ಬಂಡೀಪುರದಲ್ಲಿ ಅಗ್ನಿ ಅನಾಹುತ ತಡೆಗೆ "ಬೆಂಕಿ ರೇಖೆ"
ಚಾಮರಾಜನಗರ, ಡಿಸೆಂಬರ್ 13: ಮಳೆಗಾಲದಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಬಂಡೀಪುರದಲ್ಲಿ ಬೇಸಿಗೆ ಬರುತ್ತಿದ್ದಂತೆಯೇ ಕಾಡ್ಗಿಚ್ಚಿನ ಭಯ ಶುರುವಾಗುತ್ತದೆ. ಪ್ರತಿ ವರ್ಷವೂ ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ಅರಣ್ಯ ಬೆಂಕಿಯಲ್ಲಿ ಬೇಯುವುದು ತಪ್ಪುತ್ತಿಲ್ಲ.
ಆದರೆ ಈ ಬಾರಿ ಹಾಗಾಗಬಾರದೆಂದು ಅರಣ್ಯ ಇಲಾಖೆ ಈಗಿನಿಂದಲೇ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅದರಂತೆ ಬೆಂಕಿ ತಡೆ ರೇಖೆ ಕಾರ್ಯ ಆರಂಭಿಸಿದೆ. ಅರಣ್ಯದ ಸುತ್ತಲೂ, ಬೆಂಕಿ ಅರಣ್ಯಕ್ಕೆ ತಾಕದಂತೆ ಮಾಡಲಾಗುತ್ತಿದೆ. ಕಳೆದ ವರ್ಷ ಇಂತಹ ಕ್ರಮ ಕೈಗೊಂಡಿದ್ದರೂ ಕಿಡಿಗೇಡಿಗಳು ಬೇಕೆಂದೇ ಅರಣ್ಯಕ್ಕೆ ಬೆಂಕಿ ಹಚ್ಚಿದ್ದರಿಂದ ಸಾವಿರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಈ ಬಾರಿ ಹಾಗಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಬಂಡೀಪುರ ಕಾಡ್ಗಿಚ್ಚು ದುರಂತದ ಕುರಿತು ನೀಡಿದ ತನಿಖಾ ವರದಿಯಲ್ಲೇನಿದೆ?
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯವ್ಯಾಪ್ತಿಯ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೆಕಟ್ಟೆ, ಕರಡಿ ಕಲ್ಲು ಬೆಟ್ಟ, ಮೈಸೂರು ಕಲ್ಲು, ಎಂಟನೇ ಮೈಲು ಹಾಗೂ 12 ವಲಯಗಳಲ್ಲಿ ಬೆಂಕಿ ತಡೆ ರೇಖೆ ಬಹುತೇಕ ಪೂರ್ಣವಾಗಿದೆ. ಅರಣ್ಯದೊಳಗಿನ ರಸ್ತೆಗಳು, ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ 5 ರಿಂದ 10 ಮೀ. ಅಗಲಕ್ಕೆ ಕಾಡಿನ ಕಳೆ ತೆಗೆಯಲಾಗುತ್ತಿದ್ದು, ಕಳೆ ಒಣಗಿದ ಬಳಿಕ ಸುಡುವ ಕಾರ್ಯ ನಡೆಯುತ್ತಿದೆ.
ಕಳೆದ ಒಂದೂವರೆ ದಶಕದಲ್ಲಿ ಪದೇ ಪದೇ ಬೆಂಕಿಗೆ ಹಲವು ಪ್ರದೇಶಗಳು ಆಹುತಿಯಾಗಿವೆ. ಇದೀಗ ಅಂತಹ ಪ್ರದೇಶಗಳನ್ನು ಗೊತ್ತು ಮಾಡಿಕೊಂಡು ಅಲ್ಲಿ ಯಾವ ಕ್ರಮ ಕೈಗೊಂಡರೆ ಅಗ್ನಿ ಅನಾಹುತ ತಡೆಯಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 2000 ಕಿ.ಮೀಗೂ ಹೆಚ್ಚು ಬೆಂಕಿ ರೇಖೆಯನ್ನು ನಿರ್ಮಿಸಲಾಗಿದೆ.
ಬಂಡೀಪುರದಲ್ಲಿ ಬೇಸಿಗೆಯ ಕಾಡ್ಗಿಚ್ಚು ತಡೆಯಲು ಮುಂದಾದ ಅಧಿಕಾರಿಗಳು
ಒಟ್ಟಾರೆ ಈ ಬಾರಿ ಬಂಡೀಪುರ ಅರಣ್ಯವನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಈಗಿನಿಂದಲೇ ಸಜ್ಜಾಗುತ್ತಿದೆ. ಆದರೆ ಈ ಕಾರ್ಯದಲ್ಲಿ ಅರಣ್ಯ ಇಲಾಖೆ ಮಾತ್ರವಲ್ಲದೆ ಸಾರ್ವಜನಿಕರು ಕೂಡ ಕೈಜೋಡಿಸಿ ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಯಲು ಸಹಕರಿಸಬೇಕಾಗಿದೆ.