ಕಾಡುಗಳ್ಳರಿಗೆ ಸಿಂಹಸ್ವಪ್ನವಾದ 'ರಾಣಾ'ನಿಗೆ ಸದ್ಯಕ್ಕಿಲ್ಲ ನಿವೃತ್ತಿ
ಚಾಮರಾಜನಗರ, ಸೆಪ್ಟೆಂಬರ್ 22: ಅರಣ್ಯಕ್ಕೆ ಬೆಂಕಿ ಇಡುವವರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಶ್ವಾನ ಬಂಡೀಪುರದ ರಾಣಾ ಇನ್ನೆರಡು ವರ್ಷ ಕಾರ್ಯನಿರ್ವಹಿಸಲಿದ್ದಾನೆ ಎಂಬ ವಿಚಾರ ಸಂತಸ ತಂದಿದೆ. ಇದಕ್ಕೆ ಕಾರಣ ಈ ಹಿಂದೆ ರಾಣಾ ನಿವೃತ್ತಿಯಾಗುತ್ತಿದ್ದಾನೆ ಎಂಬ ಸುದ್ದಿ ಹರಡಿತ್ತು. ಆದರೆ ಇದೀಗ ಆತನಿಗೆ ಸದ್ಯಕ್ಕೆ ನಿವೃತ್ತಿಯಿಲ್ಲ ಎನ್ನುವುದು ಕಾಡುಗಳ್ಳರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದೆ. ಬಂಡೀಪುರದಲ್ಲಿ ಕಳ್ಳತನ ನಡೆಸುತ್ತಿದ್ದವರಿಗೆ ರಾಣಾ ಎಂದರೆ ಭಯ ಏಕೆಂದರೆ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ರಾಣಾ, ಹಲವರನ್ನು ಜೈಲು ಕಂಬಿ ಎಣಿಸುವಂತೆ ಮಾಡಿದ್ದಾನೆ. ಇನ್ನೊಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ರಾಣಾ ಎಂದರೆ ಅದೇನೋ ಪ್ರೀತಿ.
ರಾಣಾನ ಸಾಧನೆಯನ್ನು ಪರಿಗಣಿಸಿ ಆತ ಇನ್ನೆರಡು ವರ್ಷ ಮುಂದುವರೆಯಲಿ ಎಂಬ ಅಭಿಪ್ರಾಯಗಳು ಅರಣ್ಯ ಅಧಿಕಾರಿಗಳದ್ದಾಗಿದೆ. ಮುಂದಿನ ದಿನಗಳಲ್ಲಿ ರಾಣಾ ನಿವೃತ್ತಿಯಾಗಲೇಬೇಕು. ಹೀಗಾಗಿ ರಾಣಾನಿಗೆ ಉತ್ತರಾಧಿಕಾರಿ ಯಾರು ಎಂಬ ಕುತೂಹಲವೂ ಜನರಲ್ಲಿ ಮನೆ ಮಾಡಿದೆ.
ಬಂಡಿಪುರ ಅರಣ್ಯದಲ್ಲಿ 1,600ಕ್ಕೂ ಹೆಚ್ಚು ಆನೆಗಳು: ಆಂತರಿಕ ಸಮೀಕ್ಷೆ ಮಾಹಿತಿ
ರಾಣಾ ಈಗಲೂ ಸಮರ್ಥನೇ
ಕೆಲವು ದಿನಗಳ ಹಿಂದೆಯಷ್ಟೆ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ, ಹುಲಿ ಕೊಂದು ಕಾಲು ಕತ್ತರಿಸಿಕೊಂಡು ಹೋಗಿದ್ದ ಪ್ರಕರಣವನ್ನು ಪತ್ತೆ ಮಾಡುವಲ್ಲಿ ರಾಣಾ ಅರಣ್ಯಾಧಿಕಾರಿಗಳಿಗೆ ಸಹಾಯ ಮಾಡಿದ್ದನು. ಅಷ್ಟೇ ಅಲ್ಲದೆ ಆರೋಪಿಗಳನ್ನು ಪತ್ತೆ ಹಚ್ಚಲು ಇನ್ನೂ ಕೂಡ ನಾನು ಸಮರ್ಥನಾಗಿದ್ದೇನೆ ಎಂಬುದನ್ನು ತೋರಿಸಿ ಕೊಟ್ಟಿದ್ದಾನೆ.
ಜರ್ಮನ್ ಶೆಪರ್ಡ್ ತಳಿಯ ರಾಣಾ, ಭೋಪಾಲ್ ನಲ್ಲಿರುವ ಪೊಲೀಸ್ 23ನೇ ಬೆಟಾಲಿಯನ್ ನಲ್ಲಿ 9 ತಿಂಗಳು ತರಬೇತಿ ಪಡೆದು ಬಂದಿದ್ದು, ಈಗ ರಾಣಾನಿಗೆ ಏಳು ವರ್ಷದ ಪ್ರಾಯ. ಆದರೂ ಕಾರ್ಯ ನಿರ್ವಹಿಸುವುದಕ್ಕೆ ಹಿಂಜರಿಯದ ಈತ ತನ್ನ ಚುರುಕು ಮತಿಯಿಂದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಸದಾ ಮುಂದಾಗಿರುತ್ತಾನೆ.
