ಗಾಂಧಿ ಪುರಸ್ಕೃತ ಗ್ರಾಮವಿದು ಎಂದು ಆಣೆ ಮಾಡಿ ಹೇಳ್ಬೇಕು!
ಎರಡು ಬಾರಿ ಗಾಂಧಿ ಪುರಸ್ಕಾರವನ್ನು ಪಡೆದಿದ್ದ ಹಂಗಳ ಗ್ರಾಮದಲ್ಲಿ ಈಗ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ.
ಚಾಮರಾಜನಗರ, ಅಕ್ಟೋಬರ್ 28: ಗಾಂಧಿ ಪುರಸ್ಕಾರ ಪಡೆದು ಮಾದರಿ ಗ್ರಾಮ ಎಂಬ ಪ್ರಶಂಸೆಗೆ ಪಾತ್ರವಾಗಿದ್ದ ಗ್ರಾಮವೊಂದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ಗಬ್ಬೆದ್ದು ನಾರುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಗೆ ಬಂದು ತಲುಪಿದೆ.
ಎರಡು ಬಾರಿ ಗಾಂಧಿ ಪುರಸ್ಕಾರವನ್ನು ಪಡೆದಿದ್ದ ಗ್ರಾಮದ ಪರಿಸ್ಥಿತಿಯನ್ನು ಇದೀಗ ನೋಡಿದರೆ ಗಾಂಧಿ ಪುರಸ್ಕಾರ ಪಡೆದ ಗ್ರಾಮ ಇದೇನಾ ಎಂಬ ಸಂಶಯ ಮೂಡುತ್ತದೆ. ಗ್ರಾಮ ಮಟ್ಟದಲ್ಲಿ ಸ್ವಚ್ಛತಾ ಆಂದೋಲನಗಳು ಎಡೆಬಿಡದೆ ನಡೆಯುತ್ತಿದ್ದರೆ, ಈ ಗ್ರಾಮದಲ್ಲಿ ಅದು ಮರೀಚಿಕೆಯಾಗಿದೆ. ಹಾಗಾದರೆ ಇದ್ಯಾವುದಪ್ಪಾ ಆ ಗ್ರಾಮ ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದಲ್ಲವೆ?[ಬಂಡಳ್ಳಿ ಗ್ರಾಮ ಪಂಚಾಯಿತಿ ಬಲೇ ಗಲೀಜು ಕಣ್ರೀ..!]
ಪ್ರವಾಸಿಗರ ಹಿಡಿಶಾಪ: ಗುಂಡ್ಲುಪೇಟೆ ಪಟ್ಟಣದಿಂದ ಊಟಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 67ರ ಬದಿಯಲ್ಲಿರುವ ಹಂಗಳ ಗ್ರಾಮದ ಬಗ್ಗೆ ಈ ವರದಿ. ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವವರು ಈ ಗ್ರಾಮದ ಮೂಲಕವೇ ತೆರಳುತ್ತಾರೆ. ಹೀಗೆ ತೆರಳುವ ಪ್ರವಾಸಿಗರು ಗ್ರಾಮದಲ್ಲಿನ ಅಶುಚಿತ್ವ ನೋಡಿ ಹಿಡಿಶಾಪ ಹಾಕುತ್ತಾರೆ. ಹೀಗಿರುವಾಗ ಅಲ್ಲಿಯೇ ವಾಸಿಸುವ ಗ್ರಾಮಸ್ಥರ ಪರಿಸ್ಥಿತಿ ಹೇಗಿರಬಹುದು?
