ಬಂಡೀಪುರದಲ್ಲಿ ಇನ್ನು ನಡೆಯಲ್ಲ ಕಾಡುಗಳ್ಳರ ಆಟ
ಚಾಮರಾಜನಗರ, ಅಕ್ಟೋಬರ್ 19: ಎಷ್ಟೇ ಎಚ್ಚರ ವಹಿಸಿದರೂ ಬಂಡೀಪುರ ಅರಣ್ಯಕ್ಕೆ ನುಗ್ಗಿ ಬೇಟೆಯಾಡುವುದು, ಬೆಲೆಬಾಳುವ ಮರಗಳಿಗೆ ಕೊಡಲಿ ಹಾಕುವ ಪ್ರಕರಣಗಳು ನಡೆಯುತ್ತಲೇ ಇದ್ದವು. ಆದರೆ ಇನ್ನು ಮುಂದೆ ಇವಕ್ಕೆಲ್ಲ ಕಡಿವಾಣ ಹಾಕಿ ಅರಣ್ಯ ಕಾಪಾಡಲು ಅರಣ್ಯ ವಿಶೇಷ ಕಾರ್ಯಾಚರಣೆ ಪಡೆ ಸಜ್ಜಾಗಿ ನಿಂತಿದ್ದು, ಈ ಪಡೆಗೆ ಹೆಡಿಯಾಲ ಉಪ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಬಲ ತುಂಬಿದ್ದಾರೆ.
ಬಂಡೀಪುರ ಅಭಯಾರಣ್ಯ ಚಾಮರಾಜನಗರ ಜಿಲ್ಲೆ ಸೇರಿದಂತೆ ಮೈಸೂರು ಹಾಗೂ ರಾಜ್ಯದ ಗಡಿಮೀರಿ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೂ ಬೆಸೆದುಕೊಂಡಿದೆ. ಈ ಅಭಯಾರಣ್ಯದಲ್ಲಿ ನಡೆಯುವ ಹಲವು ರೀತಿಯ ಅಪರಾಧಗಳನ್ನು ನಿಯಂತ್ರಣ ಮಾಡುವುದೇ ಸವಾಲಾಗಿದೆ. ಇದೀಗ ಅರಣ್ಯ ವಿಶೇಷ ಕಾರ್ಯಾಚರಣೆ ಪಡೆಯ ಸಾರಥ್ಯವನ್ನು ಎಸಿಎಫ್ ರವಿಕುಮಾರ್ ವಹಿಸಿಕೊಳ್ಳುವುದರೊಂದಿಗೆ ತಂಡದ ಕಾರ್ಯಾಚರಣೆಗೆ ಹೊಸ ದಿಕ್ಕು ತೋರಿಸಿದ್ದಾರೆ. ರಾಜ್ಯ ಸರ್ಕಾರವು 2010 ರಲ್ಲಿ ಬಂಡೀಪುರಕ್ಕೆ ಅರಣ್ಯ ವಿಶೇಷ ಕಾರ್ಯಾಚರಣೆ ಪಡೆಯನ್ನು ನೀಡಿದೆ. ಮುಂದೆ ಓದಿ...
ಮಾನವ ವನ್ಯಜೀವಿ ಸಂಘಷಕ್ಕೆ ತಡೆ
ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ವಿಶೇಷ ಕಾರ್ಯಾಚರಣೆ ಪಡೆಯ ಸಿಬ್ಬಂದಿಯನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ಕಾಡಂಚಿನ ಗ್ರಾಮಗಳಲ್ಲಿ ಮಾನವ ವನ್ಯಜೀವಿ ಸಂಘಷ, ವನ್ಯಜೀವಿಗಳ ಕಳ್ಳಬೇಟೆಗೆ ಉರುಳು ಅಳವಡಿಸುವುದು, ಮರಗಳ್ಳತನ ಸೇರಿದಂತೆ ಅರಣ್ಯ ಕಾಯ್ದೆ ಉಲ್ಲಂಘನೆಯ ಪ್ರಕರಣಗಳು ಎಗ್ಗಿಲ್ಲದೆ ಸಾಗಿದ್ದವು. ಆದರೆ ಈಗ ಇದೆಲ್ಲಕ್ಕೆ ಕಡಿವಾಣ ಹಾಕಲು ಪ್ರಭಾರ ಎಸಿಎಫ್ ರವಿಕುಮಾರ್ ಅವರು ಅರಣ್ಯ ವಿಶೇಷ ಕಾರ್ಯಾಚರಣೆ ಪಡೆಗೆ ಅಗತ್ಯ ಸೌಲಭ್ಯಗಳನ್ನು ನೀಡಿ ಸಂಪೂರ್ಣ ಸಜ್ಜುಗೊಳಿಸಿದ್ದಾರೆ.
