ಚಾಮರಾಜನಗರ: ಅರಣ್ಯಾಧಿಕಾರಿ ಎತ್ತಂಗಡಿಗೆ ಖಂಡಿಸಿ ಪ್ರತಿಭಟನೆ!
ಚಾಮರಾಜನಗರ, ಆಗಸ್ಟ್ 11: ಚಾಮರಾಜನಗರ ಜಿಲ್ಲೆಯ ಇಬ್ಬರು ಐಎಫ್ಎಸ್ ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡಿ ಬುಧವಾರ ಸಂಜೆ ಆದೇಶ ಹೊರಡಿಸಿತ್ತು.
ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು ಹಾಗೂ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಜಿ. ಸಂತೋಷ್ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ವಿನೂತನ ಪ್ರಯತ್ನ; ಹಾಡಿಯ ಜನರಿಗೆ 24×7 ಸಾರಿಗೆ ವಾಹನ
ಸಂತೋಷ್ ಅವರನ್ನು ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿಧಾಮಕ್ಕೇ ಬಂದಿದ್ದು ವಿ. ಏಡುಕುಂಡಲು ಅವರನ್ನು ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಮೈಸೂರು ಕಾರ್ಯ ಯೋಜನೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ದೀಪಾ ಜೆ. ಕಾಂಟ್ರಾಕ್ಟರ್ ಅವರನ್ನು ಬಿಆರ್ಟಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಜನಪ್ರಿಯ ಹಾಗೂ ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮನ ಗೆದ್ದಿದ್ದ, ಕ್ರಿಯಾಶೀಲ ಅಧಿಕಾರಿ ಏಡುಕುಂಡಲು ಅವರ ವರ್ಗಾವಣೆಗೆ ಜನರು ಅಸಮಾಧಾನ ಹೊರಹಾಕಿದ್ದಾರೆ. ಈ ಹಿಂದೆ, ಸಚಿವ ಉಮೇಶ್ ಕತ್ತಿ ಬಂದಿದ್ದ ವೇಳೆ ಏಡುಕುಂಡಲು ಅವರನ್ನು ಸದ್ಯಕ್ಕೆ ವರ್ಗಾವಣೆ ಮಾಡಬಾರದು ಎಂದು ರೈತ ಮುಖಂಡರು ಒತ್ತಾಯಿಸಿ ಮನವಿ ಪತ್ರ ಕೊಟ್ಟಿದ್ದರು.
ಹನೂರಲ್ಲಿ ರಸ್ತೆ ತಡೆ; ಏಡುಕುಂಡಲು ಅವರ ವರ್ಗಾವಣೆ ರದ್ದಾಗಬೇಕೆಂದು ಒತ್ತಾಯಿಸಿ ರೈತ ಸಂಘದ ವತಿಯಿಂದ ಹನೂರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಲಾಯಿತು. ಚಂಗಡಿ ಗ್ರಾಮಸ್ಥರಿಗೆ ಪುನರ್ವಸತಿ, ಹಳ್ಳಿಕಾರ್ ತಳಿ ಉಳಿವಿಗಾಗಿ ಹಳ್ಳಿಕಾರ್ ತುಪ್ಪ, ಜೇನುಕೃಷಿ ಹಲವು ಯೋಜನೆಗಳು ಪೂರ್ಣವಾಗುವ ತನಕ ಏಡುಕುಂಡಲು ಅವರನ್ನು ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲೇ ಉಳಿಸಬೇಕೆಂದು ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಒತ್ತಾಯಿಸಿದ್ದಾರೆ.
ಹುಲಿ ಸಂರಕ್ಷಿತ ಪ್ರದೇಶ ಮಾಡುವ ಯೋಜನೆ ತೀರ್ಮಾನ ಸಿಎಂಗೆ ಬಿಟ್ಟದ್ದು: ಸಚಿವ ಉಮೇಶ್ ಕತ್ತಿ
ಏಡುಕುಂಡಲು ತಮ್ಮ ಕಾರ್ಯಾವಧಿಯಲ್ಲಿ ರೈತರಿಗೆ ಅನುಕೂಲ ಒದಗಿಸಿಕೊಡಲು ದೇಸಿ ಹಸುವಿನಿಂದ ತಯಾರಿಸಿದ ತುಪ್ಪಕ್ಕೆ 'ಹಳ್ಳಿಕಾರ್ ತುಪ್ಪ' ಎಂಬ ಬ್ರ್ಯಾಂಡ್ ಸೃಷ್ಟಿಸಿ ಕಾಡಂಚಿನ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಕಾಡಿನೊಳಗೆ ವಾಸಿಸುವ ಜನರಿಗೆ ಅನುಕೂಲ ಮಾಡಿಕೊಡಲು ಜನವನ ಸೇತುವೆ ಎಂಬ ಹೆಸರಿನಲ್ಲಿ 24X7 ಅವಧಿಯ ಜೀಪ್ಗಳ ಸೇವೆ ಆರಂಭಕ್ಕೆ ಪ್ರಮುಖ ಪಾತ್ರವಹಿಸಿದ್ದರು.
ಅರಣ್ಯ ಇಲಾಖೆ ಮತ್ತು ರೈತರ ನಡುವೆ ಯಾವಾಗಲೂ ಸಂಘರ್ಷಗಳೇ ಹೆಚ್ಚಾಗಿರುತ್ತವೆ. ಆದರೆ ಏಡುಕುಂಡಲು ಅವರ ವಿಚಾರದಲ್ಲಿ ಸ್ವತಃ ರೈತರೇ ಅವರನ್ನು ವರ್ಗಾವಣೆ ಮಾಡಬಾರದು ಎಂದು ಪ್ರತಿಭಟನೆ ಮಾಡುತ್ತಿರುವುದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.
Recommended Video