ಬಂಡೀಪುರದಲ್ಲಿ ರೈಲ್ವೆ ಬ್ಯಾರಿಕೇಡ್ಗೆ ಅನುದಾನದ ಕೊರತೆ?
ಚಾಮರಾಜನಗರ, ಡಿಸೆಂಬರ್ 12; ಅರಣ್ಯ ಇಲಾಖೆ ವನ್ಯ ಪ್ರಾಣಿಗಳು ಬಂಡೀಪುರ ಅರಣ್ಯದಿಂದ ನಾಡಿನತ್ತ ಸುಳಿಯದಂತೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಯೋಜನೆ ಕೈಗೊಂಡರೂ ಅನುದಾನದ ಕೊರತೆಯಿಂದಾಗಿ ಇಡೀ ಅರಣ್ಯದಂಚಿಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವುದು ಕಷ್ಟಸಾಧ್ಯವಾಗಿರುವುದರಿಂದ ಮಾನವ ಮತ್ತು ಪ್ರಾಣಿಗಳ ಸಂಘರ್ಷ ನಿಂತಂತೆ ಕಾಣುತ್ತಿಲ್ಲ. ಜತೆಗೆ ಬೆಳೆ ಮತ್ತು ಪ್ರಾಣ ಹಾನಿಗಳಿಗೆ ಪರಿಹಾರ ನೀಡುವುದೇ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಬಂಡೀಪುರ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳು ಸೇರಿದಂತೆ ಇತರೆ ಪ್ರಾಣಿಗಳು ದಾಳಿ ಮಾಡಿ ರೈತರು ಬೆಳೆದ ಫಸಲನ್ನು ನಾಶ ಮಾಡುವುದಲ್ಲದೆ, ಕೆಲವೊಮ್ಮೆ ಪ್ರಾಣ ಹಾನಿಗೂ ಕಾರಣವಾಗಿ ಬಿಡುತ್ತವೆ. ಈ ವೇಳೆ ಸಂತ್ರಸ್ತರಿಗೆ ಪರಿಹಾರ ನೀಡುವುದೇ ಸವಾಲ್ ಆಗಿ ಪರಿಣಮಿಸುತ್ತದೆ. ಇವತ್ತಿಗೂ ಅರಣ್ಯ ಇಲಾಖೆ ನೀಡುವ ಪರಿಹಾರದ ಬಗ್ಗೆ ಜನ ಸಾಮಾನ್ಯರಲ್ಲಿ ಅಸಮಾಧಾನವಿರುವುದಂತು ಸತ್ಯ.
ವಿದ್ಯುತ್ ತಗುಲಿ ಆನೆ ಸಾವು, ಕರ್ನಾಟಕದಲ್ಲಿ ಆನೆ ಸಾವಿನ ಅಂಕಿ-ಅಂಶಗಳು
ಸಾಮಾನ್ಯವಾಗಿ ಬೇಸಿಗೆ ಬರುತ್ತಿದ್ದಂತೆಯೇ ವನ್ಯ ಪ್ರಾಣಿಗಳು ಕಾಡಿನಿಂದ ನಾಡಿನತ್ತ ಮುಖ ಮಾಡುವುದು ಹೊಸತೇನಲ್ಲ. ಪ್ರಾಣಿಗಳು ಕಾಡು ಬಿಟ್ಟು ಹೊರಗೆ ಹೋಗಬಾರದೆಂದು ಅರಣ್ಯ ಇಲಾಖೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಆಗಾಗ್ಗೆ ನಾಡಿಗೆ ಬಂದು ರೈತರ ಮೇಲೆ ದಾಳಿ ನಡೆಸುವುದು, ಫಸಲು ನಾಶ ಮಾಡುವುದು ನಡೆಯುತ್ತಲೇ ಇರುತ್ತದೆ.
ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!
ಹಾಗೆ ನೋಡಿದರೆ ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ಇವತ್ತು ನಿನ್ನೆಯದಲ್ಲ. ಹಿಂದಿನ ಕಾಲದಿಂದ ನಡೆದುಕೊಂಡೇ ಬಂದಿದೆ. ಇದುವರೆಗೆ ಸಾವಿರಾರು ಜನ ವನ್ಯ ಪ್ರಾಣಿಗಳ ದಾಳಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ರೈತರು ಕಷ್ಟಪಟ್ಟು ಬೆಳೆದ ಫಸಲು ನಾಶವಾಗಿದೆ. ಇದನ್ನು ತಡೆಯಲು ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಆಗೊಮ್ಮೆ, ಈಗೊಮ್ಮೆ ಪ್ರಾಣಿಗಳು ದಾಳಿ ಮಾಡಿ ಅನಾಹುತಗಳನ್ನು ಸೃಷ್ಟಿಸುತ್ತಲೇ ಇರುತ್ತವೆ.
