ಜಿಂಕೆ ಬೇಟೆಯಾಡಿದ್ದ ಆರೋಪಿ ಬಂಧನ, ನಾಲ್ವರು ಪರಾರಿ
ಚಾಮರಾಜನಗರ ಜಿಲ್ಲೆ ಬಂಡೀಪುರ ವ್ಯಾಪ್ತಿಯಲ್ಲಿ ಜಿಂಕೆಯನ್ನು ಕೊಂದು ಅದರ ಮಾಂಸವನ್ನು ಕವರ್ ನಲ್ಲಿ ತುಂಬಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಈ ವೇಳೆ ಇತರೆ ನಾಲ್ವರು ಪರಾರಿಯಾಗಿದ್ದಾರೆ
ಚಾಮರಾಜನಗರ, ಏಪ್ರಿಲ್ 30: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಜಮೀನಿನಲ್ಲಿ ಜಿಂಕೆಯನ್ನು ಬೇಟೆಯಾಡಿದ್ದ ಬೇಟೆಗಾರನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಂಸ ಸಹಿತ ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಶಿವಪ್ಪ (40) ಬಂಧಿತ ಆರೋಪಿ. ತನ್ನ ಜಮೀನಿಗೆ ಮೇವನ್ನರಸಿ ಬಂದಿದ್ದ ಜಿಂಕೆಯನ್ನು ಇತರೆ ಬೇಟೆಗಾರರ ಸಹಕಾರದಿಂದ ಬೇಟೆಯಾಡಿ, ಅದನ್ನು ಮಾಂಸ ಮಾಡಿ ಕವರಿಗೆ ತುಂಬಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದರಿಂದ ಸಿಕ್ಕಿಬಿದ್ದಿದ್ದಾನೆ.[ಕೊಳ್ಳೇಗಾಲದ ದನಗೆರೆ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಸಾವು]
ಹಿಮವದ್ ಗೋಪಾಲಸ್ವಾಮಿ ಬೆಟ್ಟದ ವ್ಯಾಪ್ತಿಯಲ್ಲಿನ ಪಕ್ಕದಲ್ಲಿ ಶಿವಪ್ಪನಿಗೆ ಸೇರಿದ ಜಮೀನಿದ್ದು, ಅಲ್ಲಿಗೆ ಆಹಾರವನ್ನು ಅರಸಿ ಸುಮಾರು ನಾಲ್ಕು ವರ್ಷ ಪ್ರಾಯದ ದಷ್ಟ ಪುಷ್ಪವಾಗಿದ್ದ ಗಂಡು ಜಿಂಕೆ ಬಂದಿದೆ. ಈ ವೇಳೆ ಶಿವಪ್ಪ ಇತರೆ ನಾಲ್ವರೊಂದಿಗೆ ಸೇರಿ ಅದಕ್ಕೆ ಗುಂಡು ಹಾರಿಸಿ ಬೇಟೆಯಾಡಿ, ಸಾಯಿಸಿ ತನ್ನ ಜಮೀನಿನಲ್ಲೇ ಮಾಂಸ ಮಾಡಿ, ಬಳಿಕ ಅದನ್ನು ಕವರ್ ನಲ್ಲಿ ತುಂಬಿಸುವ ಕಾರ್ಯದಲ್ಲಿ ನಿರತನಾಗಿದ್ದ.
ಇದ್ದಕ್ಕಿದ್ದಂತೆ ನೀರವತೆಯನ್ನು ಸೀಳಿ ಬಂದ ಗುಂಡಿನ ಶಬ್ದ ಕೇಳಿದ ಎಸ್ ಟಿಪಿಎಫ್ ತಂಡ ಪತ್ತೆ ಕಾರ್ಯವನ್ನು ಕೈಗೊಂಡಿದೆ. ಅಗ ಗಾಬರಿಗೊಂಡ ನಾಲ್ವರು ಆರೋಪಿಗಳು ಜಿಂಕೆಯನ್ನು ಕೊಲ್ಲಲು ಬಳಸಿದ್ದ ಬಂದೂಕಿನೊಂದಿಗೆ ಪರಾರಿಯಾಗಿದ್ದಾರೆ. ಪ್ರಮುಖ ಆರೋಪಿಯಾದ ಶಿವಪ್ಪನ ಜಮೀನಿನಲ್ಲಿ ಈ ಕೃತ್ಯಗಳು ನಡೆಯುತ್ತಿದ್ದು, ಈತನಿಂದ 80 ಕೆ.ಜಿ. ಜಿಂಕೆಯ ಮಾಂಸ, ಕೊಂಬುಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಮಚ್ಚನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.[ಮಹದೇಶ್ವರ ತಪ್ಪಲಿನ ಕಾಮಧೇನುಗಳ ಸೇವೆಯಲ್ಲಿ ರಾಮಚಂದ್ರಾಪುರ ಮಠ]
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್.ಮರಿಯಪ್ಪ, ಗೋಪಾಲಸ್ವಾಮಿ ಬೆಟ್ಟದ ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ, ಉಪವಲಯ ಅರಣ್ಯಾಧಿಕಾರಿ ಮೋಹನ್, ಬಸವರಾಜು, ಶ್ರೀನಾಥರೆಡ್ಡಿ ಮತ್ತು ಗಾರ್ಡ್ ನವೀನ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.