ಕೇರಳಕ್ಕೆ ನಮ್ಮ ರಾಜ್ಯದ ಗುಂಡ್ಲುಪೇಟೆಯೇ ಕಸದ ತೊಟ್ಟಿ
ಚಾಮರಾಜನಗರ, ಅಕ್ಟೋಬರ್ 8: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಗರದ ಒಂದು ಭಾಗವನ್ನು ಕೇರಳಿಗರು ಅಕ್ಷರಶಃ ಕಸದ ತೊಟ್ಟಿಯನ್ನಾಗಿ ಮಾರ್ಪಡಿಸಿದ್ದಾರೆ. ಕೇರಳ ಗಡಿಗೆ ಸಮೀಪವೇ ಇರುವ ಈ ಊರಿಗೆ ಕೇರಳಿಗರು ಇಲ್ಲಿ ತಂದು ನಿತ್ಯವೂ ತ್ಯಾಜ್ಯ ಸುರಿಯುತ್ತಿದ್ದಾರೆ.
ಇಷ್ಟಾಗುತ್ತಿದ್ದರೂ ಚಾಮರಾಜನಗರ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಈ ಹಿಂದೆ ಕೊಡಗು ಜಿಲ್ಲೆಯ ಪೆರುಂಬಾಡಿ ಗಡಿ ಸಮೀಪದಲ್ಲೂ ಕೇರಳಿಗರು ಲಾರಿಗಳಲ್ಲಿ ಮೆಡಿಕಲ್ ತ್ಯಾಜ್ಯ ತಂದು ಸುರಿಯುತ್ತಿದ್ದರು. ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಲಾರಿಗಳನ್ನು ಸೀಜ್ ಮಾಡಿತು. ನಂತರ ಕಸ ಸುರಿಯುವ ಸಮಸ್ಯೆ ಬಂದಿಲ್ಲ.
ಆದರೆ ಗುಂಡ್ಲುಪೇಟೆ ಪುರಸಭೆ ಕಸ ಸುರಿಯಲು ಜಾಗವೊಂದನ್ನು ಗುರುತು ಮಾಡಿದೆ. ಇದು ಊರಿನ ಕಸ ಸುರಿಯಲು ಗುರುತಿಸಿರುವ ಸ್ಥಳ. ಆದರೆ ಕೇರಳಿಗರು ಕರ್ನಾಟಕದ ಗಡಿ ದಾಟಿ ಟೆಂಪೋ, ಲಾರಿಗಳಲ್ಲಿ ತ್ಯಾಜ್ಯ ತಂದು ಈ ಜಾಗದಲ್ಲೇ ಸುರಿಯುತ್ತಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯ, ಮಾಂಸದಂಗಡಿಗಳ ತ್ಯಾಜ್ಯ, ಕೊಳೆತ ತರಕಾರಿ ಮತ್ತಿತರ ವಸ್ತುಗಳನ್ನು ತಂದು ಇಲ್ಲಿ ಹಾಕಲಾಗುತ್ತಿದೆ. ಗುಂಡ್ಲುಪೇಟೆ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ-766 ರ ಪಕ್ಕದಲ್ಲೇ ಪುರಸಭೆಯ ಕಸ ಸುರಿಯುವ ಜಾಗ ಇದೆ. ಹೀಗಾಗಿ ಹೆದ್ದಾರಿಯಲ್ಲಿ ಬಂದು ಇಲ್ಲಿ ಕಸ ಸುರಿಯಲಾಗುತ್ತಿದೆ.
ಕೇರಳ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಇದೆ. ಯಾವ ವಾಹನ ರಾಜ್ಯಕ್ಕೆ ಪ್ರವೇಶ ಪಡೆಯುತ್ತಿದೆ ಎಂಬಿತ್ಯಾದಿ ವಿಚಾರಗಳನ್ನು ಚೆಕ್ ಪೋಸ್ಟ್ ನಲ್ಲಿ ಗಮನಿಸಬೇಕು. ಆದರೆ ಚಾಮರಾಜನಗರ ಜಿಲ್ಲಾಡಳಿತ ಮಾತ್ರ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
Recommended Video
ಇನ್ನೊಂದೆಡೆ ಪುರಸಭೆಯವರು ನಿತ್ಯ ಲಾರಿಗಟ್ಟಲೆ ಕಸ ತಂದು ರಾಶಿ ಹಾಕುತ್ತಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದನ್ನು ಬಿಟ್ಟು ಕಸದ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಉಸಿರಾಟದ ಸಮಸ್ಯೆಯ ಜೊತೆಗೆ ಪರಿಸರ ಮಾಲಿನ್ಯ, ರೋಗರುಜಿನ ಹರಡುವ ಆತಂಕ ಸ್ಥಳೀಯ ಜನರಿಗೆ ಕಾಡುತ್ತಿದೆ.