ಚಾಮರಾಜನಗರ: ನೀಲಗಿರಿ ಮರಗಳಿಗೆ ಅರಣ್ಯ ಇಲಾಖೆಯಿಂದಲೇ ಕೊಡಲಿ ಏಟು!
ಚಾಮರಾಜನಗರ, ಮಾರ್ಚ್ 21: ನೀಲಗಿರಿ ಮರಗಳು ವನ್ಯ ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ಮರಗಳ ಅಡಿಯಲ್ಲಿ ಯಾವುದೇ ರೀತಿಯ ಹಸಿರು ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೀಲಗಿರಿ ಮರದ ಬದಲು ಇತರೆ ಮರಗಳನ್ನು ಬೆಳೆಸುವುದರಿಂದ ಪ್ರಾಣಿಗಳಿಗೆ ಮತ್ತು ನಿಸರ್ಗಕ್ಕೂ ಉಪಯೋಗ ಎಂಬ ಮಾತುಗಳು ಹಿಂದಿನಿಂದಲೂ ಕೇಳಿ ಬರುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈಗಾಗಲೇ ಅರಣ್ಯಗಳಲ್ಲಿರುವ ಬಹಳ ಮರಗಳು ವನ್ಯಪ್ರಾಣಿಗಳಿಗೆ ಕಂಟಕವಾಗಿ ಮಾರ್ಪಟ್ಟಿವೆ. ಅದರಂತೆ ಇದೀಗ ಬಂಡೀಪುರ ರಾಷ್ಟ್ರೀಯ ಉದ್ಯಾನದ ವಿವಿಧ ವಲಯಗಳಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಈ ಪ್ರದೇಶದಲ್ಲಿರುವ ಮರಗಳ ಎಣಿಕೆ ಕಾರ್ಯವನ್ನು ಆರಂಭಿಸಿರುವುದು ಕಂಡು ಬಂದಿದೆ.
ಮರಗಳಿಗೆ ಗಂಡಾಂತರ ತರಲಿದ್ದ ಮಸೂದೆ ಹಿಂತೆಗೆದುಕೊಂಡ ಸರಕಾರ
ಹುಲಿಯೋಜನೆಯ ಓಂಕಾರ್ ವಲಯದ ಕುರುಬರಹುಂಡಿ, ನಾಗಣಾಪುರ ಬ್ಲಾಕ್ ಗಳು ಸೇರಿದಂತೆ ಸುಮಾರು 40 ಚದರ ಕಿಲೋಮೀಟರ್ ಅರಣ್ಯದಲ್ಲಿ ಬೆಳೆದಿರುವ ಮರಗಳನ್ನು ತೆರವುಗೊಳಿಸಲು ಕಾರ್ಯಕ್ಕೆ ಮುಂದಾಗಿದೆ. ಓಂಕಾರ್ ವಲಯದಲ್ಲಿ ರಾಜ್ಯ ಅರಣ್ಯ ನಿಗಮವು ನೀಲಗಿರಿ ಸಸಿಗಳನ್ನು ನೆಟ್ಟು ನೆಡುತೋಪನ್ನು ಬೆಳೆಸಿದ್ದು ನಂತರ ಇದನ್ನು 2007ರಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿತ್ತು. ಇಡೀ ಪ್ರದೇಶದಲ್ಲಿ ನೀಲಗಿರಿ ಮರಗಳಿದ್ದುದರಿಂದ ಕೆರೆಕಟ್ಟೆಗಳು ಬೇಗನೆ ಒಣಗಿ ಅಂತರ್ಜಲ ಮಟ್ಟದಲ್ಲಿ ಇಳಿಕೆಯಾಗಿತ್ತು.
ಇಲ್ಲಿ ದಟ್ಟವಾದ ಅರಣ್ಯ ಪ್ರದೇಶವಿಲ್ಲದೆ ವನ್ಯಜೀವಿಗಳ ಸಂತತಿ ವೃದ್ಧಿಗೆ ಸಹಕಾರಿಯಾಗಿರಲಿಲ್ಲ. ಇಲ್ಲಿಗೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ನೀಲಗಿರಿ ನೆಡುತೋಪಿನಿಂದ ವನ್ಯಜೀವಿಗಳ ಆವಾಸಕ್ಕೆ ಯಾವುದೇ ಉಪಯೋಗವಿಲ್ಲ. ಆದ್ದರಿಂದ ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹಲವಾರು ಬಾರಿ ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ನೆಡುತೋಪಿನಲ್ಲಿರುವ ಮರಗಳನ್ನು ತೆರವುಗೊಳಿಸಿ ಹೊಸದಾಗಿ ಸಸಿಗಳನ್ನು ನೆಟ್ಟು ಬೆಳೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಇಲ್ಲಿರುವ ಮರಗಳ ಗಣತಿ ಪ್ರಾರಂಭವಾಗಿದ್ದು ಸದ್ಯ 14 ಬ್ಲಾಕ್ ಎಣಿಕೆ ಕಾರ್ಯನಡೆಸಲಾಗುತ್ತಿದೆ. ಪ್ರತಿ 1 ಚದರ ಕಿಲೋ ಮೀಟರ್ ಗೆ 25 ಪ್ಲಾಟ್ ಮಾಡಿಕೊಳ್ಳಲಾಗುತ್ತದೆ. ಪ್ರತಿ ಪ್ಲಾಟ್ ನಲ್ಲಿ ಒಟ್ಟು 100 ಬ್ಲಾಕ್ ಗುರುತಿಸಿ ಇಲ್ಲಿರುವ ಮರಗಳ ಸರಾಸರಿಯನ್ನು ಗಣತಿ ಮಾಡಲಾಗುತ್ತಿದೆ. ನಂತರ ಒಟ್ಟಾರೆ 40 ಚ.ಕಿಮೀ ಅರಣ್ಯದಲ್ಲಿರುವ ಒಟ್ಟು ಮರಗಳ ಲೆಕ್ಕ ದೊರಕಲಿದೆ.
ಟೆಂಡರ್ ಕರೆದು ಮರಗಳನ್ನು ಬುಡಸಮೇತ ತೆರವುಗೊಳಿಸುವ ಹಾಗೂ ಸಾಗಾಣೆ ಮಾಡುವ ಹೊಣೆ ಗುತ್ತಿಗೆದಾರರಿಗೆ ನೀಡುವ ಸಾಧ್ಯತೆಯಿದ್ದು ಇದರಿಂದ ಸರ್ಕಾರಕ್ಕೆ ಒಳ್ಳೆಯ ಆದಾಯ ಬರಲಿದೆ. ತೆರವಾದ ಮರಗಳಿದ್ದ ಸ್ಥಳದಲ್ಲಿ ಹೊಸದಾಗಿ ಸಸಿಗಳನ್ನು ನೆಟ್ಟು ಕನಿಷ್ಠ ಮೂರು ವರ್ಷಗಳ ನಿರ್ವಹಣೆ ಮಾಡಬೇಕಾಗಿರುವುದರಿಂದ ಸುತ್ತಲೂ ಸೋಲಾರ್ ಬೇಲಿ ನಿರ್ಮಾಣ ಮಾಡಲು ಅಂದಾಜು ವೆಚ್ಚದ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎನ್ನಲಾಗಿದೆ.