳೆದುಕೊಂಡಿದೆ. ಈ ಕುರಿತು ಮಗುವಿನ ತಂದೆ ಕುಮಾರ್ ಅವರು ತನ್ನ ಮಗು ದೃಷ್ಟಿ ಕಳೆದುಕೊಳ್ಳಲು ಡಾ.ಕೋಕಿಲ ನೀಡಿರುವ ಔಷಧಿಯೇ ಕಾರಣ ಎಂದು ಆರೋಪಿಸುತ್ತಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೂ ಪ್ರಯೋಜನವಾಗಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಡಾ.ಕೋಕಿಲ ಅವರ ವಿರುದ್ಧ ಹಿಂದಿನಿಂದಲೂ ಆರೋಪಗಳಿದ್ದು, ಹಿಂದೊಮ್ಮೆ ದಾಳಿ ನಡೆಸಿ ಕ್ಲಿನಿಕ್ ಬಾಗಿಲು ಮುಚ್ಚಿಸಲಾಗಿತ್ತು. ಆದರೂ ಮತ್ತೆ ಕ್ಲಿನಿಕ್ ಬಾಗಿಲು ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಂಡು ಅವರು ನಿಜವಾಗಿಯೂ ವೈದ್ಯರೇ ಅಥವಾ ನಕಲಿ ವೈದ್ಯರೇ ಎಂಬುದನ್ನು ಬಯಲು ಮಾಡಬೇಕಿದೆ ಎಂದಿದ್ದಾರೆ.
ಈಗಾಗಲೇ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದ್ದು, ಚಿಕಿತ್ಸೆ ನೀಡುವ ನೆಪದಲ್ಲಿ ಸುಲಿಗೆ ಮಾಡುತ್ತಾ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದವರು ಎಚ್ಚರವಾಗಿರುವುದು ಒಳ್ಳೆಯದು.