ಬಂಡೀಪುರ ಕಾಡಂಚಿನಲ್ಲಿ ವನ್ಯಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಮಾಡಿದ್ದೇನು?
ಚಾಮರಾಜನಗರ, ಅಕ್ಟೋಬರ್ 16: ಬಂಡೀಪುರ ರಾಷ್ಟೀಯ ಉದ್ಯಾನವನದ ಕಾಡಂಚಿನ ಗ್ರಾಮಗಳಲ್ಲಿ ವನ್ಯ ಪ್ರಾಣಿಗಳು ನಾಡಿಗೆ ಲಗ್ಗೆಯಿಟ್ಟು ಮನುಷ್ಯರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ತಪ್ಪಿಸುವ ಸಲುವಾಗಿ ಕೆಬ್ಬೇಪುರ ಗ್ರಾಮದ ಹೊರವಲಯದಲ್ಲಿರುವ ಮಾಳಗಮ್ಮ ದೇವಿಗೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪೂಜೆ ಸಲ್ಲಿಸಿ ಒಳಿತು ಮಾಡುವಂತೆ ಪ್ರಾರ್ಥಿಸಿದ್ದಾರೆ.
ಹುಲಿ, ಆನೆ, ಚಿರತೆ ಸುಳಿದಾಡುವ ದಟ್ಟ ಅಭಯಾರಣ್ಯದಂಚಿನ ಗ್ರಾಮ ಕೆಬ್ಬೇಪುರ ಬಳಿಯಿರುವ ಶಕ್ತಿ ದೇವತೆ ಮಾಳಗಮ್ಮ ದೇವಿ ಕಾಡಂಚಿನ ಗ್ರಾಮಗಳತ್ತ ಬರುವ ಕಾಡು ಪ್ರಾಣಿಗಳ ಹಾವಳಿ ತಡೆದು ಜನ ಜಾನುವಾರುಗಳನ್ನು ರಕ್ಷಿಸುತ್ತಾಳೆ ಎಂಬ ಪ್ರತೀತಿಯಿದ್ದು ಅದರಂತೆ ಕೆಲವು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಪೂಜಾ ಕಾರ್ಯಕ್ಕೆ ಇದೀಗ ಮರು ಚಾಲನೆ ನೀಡಲಾಗಿದೆ.
ಬಂಡೀಪುರ ರಸ್ತೆಯಲ್ಲಿ ಸಂಚಾರ ನಿಷೇಧ ತೆರವಿನ ಹಿಂದೆ ರಾಜಕೀಯ ದುರುದ್ದೇಶ
ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಮಾನವ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗಿದ್ದು, ಮೇಲಿಂದ ಮೇಲೆ ಪ್ರಾಣಹಾನಿಯಾಗುತ್ತಿದೆ. ಇದಕ್ಕೆ ಕಾರಣ ಕೆಬ್ಬೇಪುರ ಗ್ರಾಮದ ಹೊರವಲಯದಲ್ಲಿರುವ ಮಾಳಗಮ್ಮ ದೇವಿಗೆ ಪೂಜೆ ನಿಲ್ಲಿಸಿದ್ದೇ ಎಂಬ ಆರೋಪವೂ ಕೇಳಿ ಬರುತ್ತಿತ್ತು. ಅಲ್ಲದೆ ಈ ವಿಚಾರ ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿ ನಡುವೆ ಮನಸ್ತಾಪಕ್ಕೂ ಕಾರಣವಾಗಿತ್ತು. ಇನ್ನು ಮಾಳಗಮ್ಮ ದೇವಾಲಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರ ಗ್ರಾಮದ ಹೊರವಲಯದಲ್ಲಿದೆ. ಈ ದೇವಾಲಯದ ರಾಜಗೋಪುರದಲ್ಲಿ ಹುಲಿ, ಸಿಂಹದ ಮೂರ್ತಿಗಳಿವೆ. ಹಿಂದಿನ ಕಾಲದಲ್ಲಿ ಪ್ರತಿವರ್ಷವೂ ಗ್ರಾಮದ ಜನ ಈ ದೇವಿಗೆ ಪೂಜೆ ಮಾಡಿ ಕಾಡು ಪ್ರಾಣಿಗಳಿಂದ ರಕ್ಷಿಸುವಂತೆ, ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ದೇವಾಲಯದಲ್ಲಿ ಪೂಜೆ, ಹಬ್ಬ ನಡೆಯದೇ ಇರುವುದು ಹುಲಿ ಮನುಷ್ಯರ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಳ್ಳಲು ಕಾರಣವಾಗಿದೆ ಎಂಬ ಮಾತುಗಳು ಗ್ರಾಮದ ವ್ಯಾಪ್ತಿಯಲ್ಲಿ ಕೇಳಿ ಬಂದಿತ್ತು.
ಇದನ್ನೆಲ್ಲ ಮನಗಂಡ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕೆಬ್ಬೇಪುರ, ಹುಂಡೀಪುರ, ಚೌಡಹಳ್ಳಿ, ಮಂಗಲ, ಜಕ್ಕಹಳ್ಳಿ ಸೇರಿದಂತೆ ಏಳು ಗ್ರಾಮಗಳ ಮುಖಂಡರೊಂದಿಗೆ ಕೆಬ್ಬೇಪುರದಲ್ಲಿರುವ ಮಾಳಗಮ್ಮ ದೇವಿಗೆ ಪೂಜೆ ಮಾಡುವ ಮೂಲಕ ಮುಂದೆ ಕಾಡು ಪ್ರಾಣಿಗಳ ಹಾವಳಿ ನಡೆಯದಂತೆ ಮಂಗಳವಾರ ಮಾಳಗಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವಾಲಯಕ್ಕೆ ಆಗಮಿಸಿದ ಗ್ರಾಮಸ್ಥರಿಗೆ ಪ್ರಸಾದ ನೀಡಲಾಗಿದೆ.
ಇನ್ಮುಂದೆ ಬಂಡೀಪುರದ ಹುಲಿಯಮ್ಮನ ದೇಗುಲಕ್ಕೆ ಸಲೀಸಾಗಿ ಹೋಗುವಂತಿಲ್ಲ!
ಈ ಕುರಿತಂತೆ ಮಾತನಾಡಿರುವ ಬಂಡೀಪುರ ಹುಲಿ ಯೋಜನೆಯ ನಿದೇರ್ಶಕರಾದ ಟಿ. ಬಾಲಚಂದ್ರ ಅವರು, "ಸರ್ಕಾರಿ ನೌಕರನಾಗಿ ಅಲ್ಲದೆ ಸಾಮಾನ್ಯ ವ್ಯಕ್ತಿಯಾಗಿ ಮಾಳಗಮ್ಮ ದೇವಿಗೆ ಹರಕೆ ಹೊತ್ತಿದ್ದೆ. ಅದರಂತೆ ದೈವಿ ಶಕ್ತಿ ಏನೆಂಬುದು ಹುಲಿ ಸೆರೆಯಾಗಲು ಕಾರಣವಾಯಿತು. ದೈವಿ ಶಕ್ತಿಯ ಮುಂದೆ ಏನೂ ನಡೆಯದು ಎನ್ನುವುದಕ್ಕೆ ಇದು ಸಾಕ್ಷಿ. ಹರಕೆಯಂತೆ ಮಂಗಳವಾರ ಇಲ್ಲಿಗೆ ಬಂದು ಗ್ರಾಮಸ್ಥರೊಂದಿಗೆ ಪೂಜೆ ಸಲ್ಲಿಸಲಾಗಿದೆ" ಎಂದು ಹೇಳಿದ್ದಾರೆ.