ಬಂಡೀಪುರದಲ್ಲಿ ವಿಫಲವಾಯ್ತು ಫಾಕ್ಸ್ ಲೈಟ್ ತಂತ್ರಜ್ಞಾನ
ಚಾಮರಾಜನಗರ, ಜನವರಿ 01: ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ರಾಷ್ಟ್ರೀಯ ಉದ್ಯಾನವನದಿಂದ ನಾಡಿಗೆ ತೆರಳುವ ಕಾಡಾನೆ ಸೇರಿದಂತೆ ವನ್ಯಪ್ರಾಣಿಗಳನ್ನು ತಡೆಯುವ ಸಲುವಾಗಿ ಪ್ರಯೋಗಾತ್ಮಕವಾಗಿ ಅಳವಡಿಸಿದ್ದ ಆಸ್ಟ್ರೇಲಿಯಾದ ತಂತ್ರಜ್ಞಾನ ಫಾಕ್ಸ್ ಲೈಟ್ ವಿಫಲಗೊಂಡಿದೆ.
ಈ ಹಿಂದೆ ಬಂಡೀಪುರ ಅಭಯಾರಣ್ಯ ಗೋಪಾಲಸ್ವಾಮಿ ಬೆಟ್ಟ ವಲಯದ ಆಂಜನೇಯ ದೇವಸ್ಥಾನ ಹಾಗೂ ಹುಂಡೀಪುರ ಹತ್ತಿರ ಫಾಕ್ಸ್ ಲೈಟ್ ಅಳವಡಿಸಲಾಗಿತ್ತು. ಈ ಫಾಕ್ಸ್ ಲೈಟ್ ಹೊರಸೂಸುವ ಬೆಳಕಿನಿಂದ ಕಾಡು ಪ್ರಾಣಿಗಳು ಹೆದರಿ ಹೊರಹೋಗುತ್ತವೆ ಎಂಬ ಉದ್ದೇಶದಿಂದ ಆಸ್ಟ್ರೇಲಿಯಾ ಫಾಕ್ಸ್ ಲೈಟ್ ಕಂಪನಿಯ ಸಿಇಓ ಐಯಾನ್ ಬಂಡೀಪುರಕ್ಕೆ ಖುದ್ದು ಭೇಟಿ ನೀಡಿ ದೀಪಗಳನ್ನು ಗೋಪಾಲಸ್ವಾಮಿಬೆಟ್ಟ ವಲಯ ಕಾರೆಮರಹಳ್ಳ ಹಾಗೂ ಕರಡಿಕಲ್ಲು ಗುಡ್ಡದಲ್ಲಿ ಫಾಕ್ಸ್ ಲೈಟ್ ಅಳವಡಿಸಿದ್ದರು.
ಕಾಡು ಪ್ರಾಣಿ ನಾಡಿಗೆ ಬರುವುದ ತಡೆಯುವುದೇ ಈ ಆಸ್ಟ್ರೇಲಿಯಾ ತಂತ್ರಜ್ಞಾನ?
ಆದರೆ ಈ ಫಾಕ್ಸ್ ಲೈಟ್ ಗಳನ್ನು ಕಾಡಾನೆಗಳು ಕಾಲಿನಿಂದ ತುಳಿದು ನಾಶ ಮಾಡಿದ್ದು, ಯಾವುದೇ ಭಯವಿಲ್ಲದೆ ಹೊರಬರುತ್ತಿವೆ. ಜತೆಗೆ ಬೆಳಕಿನ ಪ್ರಖರತೆಯನ್ನು ಗಮನಿಸಿ ಲೈಟ್ ಗಳನ್ನು ಕಿತ್ತು ಹಾಕುತ್ತಿವೆ ಎನ್ನಲಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಈ ಪ್ರಯೋಗವನ್ನು ಕೈ ಬಿಟ್ಟಿದೆ.
"ಗೋಪಾಲಸ್ವಾಮಿ ವಲಯ ವ್ಯಾಪ್ತಿಯಲ್ಲಿ ಆರು ಕಡೆ ಫಾಕ್ಸ್ ಲೈಟ್ ಅಳವಡಿಸಲಾಯಿತು. ಆನೆಗಳು ದಾಳಿ ಮಾಡಿ ನಾಶ ಮಾಡಿವೆ. ಇದು ಪ್ರಯೋಜನಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿದೆ" ಎಂದು ಗೋಪಾಲಸ್ವಾಮಿ ಬೆಟ್ಟ ವಲಯ್ಯಾಣಧಿಕಾರಿ ನವೀನ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬಂಡೀಪುರದಲ್ಲಿ ಪ್ರವಾಸಿಗರ ಹಸಿವು ತಣಿಸಲು ಕಾಡಿನ ಮಧ್ಯೆ ಹಾಡಿ ಕ್ಯಾಂಟೀನ್
ಅರಣ್ಯ ಇಲಾಖೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಬಂಡೀಪುರ ಅರಣ್ಯದಂಚಿನಲ್ಲಿ ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷಕ್ಕೆ ತಡೆ ಬಿದ್ದಿರಲಿಲ್ಲ. ಹೀಗಾಗಿ ಫಾಕ್ಸ್ ಲೈಟ್ ನ ವಿನೂತನ ಪ್ರಯೋಗಕ್ಕೆ ಅರಣ್ಯ ಇಲಾಖೆ ಮುಂದಾಗಿತ್ತು. ಆದರೆ ಇದಕ್ಕೂ ಕಾಡಾನೆಗಳು ಜಗ್ಗಲಿಲ್ಲ. ಫ್ಯಾಕ್ಸ್ ಲೈಟ್ ರಾತ್ರಿ ಸಮಯದಲ್ಲಿ ಕೆಂಪು, ನೀಲಿ, ಬಿಳಿ ಬಣ್ಣದ ಬೆಳಕನ್ನು ಹೊರಚೆಲ್ಲುವುದರಿಂದ ಕಾಡಾನೆ ಸೇರಿದಂತೆ ಇತರೆ ವನ್ಯ ಪ್ರಾಣಿಗಳು ಬೆದರಿ ಕಾಡಿನ ಅಂಚಿಗೆ ಬರಲು ಹಿಂದೇಟು ಹಾಕುವುದಲ್ಲದೆ, ಕಾಡಿನೊಳಕ್ಕೆ ಹೋಗುತ್ತವೆ ಎಂಬ ಕಾರಣಕ್ಕೆ ಅಳವಡಿಸಲಾಗಿತ್ತು. ಆದರೆ ಜನರಲ್ಲಿ ಭರವಸೆ ತಂದಿದ್ದ ಆಸ್ಟ್ರೇಲಿಯಾ ತಂತ್ರಜ್ಞಾನ ವಿಫಲಗೊಂಡಂತಾಗಿದೆ.