ನಾಗರಹೊಳೆ ಅರಣ್ಯದಲ್ಲಿ ವರ್ಷದ ಮೊದಲ ಮಳೆಯ ಸಿಂಚನ
ಚಾಮರಾಜನಗರ, ಫೆಬ್ರವರಿ 09 : ಬೇಸಿಗೆಯ ಆರಂಭದ ಮೊದಲ ಮಳೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ.
ಮಧ್ಯಾಹ್ನ ದಿಢೀರ್ ಆಗಿ ಸಾಧಾರಣ ಮಳೆಯಾಗಿದ್ದು, ಇದರಿಂದ ಈ ವ್ಯಾಪ್ತಿಯ ಜನ ಖುಷಿ ಪಡುವಂತಾಗಿದೆ. ಈಗಾಗಲೇ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಬಿಸಿಲಿನಿಂದಾಗಿ ಕುರುಚಲು ಕಾಡುಗಳು ಒಣಗಿದ್ದು, ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಕಾಡ್ಗಿಚ್ಚು ಕಾಣಿಸಿಕೊಂಡು ಸುಮಾರು 40 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು.
ನಾಗರಹೊಳೆ ಅರಣ್ಯದಲ್ಲಿ ಶುರುವಾಗಿದೆ ಕಾಳ್ಗಿಚ್ಚಿನ ಭಯ!
ಇದೀಗ ಉದ್ಯಾನ ವ್ಯಾಪ್ತಿಯಲ್ಲಿ ಮಳೆ ಬಂದಿದ್ದರಿಂದ ಒಣಗಿ ನಿಂತಿದ್ದ ಗಿಡಮರಗಳಿಗೆ ಜೀವ ಬಂದಂತಾಗಿದೆ. ಈ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ನಿರೀಕ್ಷೆಯಿತ್ತು. ಜತೆಗೆ ಸೆಕೆಯೂ ಹೆಚ್ಚಾಗಿತ್ತು. ಇದೀಗ ಮಳೆ ಬಂದಿದ್ದರಿಂದ ಎಲ್ಲರ ಮೊಗದಲ್ಲಿ ನಗು ತಂದಿದೆ.
ಹುಣಸೂರು ವಲಯದ ಸಣ್ಣಗದ್ದೆ, ಗಾಡಿಪಾಳ್ಯ, ಭೀಮನಕಟ್ಟೆ ಹಾಗೂ ವೀರನಹೊಸಹಳ್ಳಿ ವಲಯದ ಕೊಳುವಿಗೆ ಭಾಗದಲ್ಲಿಯೂ ಮಳೆಯಾಗಿದೆ. ಮೈಸೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಮಳೆ ಬರುವ ಕ್ಷಣಗಳು ಕಂಡು ಬಂದಿದೆ.