ಕಾಡಿನಲ್ಲಿ ಬೆಂಕಿ ನಂದಿಸೋದು ಬಿಟ್ಟು ಸೆಲ್ಫೀ ತೆಗೆಯೋದ್ರಲ್ಲಿ ಬಿಜಿಯಾದ್ರೆ ಹೇಗೆ
ಮೈಸೂರು, ಏಪ್ರಿಲ್ 27 : ಕಳೆದ ಫೆಬ್ರವರಿ - ಮಾರ್ಚ್ ನಿಂದೀಚೆಗೆ ಇಡೀ ಬಂಡೀಪುರ ಬೆಂಕಿಯ ಕೆನ್ನಾಲೆಗೆ ಹೊತ್ತಿ ಉರಿದಿತ್ತು. ಆದರೆ ಬೆಂಕಿ ನಂದಿಸಲು ಬಂದ ಸ್ವಯಂಸೇವಕರು ಮಾತ್ರ ಸೆಲ್ಫೀ ತೆಗೆದಯುವುದರಲ್ಲಿ ಬಿಜಿಯಾಗಿದ್ದರು.
ರಾಜ್ಯದ ಮೂಲೆ ಮೂಲೆಗಳಿಂದಲೂ ಸ್ವಯಂಸೇವಕರ ಅಗತ್ಯತೆಗಾಗಿ ಅರಣ್ಯ ಇಲಾಖೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು. ಅಲ್ಲದೆ ಬೆಂಕಿಯನ್ನು ಶಮನಗೊಳಿಸಲು ಸ್ವಯಂಸೇವಕರು ಧಾವಿಸಿ ಬರುವಂತೆ ಚಿತ್ರನಟರು ಹಾಗೂ ಅನೇಕ ರಾಜಕೀಯೇತರ ಮುಖಂಡರು ಕೂಡ ಕರೆ ನೀಡಿದ್ದರು.
ಆದರೆ ಬೆಂಕಿ ನಂದಿಸಲು ಹೋದ ಸ್ವಯಂಸೇವಕರ ವರ್ತನೆಯೇ ಬೇರೆಯದ್ದಾಗಿತ್ತು. ನಿಜವಾದ ಅಗ್ನಿ ಶಮನದ ಬದಲಿಗೆ ಬೆಂಕಿ ಸ್ವಯಂ ಸೇವಕರು ಅಲ್ಲಿಗೆ ಬಂದಿದ್ದ ಕಾರ್ಯವನ್ನೇ ಮರೆತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಹೆಚ್ಚು ನಿರತರಾಗಿದ್ದರು ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳ ನುಡಿ.
ಹೌದು, ಈ ಕಾರಣಕ್ಕಾಗಿಯೇ ಇನ್ನು ಮುಂದೆ ಅಕಸ್ಮಾತ್ ಬೆಂಕಿ ಕಾಣಿಸಿಕೊಂಡ ಪಕ್ಷದಲ್ಲಿ ಸ್ವಯಂ ಸೇವಕರನ್ನು ಕರೆ ಕೊಡುವ ಬದಲಿಗೆ ಸ್ಥಳೀಯರನ್ನೇ ಈ ಕಾರ್ಯಕ್ಕೆ ತೊಡಗಿಸಿಕೊಳ್ಳುವ ಚಿಂತನೆಯನ್ನು ಅರಣ್ಯ ಇಲಾಖೆ ನಡೆಸಿದೆ.
ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬದಲು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದರಲ್ಲಿ ಹೆಚ್ಚು ಕಾರ್ಯ ನಿರತರಾಗಿರುತ್ತಾರೆ. ಇದೇ ಕಾರಣಕ್ಕಾಗಿ ಈ ನಿರ್ಧಾರವನ್ನು ಸಿಬ್ಬಂದಿ ಕೈಗೊಂಡಿದ್ದಾರೆ.
ಕಾಡಂಚಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಾಗ ಹತೋಟಿಗೆ ತಂದು ಬೆಂಕಿಯನ್ನು ಶಮನಗೊಳಿಸುವುದು ಹರಸಾಹಸದ ಕೆಲಸ. ಇಂತಹ ವೇಳೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸ್ವಯಂಸೇವಕರ ಕಡೆ ನೋಡುವುದು ಮತ್ತೊಂದು ದೊಡ್ಡ ಕೆಲಸ.
ಹಾಗಾಗಿ ಸ್ವಯಂ ಸೇವಕರನ್ನು ಹೊರತುಪಡಿಸಿ ಸ್ಥಳೀಯರಿಗೆ ತರಬೇತಿ ನೀಡಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದಾಗಲಿದ್ದೇವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್ ತಿಳಿಸಿದ್ದಾರೆ.
ನಮ್ಮ ಕಾಡುಗಳನ್ನು ರಕ್ಷಿಸಲು ಹೊರಗಿನವರ ಸಹಾಯ ಬೇಡ:ಅರಣ್ಯ ಇಲಾಖೆ
ಅರಣ್ಯ ಇಲಾಖೆಯು ಸ್ಥಳೀಯರ ಸಹಾಯವನ್ನು ಪಡೆಯಲು ಈಗಾಗಲೇ ಕರೆ ನೀಡಿದ್ದಾರೆ. ಅವರು ಕೆಲಸ ಮುಗಿದ ನಂತರವೇ ಹಿಂತಿರುಗುತ್ತಾರೆ. ಇಲಾಖೆಯು ಇವರನ್ನು ತಮ್ಮ ಅತಿಥಿಗಳೆಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಅಲ್ಲದೆ ಸ್ವಯಂಸೇವಕರಂತೆ ಇವರಿಗೆ ವಸತಿ ಸೌಕರ್ಯ ಕುಡಿಯುವ ಮತ್ತೆ ತಿನ್ನುವ ವ್ಯವಸ್ಥೆಯನ್ನು ಸಹ ಒದಗಿಸುವುದಿಲ್ಲ. ಬಂಡೀಪುರದಂತಹ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದ್ದು, ಇತರೆ ವನ್ಯ ಪ್ರಾಣಿಗಳಿಂದ ರಕ್ಷಣೆ ಪಡೆಯುವುದು ಹೇಗೆ ಎಂಬುದು ಇವರಿಗೆ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ಅವರ ಸಹಾಯ ಹೆಚ್ಚು ಉಪಯುಕ್ತವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.