ಬಂಡೀಪುರ; ಹುಲಿ ಜೊತೆ ಸಸ್ಯಾಹಾರಿ ಪ್ರಾಣಿಗಳ ಗಣತಿ
ಗುರಿ ಸಾಧನೆಗೆ ಅನುದಾನದ ಕೊರತೆ; ಅದರಲ್ಲೂ ಹುಲಿಸಂರಕ್ಷಿತ ಪ್ರದೇಶವಾಗಿರುವ ಬಂಡೀಪುರ ಸುತ್ತಮುತ್ತ ಆಗಾಗ್ಗೆ ಕಾಡುಪ್ರಾಣಿಗಳು ನಾಡಿಗೆ ನುಗ್ಗಿ ಫಸಲು ನಾಶ ಮಾಡುವುದರೊಂದಿಗೆ ಕೆಲವೊಮ್ಮೆ ಜನ ಜಾನುವಾರುಗಳ ಪ್ರಾಣ ಹಾನಿಗೂ ಕಾರಣವಾಗಿ ಬಿಡುತ್ತವೆ. ಈ ಸಂಘರ್ಷ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಪ್ರಯತ್ನ ಮಾಡುತ್ತಿದ್ದರೂ ಕೂಡ ಅನುದಾನದ ಕೊರತೆ ನಿರೀಕ್ಷೆ ಮಾಡಿದಷ್ಟು ಗುರಿ ಸಾಧಿಸಲಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಸಾವಿರದ ಐನ್ನೂರಕ್ಕೂ ಹೆಚ್ಚು ಆನೆಗಳಿವೆ, ಕಾಡಿನಲ್ಲಿ ಸಕಾಲದಲ್ಲಿ ಮೇವು ಸಿಗದಿದ್ದಾಗ ಇವು ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಬೆಳೆ ನಾಶ ಮಾಡುವುದಲ್ಲದೇ, ಕೆಲವೊಮ್ಮೆ ಅಡ್ಡ ಬಂದವರ ಪ್ರಾಣವನ್ನು ತೆಗೆದು ಬಿಡುತ್ತವೆ. ಒಮ್ಮೊಮ್ಮೆ ಅಕ್ರಮ ವಿದ್ಯುತ್ ತಂತಿ ಬೇಲಿಗೆ ಸಿಕ್ಕಿ ಕಾಡಾನೆಗಳೇ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ.
ಪೂರ್ಣಗೊಳ್ಳದ ರೈಲ್ವೆ ಬ್ಯಾರಿಕೇಡ್ ಯೋಜನೆ; ಇದೆಲ್ಲದರ ನಡುವೆ ಕಾಡಿನಲ್ಲಿರುವ ಆನೆಗಳನ್ನು ಕಾಡಿನಿಂದ ಹೊರಗೆ ಹೋಗದಂತೆ ತಡೆಗಟ್ಟಲು ಅರಣ್ಯ ಇಲಾಖೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಿದ್ದು, ಅದರಂತೆ ಪ್ರತಿ ವಲಯದ ವ್ಯಾಪ್ತಿಯಲ್ಲಿ ಹತ್ತು ಹನ್ನೆರಡು ಕಿಲೋ ಮೀಟರ್ ದೂರ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿದ್ದರೂ ಉಳಿದ ಕಡೆ ನಿರ್ಮಾಣ ಮಾಡದ ಕಾರಣದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರತಿ ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಸರಾಸರಿ 1 ಕೋಟಿ 25 ಲಕ್ಷ ರೂಪಾಯಿಗಳ ವೆಚ್ಚವಾಗುತ್ತಿದೆ. ಹೀಗಾಗಿ ಇಡೀ ಅರಣ್ಯಕ್ಕೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವುದು ಅಷ್ಟು ಸುಲಭದ ಕೆಲಸವಾಗಿ ಉಳಿದಿಲ್ಲ.
Recommended Video
ಇನ್ನಾದರೂ ಸರ್ಕಾರ ಗಮನಹರಿಸಲಿ; ಸದ್ಯ ಬಂಡೀಪುರದಲ್ಲಿ ಹೆಡಿಯಾಲ, ಮೂಳೆಯೂರು, ನುಗು, ಓಂಕಾರ ವಲಯದಲ್ಲಿ ಕೆಲವೇ ಕಿಲೋ ಮೀಟರ್ ನಷ್ಟು ಮಾತ್ರ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಉಳಿದಂತೆ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಕೂಡ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುದಾನ ಮೀಸಲಿರಿಸದೇ ಇರುವುದು ಬೇಸರದ ಸಂಗತಿಯಾಗಿದೆ. ಜತೆಗೆ ರೈಲ್ವೆ ಬ್ಯಾರಿಕೇಡ್ ಯೋಜನೆ ಸಂಪೂರ್ಣವಾಗದ ಕಾರಣದಿಂದ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ನಿಲ್ಲುತ್ತಿಲ್ಲ. ಸರ್ಕಾರ ಇನ್ನಾದರೂ ಈ ಬಗ್ಗೆ ಗಮನಹರಿಸಿ ಸೂಕ್ತ ಅನುದಾನ ಒದಗಿಸಬೇಕಿದೆ. ಆಗ ಸ್ವಲ್ಪ ಮಟ್ಟಿಗೆಯಾದರೂ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷಕ್ಕೆ ತಡೆಯೊಡ್ಡಬಹುದೇನೋ?