ಬಂಡೀಪುರ ಸಫಾರಿಗೆ ಹೋಗುವವರು ಇನ್ನು ಮೊಬೈಲ್ ಬಳಸುವಂತಿಲ್ಲ
ಚಾಮರಾಜನಗರ, ಸೆಪ್ಟೆಂಬರ್ 15: ಬಂಡೀಪುರದಲ್ಲಿ ಸಫಾರಿಗೆ ಹೋಗುವ ಪ್ರವಾಸಿಗರು ಇನ್ನು ಮುಂದೆ ಪ್ರಾಣಿಗಳ, ಅಲ್ಲಿನ ಪ್ರಕೃತಿಯ ಸೌಂದರ್ಯವನ್ನು, ಸಫಾರಿಯ ಅನುಭವವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ಸಾಧ್ಯವಿಲ್ಲ. ಇನ್ನು ಮುಂದೆ ಸಫಾರಿಗೆ ತೆರಳುವ ಪ್ರವಾಸಿಗರು ಮೊಬೈಲ್ ಬಳಸದಂತೆ ಅರಣ್ಯ ಇಲಾಖೆ ನಿಷೇಧವೇರಿದೆ.
ವನ್ಯ ಪ್ರಾಣಿಗಳ ಹಿತದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಫಾರಿಗೆ ಮೊಬೈಲ್ ನಿಷೇಧ ಮಾಡಿ ಅರಣ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ. ಯಾರೂ ಸಫಾರಿಗೆ ತೆರಳುವ ವೇಳೆ ಮೊಬೈಲ್ ಬಳಸದಂತೆ ಸೂಚನೆ ಕೊಟ್ಟಿದ್ದಾರೆ.
ಬಂಡೀಪುರದಲ್ಲಿ ಸುಸೂತ್ರ ಸಫಾರಿಗೆ ಹೀಗೊಂದು ಹೊಸ ಕ್ರಮ
Recommended Video
ದೇಶದ ಜಿಮ್ ಕಾರ್ಬೆಟ್, ಥಾಡಾ, ಕಡಬ ಸೇರಿದಂತೆ ಬೇರೆಲ್ಲಾ ಕಡೆ ಎನ್ ಟಿಸಿಎ ನಿಯಮದಂತೆ ಮೊಬೈಲ್ ಬಳಕೆಗೆ ನಿಷೇಧವಿದೆ. ಆದ್ದರಿಂದ ನಾವೂ ಮೊಬೈಲ್ ಬಳಕೆಗೆ ನಿಷೇಧ ವಿಧಿಸಿದ್ದೇವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ತಿಳಿಸಿದ್ದಾರೆ. ಸಫಾರಿ ವೇಳೆ ಮೊಬೈಲ್ ಬಳಸದಂತೆ ಅರಣ್ಯ ಇಲಾಖೆ ಹೊರಡಿಸಿರುವ ಆದೇಶಕ್ಕೆ ವನ್ಯ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಪ್ರವಾಸಿಗರಿಗೆ ಇದರಿಂದ ನಿರಾಸೆಯಾಗಲಿದೆ. ವನ್ಯಪ್ರಾಣಿಗಳ ಹಿತದೃಷ್ಟಿಯಿಂದ ಈ ನಿಷೇಧ ಒಳ್ಳೆಯದೇ ಎಂದು ಪ್ರಾಣಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.