ಬಂಡೀಪುರ ಸಫಾರಿಗೆ ಹೋಗುವವರು ಇನ್ನು ಮೊಬೈಲ್ ಬಳಸುವಂತಿಲ್ಲ
ಮೂರು ಪ್ರತ್ಯೇಕ ತಂಡ ರಚನೆ
ಅರಣ್ಯ ವಿಶೇಷ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಪ್ರತಿ ದಿನವೂ ಕಾಡಂಚಿನ ಗ್ರಾಮಗಳಲ್ಲಿ ಕಾಲ್ನಡಿಗೆ ಮೂಲಕ ಸಾಗಿ ವನ್ಯಜೀವಿ ಬೇಟೆಗೆ ಅಳವಡಿಸಿರುವ ಉರುಳು ಪತ್ತೆ ಹಚ್ಚುವುದು, ಗುಪ್ತಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದಲ್ಲದೆ, ಮಾನವ ವನ್ಯಜೀವಿ ಸಂಘಷ ನಿಯಂತ್ರಣಕ್ಕೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ಪ್ರತಿ ತಂಡಕ್ಕೂ ವಾಹನ, ಎರಡು ಬೈಕ್ ಗಳು, ವಾಕಿಟಾಕಿ, ಬಂದೂಕುಗಳು, ಮೊಬೈಲುಗಳನ್ನು ನೀಡಿ ದೈನಂದಿನ ಕಾರ್ಯನಿರ್ವಹಣೆ ವರದಿಗೆ ವಾಟ್ಸಪ್ ಗ್ರೂಪ್ ರಚಿಸಲಾಗಿದ್ದು ಎಂ-ಸ್ಟ್ರೈಪ್ ಮೊಬೈಲ್ ಮೂಲಕ ಸಿಬ್ಬಂದಿಯ ಕಾರ್ಯವನ್ನು ದಾಖಲಿಸಲಾಗುತ್ತಿದೆ.
ಪ್ರಾಣಿಗಳ ಬೇಟೆಗಿಟ್ಟ ಉರುಳುಗಳ ಪತ್ತೆ ಕಾರ್ಯ
ಇದಲ್ಲದೆ, ಕಳ್ಳಬೇಟೆಗಾರರು ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ಉರುಳು ಹಾಕುವುದನ್ನು ಪತ್ತೆಹಚ್ಚಿ ತೆರವು ಮಾಡುವ ಜತೆಗೆ ಬಂಡೀಪುರದ ಶಫರ್ಡ್ ಡಾಗ್ ರಾಣಾ ನೆರವಿನಿಂದ ಹಂದಿಗಳ ಬೇಟೆಗೆ ಅಲ್ಲಲ್ಲಿ ಇಟ್ಟಿರುವ ಸಿಡಿಮದ್ದುಗಳನ್ನು ಪತ್ತೆಹಚ್ಚಲಾಗುತ್ತಿದೆ. ಕೂಂಬಿಂಗ್ ಸಮಯದಲ್ಲಿ ಪತ್ತೆಯಾದ ಉರುಳುಗಳನ್ನು ಆಯಾ ವಲಯಕ್ಕೆ ಒಪ್ಪಿಸಲಾಗುತ್ತಿದೆ. ಈಗಾಗಲೇ ಮೇಲುಕಾಮನಹಳ್ಳಿ ಸಮೀಪ 49 ಉರುಳು, ಪ್ಲಟೂನ್ 2 ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ನಲ್ಲಿ 13 ಹಾಗೂ ತಿತಿಮತಿ ವ್ಯಾಪ್ತಿಯಲ್ಲಿ 14 ಉರುಳುಗಳನ್ನು ಪತ್ತೆಹಚ್ಚಲಾಗಿದೆ.
ಕಾಡುಗಳ್ಳರಿಗೆ ಸಿಂಹಸ್ವಪ್ನವಾದ 'ರಾಣಾ'ನಿಗೆ ಸದ್ಯಕ್ಕಿಲ್ಲ ನಿವೃತ್ತಿ
ವಿಶೇಷ ಕಾರ್ಯಾಚರಣೆ ಪಡೆಯ ಸಾಧನೆ
ಹೆಡಿಯಾಲ ಉಪವಿಭಾಗದ ಎನ್ ಬೇಗೂರು ವಲಯದಲ್ಲಿ ಕಾಡಿನಿಂದ ಕಳಸ್ತೂರು, ಮೂರು ಬಂದ್ ಮುಂತಾದ ಗ್ರಾಮಗಳಲ್ಲಿ ಸಂಚರಿಸುತ್ತಾ ಜಾನುವಾರುಗಳನ್ನು ಕೊಂದು ಜನರಲ್ಲಿ ಆತಂಕವನ್ನುಂಟು ಮಾಡಿದ್ದ ಹುಲಿಯ ಚಲನವಲನ ಗಮನಿಸುತ್ತಿದ್ದ ಸಿಬ್ಬಂದಿ ಸೆರೆಹಿಡಿಯಲು ಅನುಮತಿ ದೊರೆತ ಕೇವಲ ಒಂದು ಗಂಟೆಯಲ್ಲಿ ಸೆರೆಹಿಡಿಯಲಾಗಿದೆ. ನಾಗರಹೊಳೆಯ ಕಲ್ಲಹಳ್ಳ ಸಮೀಪ ಹುಲಿಯುಗುರು ಕದ್ದಿದ್ದವರನ್ನು ರಾಣಾ ನೆರವಿನಿಂದ ಬಂಧಿಸಿದ್ದು, ಅಂತರಸಂತೆಯಲ್ಲಿ ತೇಗದ ಮರಗಳ್ಳರನ್ನು ಮಾಲು ಸಮೇತ ಹಿಡಿದ ಪ್ರಕರಣ, ಇಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆದು ಅರಣ್ಯಕ್ಕೆ ಬಿಟ್ಟಿರುವುದು ಹೀಗೆ ಹಲವು ಕಾರ್ಯಗಳನ್ನು ಅರಣ್ಯ ವಿಶೇಷ ಕಾರ್ಯಾಚರಣೆ ಪಡೆ ಮಾಡಿದೆ.
Recommended Video