ಇನ್ನೆರಡು ವರ್ಷ ಆತ ಸೇವೆ ಸಲ್ಲಿಸಲಿದ್ದಾನೆ
ಈತನ ನಿರ್ವಹಣೆಯ ಕಾರ್ಯವನ್ನು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯದ ಮೇಲುಕಾಮನಹಳ್ಳಿ ಸಮೀಪದ ಹುಲಿ ಸಂರಕ್ಷಣಾ ವಿಶೇಷ ಪಡೆಯ (ಎಸ್.ಟಿ.ಪಿ.ಎಫ್) ಕಾಳ ಕಾಳಕ್ಕರ್ ರವರು ಮಾಡುತ್ತಿದ್ದಾರೆ. ರಾಣಾನಿಗೆ ವಯಸ್ಸಾಗುತ್ತಿರುವುದರಿಂದ ವಯಸ್ಸಿಗೆ ತಕ್ಕಂತೆ ನಿವೃತ್ತಿ ಮಾಡುವುದು ಅನಿವಾರ್ಯ. ಆದರೆ ರಾಣಾ ಆರೋಗ್ಯವಂತನಾಗಿರುವುದಲ್ಲದೇ ಆಜ್ಞೆಗಳನ್ನು ಕರಾರುವಕ್ಕಾಗಿ ಪಾಲಿಸುವುದರಿಂದ ಇನ್ನೆರಡು ವರ್ಷ ಆತ ಸೇವೆ ಸಲ್ಲಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
ರಾಣಾನ ಸಾಧನೆಗೆ ಸಾಟಿಯಿಲ್ಲ
ಇದುವರೆಗೆ ರಾಣಾ ಪತ್ತೆ ಹಚ್ಚಿದ ಪ್ರಕರಣಗಳನ್ನು ನೋಡಿದ್ದೇ ಆದರೆ ಆತನ ಸಾಧನೆ ಏನು ಎಂಬುದು ಗೊತ್ತಾಗಿ ಬಿಡುತ್ತದೆ. 2016 ರಲ್ಲಿ ಸಾಗವಾನಿ ಮರ ಕಳ್ಳಸಾಗಣೆ ಪತ್ತೆ, 2016 ರಲ್ಲಿ ತಮಿಳುನಾಡಿನ ಗುಡಲೂರು ಬಳಿ ನರಹಂತಕ ಹುಲಿಯನ್ನು ಪತ್ತೆ ಹಚ್ಚುವಲ್ಲಿ ಸಹಕಾರ ನೀಡಿದ್ದನು. 2016 ರಲ್ಲಿ ಬಂಡೀಪುರದ ಓಂಕಾರ್ ಅರಣ್ಯ ವಲಯದಲ್ಲಿ ಚಿರತೆಗೆ ವಿಷ ಹಾಕಿದವರನ್ನು ಪತ್ತೆ ಹಚ್ಚಿದ್ದನು.
2017 ರಲ್ಲಿ ಶ್ರೀರಂಗಪಟ್ಟಣದಲ್ಲಿ ಶ್ರೀಗಂಧ ಕಳ್ಳರ ಪತ್ತೆ ಹಚ್ಚಿದ್ದು, 2017 ರಲ್ಲಿ ಪ್ರಿನ್ಸ್ ಹುಲಿಯ ಕಳೇಬರ ಹುಡುಕಿ ಕೊಟ್ಟಿದ್ದನು. 2018 ರಲ್ಲಿ ನಾಗರಹೊಳೆಯ ಡಿ.ಬಿ ಕುಪ್ಪೆಯಲ್ಲಿ ಮೃತಪಟ್ಟ ಜಿಂಕೆಯನ್ನು ಪತ್ತೆ ಹಚ್ಚಿದ್ದರೆ, 2018 ರಲ್ಲಿ ಮೈಸೂರಿನ ಹಾರೋಹಳ್ಳಿಯ ಹುಲಿ ಸಾವು ಪ್ರಕರಣ, ನಾಗರಹೊಳೆಯ ಅಂತರಸಂತೆಯಲ್ಲಿ ದೋಣಿ ಕದ್ದವರನ್ನು ಪತ್ತೆ ಹಚ್ಚಿದ್ದು ಈತನ ಸಾಧನೆಯೇ.
Recommended Video
ಯಾರಾಗಬಹುದು ಉತ್ತರಾಧಿಕಾರಿ?
ಇನ್ನು 2019 ರಲ್ಲಿ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ನಾಡಿಗೆ ಬರುತ್ತಿದ್ದ ಹುಲಿಯನ್ನು ಪತ್ತೆ ಹಚ್ಚಿದ್ದು. ಹುಣಸೂರಿನ ಸತ್ತಳ್ಳಿಯಲ್ಲಿ ಹುಲಿ ಸಾವಿನ ಪ್ರಕರಣ ಭೇದಿಸಿದ್ದು, 2019 ರಲ್ಲಿ ಗುಂಡ್ಲುಪೇಟೆಯ ಪಾರ್ವತಿ ಬೆಟ್ಟದಲ್ಲಿ ಹುಲಿ ಹಾಗೂ ಚಿರತೆ ಮೃತಪಟ್ಟ ಪ್ರಕರಣದಲ್ಲಿ ಸಹಾಯ ಮಾಡಿದ್ದು, ಗುಂಡ್ಲುಪೇಟೆಯಲ್ಲಿ ಮೃತಪಟ್ಟ ಚಿರತೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಹೀಗೆ ರಾಣಾನ ಸಾಹಸಗಾಥೆ ಮುಂದುವರೆಯುತ್ತಲೇ ಸಾಗುತ್ತಿದೆ.