ಪ್ರಾಣಿಗಳಿಗೂ ಕೊರೊನಾ; ರಾಮಾಪುರ ಆನೆ ಶಿಬಿರದತ್ತ ಅರಣ್ಯ ಇಲಾಖೆ ನಿಗಾ
ಚಾಮರಾಜನಗರ, ಏಪ್ರಿಲ್ 18: ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿರುವುದರಿಂದ ಜನರು ಮಾತ್ರವಲ್ಲದೆ, ಪ್ರಾಣಿಗಳ ಬಗ್ಗೆಯೂ ನಿಗಾವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಅಮೆರಿಕಾದ ನ್ಯೂಯಾರ್ಕ್ ನಲ್ಲಿರುವ ಮೃಗಾಲಯದ ಹುಲಿಗೆ ಕೊರೊನಾ ವೈರಸ್ ತಗುಲಿರುವ ಸುದ್ದಿಯಾಗುತ್ತಿದ್ದಂತೆಯೇ ಜಗತ್ತಿನಲ್ಲಿರುವ ಎಲ್ಲ ಮೃಗಾಲಯಗಳು, ಪ್ರಾಣಿ ಶಿಬಿರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ದೇಶ ಮಾತ್ರವಲ್ಲದೆ, ರಾಜ್ಯದಲ್ಲಿರುವ ಎಂಟು ಮೃಗಾಲಯಗಳಲ್ಲಿ ರಾಸಾಯನಿಕ ಸಿಂಪಡಣೆಯೊಂದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಗೊಳಿಸಿ ಕಣ್ಣಲ್ಲಿ ಕಣ್ಣಿಟ್ಟು ಕಾಯಲಾಗುತ್ತಿದೆ.
ಕೊರೊನಾದಿಂದ ಕೊಡಗಿನ ದುಬಾರೆ ಸಾಕಾನೆ ಶಿಬಿರದತ್ತಲೂ ಕಣ್ಣು
ಚಾಮರಾಜನಗರ ಜಿಲ್ಲೆಯಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಸರ್ವ ರೀತಿಯಲ್ಲಿಯೂ ಕ್ರಮ ಕೈಗೊಂಡಿದ್ದು, ಬಂಡೀಪುರ ಸೇರಿದಂತೆ ಹಲವು ಸಾಕಾನೆ ಶಿಬಿರಗಳತ್ತ ನಿಗಾವಹಿಸಲಾಗಿದೆ. ಈಗಾಗಲೇ ಬಂಡೀಪುರ ಅಭಯಾರಣ್ಯದ ರಾಮಾಪುರ ಆನೆ ಶಿಬಿರದಲ್ಲಿ ಸ್ಯಾನಿಟೈಜರ್ ಸಿಂಪಡಣೆಯನ್ನು ಅರಣ್ಯ ಇಲಾಖೆ ಮಾಡಿದ್ದು, ಸಾಕಾನೆಗಳನ್ನು ದೂರವಿರುವಂತೆ ನೋಡಿಕೊಳ್ಳಲಾಗುತ್ತಿದೆ.
ಇದೀಗ ಎನ್ಟಿಸಿಎ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಡಾ.ವೈಭವ್ ಸಿ.ಮಾಥುರ್ ಪತ್ರ ಬರೆದು ಸಾಕಾನೆ ಶಿಬಿರಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಐನೂರು ಮಾರುಕಟ್ಟೆ ಗುಡಿ ವಲಯದ ರಾಮಾಪುರ ಆನೆ ಶಿಬಿರದಲ್ಲಿ ಮಾವುತರ ಮನೆಗಳ ಹಾಗೂ ಆನೆ ಶಿಬಿರಕ್ಕೂ ಸ್ಯಾನಿಟೈಜರ್ ಸಿಂಪಡಣೆ ಮಾಡುವುದರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮಾವುತರಿಗೆ ಸೂಚಿಸಲಾಗಿದೆ. ಈ ಆನೆ ಶಿಬಿರದಲ್ಲಿ ಹದಿಮೂರು ಸಾಕಾನೆಗಳಿದ್ದು, ಇದರಲ್ಲಿ ಏಳು ಗಂಡಾನೆಯಾಗಿದ್ದರೆ, ಆರು ಹೆಣ್ಣಾನೆಗಳಾಗಿವೆ.
ಈ ಆನೆಗಳಿಗೆ ಪೌಷ್ಠಿಕ ಆಹಾರವಾದ ಹುರುಳಿಕಾಳು, ಕುಸುಬಲಕ್ಕಿ, ಬೆಲ್ಲ, ತೆಂಗಿನಕಾಯಿ, ಹೆಸರುಕಾಳು, ಉದ್ದಿನಕಾಳು, ಗೋಧಿ, ಹರಳ್ಳಣ್ಣೆ, ಬೇವಿನ ಎಣ್ಣೆ ಹಾಗೂ ಉಪ್ಪು ನೀಡಲಾಗುತ್ತಿದೆ. ಅಲ್ಲದೆ ಪ್ರತಿನಿತ್ಯ ಎರಡು ಸ್ನಾನ ಮಾಡಿಸಿ ಅವುಗಳ ಆರೋಗ್ಯವನ್ನು ನೋಡಿಕೊಳ್ಳಲಾಗುತ್ತಿದೆ. ಎನ್.ಟಿ.ಸಿ.ಎ ನಿರ್ದೇಶನದ ಮೇರೆಗೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ರಾಮಾಪುರ ಆನೆ ಶಿಬಿರದಲ್ಲಿ ಮಾವುತರಿಗೆ ಸ್ಯಾನಿಟೈಜರ್ ಹಾಗೂ ಮಾಸ್ಕ್ ವಿತರಣೆ ಮಾಡಲಾಗಿದೆ. ಜತೆಗೆ ಆನೆಗಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತಿದೆ ಎಂದು ಬಂಡೀಪುರ ರಾಷ್ಟ್ರೀಯು ಉದ್ಯಾನವನದ ನಿದೇರ್ಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.