ಬಂಡೀಪುರದಲ್ಲಿ ಕಾಡ್ಗಿಚ್ಚು ತಡೆಗೆ ಅರಣ್ಯ ಸಿಬ್ಬಂದಿ ಸಜ್ಜು
ಚಾಮರಾಜನಗರ, ಫೆಬ್ರವರಿ 19: ಬೇಸಿಗೆ ಬರುತ್ತಿದೆ ಹೀಗಾಗಿ ಗುಂಡ್ಲುಪೇಟೆ ಸಮೀಪದ ಬಂಡೀಪುರದ ಅಭಯಾರಣ್ಯದ ಕುರುಚಲು ಕಾಡುಗಳೆಲ್ಲವೂ ಒಣಗಿರುವುದರಿಂದ ಕಾಡ್ಗಿಚ್ಚಿನ ಭಯ ಕಾಡತೊಡಗಿದೆ. ಹೀಗಾಗಿ ಅರಣ್ಯ ಇಲಾಖೆ ಬೆಂಕಿಯಿಂದ ಅರಣ್ಯವನ್ನು ರಕ್ಷಿಸಲು ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ.
ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿದ್ದರಿಂದ ಅರಣ್ಯಗಳತ್ತ ಜನ ಮುಖ ಮಾಡದ ಕಾರಣದಿಂದಾಗಿ ಬೆಂಕಿ ಅನಾಹುತ ಸಂಭವಿಸಿರಲಿಲ್ಲ. ಈ ಬಾರಿಯೂ ಅರಣ್ಯವನ್ನು ಕಾಪಾಡುವ ಸಲುವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ಪ್ರಾತ್ಯಕ್ಷಿಕೆಯನ್ನು ನಡೆಸುವುದರೊಂದಿಗೆ ಅರಣ್ಯದ ರಕ್ಷಣೆಗೆ ನಿಗಾವಹಿಸಿದ್ದಾರೆ.
ವಿಸ್ಮಯ ಗೂಡು ನಿರ್ಮಾಣದ ಕಲೆಗಾರ ಗೀಜುಗ...
ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರದೇಶದ ಎನ್.ಬೇಗೂರು ವಲಯದಲ್ಲಿ ಬೆಂಕಿ ಬಿದ್ದಾಗ ಯಾವ ಕ್ರಮಗಳನ್ನು ಅನುಸರಿಸಿ ಬೆಂಕಿಯನ್ನು ಆರಿಸಬೇಕು ಎಂಬುದರ ಬಗ್ಗೆ ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಹಿಂದಿನ ಕಾಲದಲ್ಲಿ ಕಾಡಿಗೆ ಬೆಂಕಿ ಬಿದ್ದಾಗ ಸೊಪ್ಪಿನ ಸಹಾಯ ದಿಂದ ಬೆಂಕಿ ಆರಿಸುತ್ತಿದ್ದರು.
ಆದರೆ ತಂತ್ರಜ್ಞಾನ ಬೆಳೆದಂತೆ ಇದೀಗ ಹೊಸ ಬಗೆಯ ಸ್ಪ್ರೇಯರ್, ಫೈರ್ ಬೀಟರ್ ಮತ್ತು ಟ್ರ್ಯಾಕ್ಟರ್ ಸಹಾಯದಿಂದ ಹೇಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಂಡು ಬೆಂಕಿ ನಂದಿಸಬೇಕು ಎಂಬುದರ ಕುರಿತಂತೆಯೂ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.
ಈ ವೇಳೆ ಎಸಿಎಫ್ ರವಿಕುಮಾರ್ ಮಾತನಾಡಿ, ಕಾಡಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಟ್ಯಾಂಕರ್ ಬಳಕೆಯನ್ನು ವಾಹನಗಳಿಗೆ ಅಳವಡಿಸಿಕೊಂಡು ಬೆಂಕಿ ಆರಿಸಬಹುದು. ಬೆಟ್ಟದ ಮೇಲೆ ಬೆಂಕಿ ಉರಿಯುತ್ತಿರುವ ಸಂದರ್ಭದಲೂ ಸಹ ಜೀಪಿಗೆ ಅಳವಡಿಸಿಕೊಂಡು ಮೂನ್ನೂರು ಮೀಟರ್ ಪೈಪ್ ಬಳಸಿಕೊಂಡು ಬೆಂಕಿ ನಿಯಂತ್ರಣ ಮಾಡಬಹುದು ಎಂದು ಹೇಳಿದರು.
ಈ ವರ್ಷ ಶೂನ್ಯ ಬೆಂಕಿ ವಲಯ ಮಾಡಲು ಯೋಜನೆ ರೂಪಿಸಲಾಗಿದೆ ಆದಷ್ಟು ಸಿಬ್ಬಂದಿ ಅರಣ್ಯದ ಬೀಟ್ ಮಾಡಬೇಕು. ಕಾಡಂಚಿನ ಜನರ ವಿಶ್ವಾಸ ಗಳಿಸಿ ಬೆಂಕಿಯ ಮಾಹಿತಿ ಇದ್ದರೆ ಇಲಾಖೆಯ ಸಿಬ್ಬಂದಿಗಳಿಗೆ ತಿಳಿಸುವಂತೆ ಮನವಿ ಮಾಡಿ ಎಂದು ಹೇಳಿದರು.
ಅಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಚಾರ ಮಾಡುವ ಪ್ರವಾಸಿಗರಿಗೆ ಮತ್ತು ವಾಹನ ಚಾಲಕರಿಗೆ ಸಂಚಾರದ ಸಮಯದಲ್ಲಿ ಮತ್ತು ಕಾಡಿನ ಮಧ್ಯೆ ಧೂಮಪಾನ ಮಾಡಿ ರಸ್ತೆಯ ಬದಿಯಲ್ಲಿ ಎಸೆಯಬಾರದು ಎಂಬ ತಿಳುವಳಿಕೆ ನೀಡುವಂತೆಯೂ ಸಿಬ್ಬಂದಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಲಯಾರಣ್ಯಾಧಿಕಾರಿ ಸಚಿನ್ ಶಶಿಧರ್ ಸೇರಿದಂತೆ ಅರಣ್ಯಇಲಾಖೆಯ ಸಿಬ್ಬಂದಿ ಇದ್ದರು.