ಬಂಡೀಪುರದಲ್ಲಿ ನಿಯಂತ್ರಣದತ್ತ ಕಾಡ್ಗಿಚ್ಚು:ಇಬ್ಬರ ಬಂಧನ, 15 ಮಂದಿ ವಶ
ಚಾಮರಾಜನಗರ, ಫೆಬ್ರವರಿ 27: ವಿಶ್ವ ವಿಖ್ಯಾತ ಬಂಡೀಪುರ ಅಭಯಾರಣ್ಯದಲ್ಲಿ ಕಳೆದ ಐದು ದಿನಗಳಿಂದ ಹೊತ್ತಿ ಉರಿಯುತ್ತಿದ್ದ ಕಾಡ್ಗಿಚ್ಚು ಇದೀಗ ನಿಯಂತ್ರಣಕ್ಕೆ ಬಂದಿದ್ದು, ಘಟನೆಯಲ್ಲಿ ಸುಮಾರು 20 ಸಾವಿರ ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ.
ಕಳೆದ ಶುಕ್ರವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರದ ಕುಂದಗೆರೆ ವಲಯದಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಪ್ರತಿ ನಿತ್ಯ ಹೆಚ್ಚಾಗುತ್ತಲೇ ಇತ್ತು. ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭಾರಿ ತಲೆ ನೋವಾಗಿತ್ತು.
ಚಾಮುಂಡಿಬೆಟ್ಟದಲ್ಲೂ ಕಾಣಿಸಿಕೊಂಡ ಬೆಂಕಿ, 30 ಎಕರೆ ಪ್ರದೇಶ ಬೆಂಕಿಗಾಹುತಿ
ಮಂಗಳವಾರ (ಫೆ. 26) ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರದ ವಾಯು ಸೇನಾ ಪಡೆಯ ನಾಲ್ಕು ಹೆಲಿಕ್ಯಾಪ್ಟರ್ ಗಳು ಬಂಡೀಪುರ ಅಭ್ಯಯಾರಣ್ಯದಲ್ಲಿರುವ ಕಣಿವೆ ಮಾದರಿಯ ದಟ್ಟ ಕಾಡಿನಲ್ಲಿ ಕಾಣಿಸಿಕೊಂಡಿರುವ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದ್ದರಿಂದ ಬಹುತೇಕ ಕಾಡು ಬೆಂಕಿಯ ಕೆನ್ನಾಲಿಗೆಯಿಂದ ಪಾರು ಮಾಡಿದಂತಾಗಿದೆ.
ಬೆಂಕಿ ನಂದಿಸಲು ಬಂದ ಹೆಲಿಕ್ಯಾಪ್ಟರ್ ಗಳು ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮದಂಚಿನಲ್ಲಿರುವ ಕೆರೆಯ ನೀರನ್ನು ತೆಗೆದುಕೊಂಡು ಹೋಗಿ ಮದ್ದೂರು ಮತ್ತು ಮೂಲೆಹೊಳೆ ವಲಯ ಭಾಗದಲ್ಲಿ ಕಾಣಿಸಿಕೊಂಡಿರುವ ಬೆಂಕಿಯ ಜ್ವಾಲೆಯನ್ನು ಆರಿಸಲು ಮುಂದಾಯಿತು.
ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ
ಈ ಮೊದಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಬಂದ ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಬೆಂಕಿಯನ್ನು ನಂದಿಸುವಲ್ಲಿ ಮುಂದಾಗಿದ್ದರಿಂದ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿದರು. ಮುಂದೆ ಓದಿ...