ಇಲ್ಲಿಗೆ ಭೇಟಿ ನೀಡಿದವರಿಗೆ ರಸ್ತೆಯುದ್ದಕ್ಕೂ ಹರಡಿ ಬಿದ್ದ ಕಸದ ರಾಶಿ, ಚರಂಡಿಗಳಲ್ಲಿ ತ್ಯಾಜ್ಯ, ರಸ್ತೆ ಮೇಲೆ ಹರಿಯುವ ಕೊಳಚೆ ನೀರು ಮತ್ತು ಅದರಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳು. ಕಸದ ತೊಟ್ಟಿ ತುಂಬಿದ್ದರೂ ವಿಲೇವಾರಿಯಾಗದ ಕಸದ ರಾಶಿಗಳು.. ಹೀಗೆ ಅನೈರ್ಮಲ್ಯಕ್ಕೆ ಪೂರಕವಾದ ಅಸಹ್ಯಕರ ದೃಶ್ಯಗಳು ಗೋಚರಿಸುತ್ತವೆ.[ಸ್ವಚ್ಛ ಕುಶಾಲನಗರಕ್ಕಾಗಿ ಕಸದ ಮೇಲೆ ಧರಣಿ!]
ಮೂಗು ಮುಚ್ಚುವ ಜನ: ಇಲ್ಲಿನ ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ತಲೆದೋರಿದೆ. ಜತೆಗೆ ಎಲ್ಲೆಂದರಲ್ಲಿ ಕೊಳಚೆ ನೀರು ಸಂಗ್ರಹವಾಗುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಇನ್ನು ಗ್ರಾಮದಲ್ಲಿ ಅಗತ್ಯವಿರುವ ಕಡೆ ಬೀದಿ ದೀಪ ಬಿಟ್ಟು ಎಲ್ಲೆಂದರಲ್ಲಿ ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಗ್ರಾಮದಲ್ಲಿ ಶುಚಿತ್ವವೇ ಇಲ್ಲ ಎಂದ ಮೇಲೆ ಬೀದಿ ನಾಯಿಗಳು, ಹಂದಿಗಳು ಕಸದ ರಾಶಿಯಲ್ಲಿ ಹೊರಳಾಡುತ್ತಾ ಎಲ್ಲೆಂದರಲ್ಲಿ ಓಡಾಡುತ್ತಾ ತೊಂದರೆ ನೀಡುತ್ತಿವೆ.
ಗ್ರಾಮಕ್ಕೆ ಶೋಭೆಯೆ?: ಈಗಾಗಲೇ ಕಂದಾಯ ವಸೂಲಾತಿಯಲ್ಲಿ ಮಾಡಿದ ಸಾಧನೆಯನ್ನು ಗಮನಿಸಿದ ಗ್ರಾಮೀಣ ಅಭಿವೃದ್ಧಿ ಇಲಾಖೆ ಎರಡು ಬಾರಿ ಈ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿದೆ. ಹೀಗಿರುವಾಗ ಅಶುಚಿತ್ವ ಗ್ರಾಮಕ್ಕೆ ಶೋಭೆ ತರದು ಎಂಬುದನ್ನು ಸಂಬಂಧಿಸಿದವರು ಅರಿಯಬೇಕಿದೆ.[ಸ್ವಚ್ಛ ಬೆಂಗಳೂರಿಗಾಗಿ ನೀವು ಸಹಿ ಮಾಡಬಹುದು]
ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರ ಕೊರತೆಯಿದ್ದು, ಗುಂಡ್ಲುಪೇಟೆ ಪುರಸಭೆಯಿಂದ 15 ದಿನಗಳಿಗೊಮ್ಮೆ ಪೌರಕಾರ್ಮಿಕರನ್ನು ಕರೆ ತಂದು ಸ್ವಚ್ಛತಾ ಕಾರ್ಯ ನಿರ್ವಹಿಸಬೇಕಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಸ್ತೆಗಳ ಅಭಿವೃದ್ಧಿ ಕಾಮಗಾರಿಯಲ್ಲಿ ನೂತನ ಚರಂಡಿ ನಿರ್ಮಾಣ ಮಾಡುತ್ತಿದ್ದು, ಇದರಿಂದ ಚರಂಡಿಗಳ ಹೂಳೆತ್ತಿಸಲು ಸಾಧ್ಯವಾಗಿಲ್ಲ. ಮುಂದೆ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಪಿಡಿಓ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.