ಮಧುವನಹಳ್ಳಿಯಲ್ಲಿ ಕಾಡಾನೆ ಅಟ್ಟುವಾಗ ನಾಲ್ವರಿಗೆ ಗಾಯ
ಚಾಮರಾಜನಗರ, ಡಿಸೆಂಬರ್ 27: ಅರಣ್ಯದಿಂದ ನಾಡಿಗೆ ಬಂದು ರೈತರ ಜಮೀನಿಗೆ ಲಗ್ಗೆಯಿಡುತ್ತಿದ್ದ ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗೆ ಅಟ್ಟುವಾಗ ಅಧಿಕಾರಿಗಳು ಸಿಡಿಸಿದ ಗುಂಡಿನ ಮದ್ದು ಚೂರುಗಳು ತಗುಲಿ ನಾಲ್ವರು ಗಾಯಗೊಂಡಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ನಡೆದಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದು, ಇದನ್ನು ತಿನ್ನಲು ಅರಣ್ಯದಿಂದ ಕಾಡಾನೆಗಳು ಹಿಂಡು ಬರುತ್ತಿದ್ದು ರೈತರು ಆತಂಕಪಡುವಂತಾಗಿದೆ.ರೈತರು ಜಮೀನಿನಲ್ಲಿ ರಾತ್ರಿಯೆಲ್ಲ ಕಾವಲು ಕಾಯುತ್ತಿದ್ದು ಆದರೂ ಸುಮಾರು ಎಂಟು ಕಾಡಾನೆಗಳು ಮಧುವನಹಳ್ಳಿ ಗ್ರಾಮದ ಸುತ್ತಮುತ್ತವಿರುವ ಜಮೀನಿಗೆ ನುಗ್ಗಿದ್ದು ರೈತರ ಫಸಲನ್ನು ನಾಶ ಮಾಡಿವೆ.
ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಗುಂಪಾಗಿ ಗೋಚರಿಸಿದ ಆನೆಗಳು
ಮಧುವಿನಹಳ್ಳಿ ಜಮೀನುಗಳಿಗೆ ಲಗ್ಗೆಯಿಟ್ಟ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಲು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪಟಾಕಿ ಸಿಡಿಸಿ ಆನೆಗಳ ಹಿಂಡನ್ನು ಕಾಡಿನತ್ತ ಓಡಿಸಲು ಸರ್ವ ರೀತಿಯಲ್ಲಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈಗಾಗಲೇ ಸುಮಾರು 40 ಸಿಬ್ಬಂದಿ ಹರಸಾಹಸಪಡುತ್ತಿದ್ದು ಆದರೂ ಕಾಡಾನೆಗಳು ಕಬ್ಬಿನಗದ್ದೆ ಬಿಟ್ಟು ಕದಲುತ್ತಿಲ್ಲವಾದ್ದರಿಂದ ಅವುಗಳನ್ನು ಓಡಿಸುವ ಕಾರ್ಯಾಚರಣೆ ನಡೆಸುವಾಗ ಪಟಾಕಿ ಮತ್ತು ಗುಂಡಿನಿಂದ ಹಾರಿದ ಮದ್ದಿನ ಚೂರುಗಳು ಪ್ರವೀಣ್, ದರ್ಶನ, ಸುಜೀತ್, ಸಿದ್ದಾರ್ಥ, ರಘುವೀರ್ ಎಂಬುವವರಿಗೆ ತಾಗಿ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.