ಎಚ್ಚರಿಕೆ ವಹಿಸುವಂತೆ ಸೂಚನೆ
ಬಂಡೀಪುರದಲ್ಲಿ ಬೆಂಕಿ ಕಾಣಿಸಿಕೊಂಡು ಐದು ದಿನಗಳ ಬಳಿಕ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿರವರು ಬಂಡೀಪುರದ ಮೂಲೆಹೊಳೆ, ಮದ್ದೂರು, ಚಮ್ಮನಹಳ್ಳ ಸೇರಿದಂತೆ ಅಗ್ನಿ ಅವಘಡದಿಂದ ನಾಶವಾಗಿರುವ ಪ್ರದೇಶವನ್ನು ವೀಕ್ಷಿಸಿ ಮುಂದಿನ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು. ಈ ನಡುವೆ ಚಲನಚಿತ್ರ ನಟ ದುನಿಯಾ ವಿಜಯ್ ಬಂಡೀಪುರಕ್ಕೆ ಭೇಟಿ ಕೊಟ್ಟು, ಸ್ವಯಂ ಸೇವಕರೊಂದಿಗೆ ತಾನೂ ಕೂಡ ಸೇರಿಕೊಂಡು ಸೊಪ್ಪಿನ ಮೂಲಕ ಬೆಂಕಿಯನ್ನು ನಂದಿಸಿದ್ದು, ವಿಶೇಷವಾಗಿತ್ತು.
ಹದಿನೈದು ಮಂದಿ ವಶಕ್ಕೆ
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಬೆಂಕಿಯಿಟ್ಟ ಇಬ್ಬರು ದುಷ್ಕರ್ಮಿಗಳನ್ನು ಅರಣ್ಯ ಇಲಾಖೆಯವರು ಬಂಧಿಸಿ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಹದಿನೈದು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
'ಮುಂಜಾಗ್ರತೆ ವಹಿಸಿದ್ದರೆ ಬಂಡೀಪುರ ಬೆಂಕಿ ಅವಘಡ ತಡೆಯಬಹುದಿತ್ತು'
ಪೊಲೀಸ್ ಇಲಾಖೆಗೆ ದೂರು
ಬಂಡೀಪುರಕ್ಕೆ ಹೊಂದಿಕೊಂಡಂತಿರುವ ಉಪಕಾರ ಕಾಲೊನಿಯ ಭಂಟ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಳಿಯಿರುವ ಕಳ್ಳಿಪುರದ ಅರುಣ್ಕುಮಾರ್ ಅವರನ್ನು ಬಂಧಿಸಲಾಗಿದೆ. ಇದನ್ನು ಖಚಿತಪಡಿಸಿದ ಬಂಡೀಪುರದ ಸಿಎಫ್ ಅಂಬಾಡಿ ಮಾಧವ್, ಬಂಧಿತರಿಬ್ಬರನ್ನು ಅರಣ್ಯ ಇಲಾಖೆಯಿಂದ ವಿಚಾರಣೆ ನಡೆಸಲಾಗುತ್ತಿದ್ದು, ಪೊಲೀಸ್ ಇಲಾಖೆಗೂ ಕೂಡ ದೂರು ನೀಡಲಾಗಿದೆ ಎಂದು ಹೇಳಲಾಗಿದೆ.
ಇವರಿಬ್ಬರಿಂದ ಸಾಧ್ಯವಿಲ್ಲ
ಬಂಡೀಪುರ ಅಭಯಾರಣ್ಯಕ್ಕೆ ಕೇವಲ ಇಬ್ಬರಿಂದ ಬೆಂಕಿ ಹಾಕಲು ಸಾಧ್ಯವಿಲ್ಲ, ಬೆಂಕಿಹಾಕಲು ಸಹಕರಿಸಿದ ಇನ್ನೂ ಹಲವಾರು ಮಂದಿ ಇರಬಹುದೆಂದು ಹಾಗೂ ಅರಣ್ಯ ಇಲಾಖೆಯವರ ವಶದಲ್ಲಿರುವ ಇಬ್ಬರು ದುಷ್ಕರ್ಮಿಗಳು ಮಹತ್ವದ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಮತ್ತೆ ಹದಿನೈದು ಮಂದಿಯನ್ನು ವಶಕ್ಕೆ ತೆಗೆದುಕೊಂಡು ಗಂಭೀರವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಎನ್ನಲಾಗಿದ್ದು, ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿದ್ದಾರೆ.