ಕಿಡಿಗೇಡಿಗಳ ಹುಡುಗಾಟಕ್ಕೆ ಹೊತ್ತಿ ಉರಿದ ಬಿಳಿಗಿರಿರಂಗನಬೆಟ್ಟದ ಕಾಡು
ಚಾಮರಾಜನಗರ, ಏಪ್ರಿಲ್ 01 : ಕಿಡಿಗೇಡಿಗಳ ಹುಡುಗಾಟದಿಂದ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ಸಂಜೆ ಕಾಣಿಸಿಕೊಂಡಿದ್ದ ಕಾಡ್ಗಿಚ್ಚನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ಸಮೀಪದ ಜ್ಯೋತಿ ಬೆಟ್ಟ, ಗಂಗಾದರೇಶ್ವರ ಗುಡ್ಡ, ಮಲ್ಕಿ ಬೆಟ್ಟದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಅರಣ್ಯ ಹೊತ್ತಿ ಉರಿದಿತ್ತು. ಇದರಿಂದ ನೂರಾರು ಎಕರೆ ಅರಣ್ಯ ಪ್ರದೇಶ ಅಗ್ನಿಗಾಹುತಿಯಾಗಿದೆ.[ಜೆಡಿಎಸ್ ಮುಖಂಡರ ಮನೆಗೆ ಸಿದ್ದರಾಮಯ್ಯ ಭೇಟಿನೀಡಿದ್ದೇಕೆ?]
ಶುಕ್ರವಾರ ಸಾಯಂಕಾಲದ ವೇಳೆಯಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಕಾಡು ಹೊತ್ತಿ ಉರಿದಿತ್ತು. ಗಾಳಿಗೆ ಬೆಂಕಿ ರಭಸವಾಗಿ ಅರಣ್ಯವನ್ನು ಆವರಿಸಿದ್ದರಿಂದ ಕುರುಚಲು ಕಾಡು ಸುಟ್ಟು ಭಸ್ಮವಾರುವುದಲ್ಲದೆ, ಸಣ್ಣಪುಟ್ಟ ಪ್ರಾಣಿ, ಹಾವು ಇನ್ನಿತರ ಜೀವಜಂತುಗಳು ಕೂಡ ಪ್ರಾಣ ಬಿಟ್ಟಿವೆ.
ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯವನ್ನು ಚುರುಕುಗೊಳಿಸಿದ್ದರಾದರೂ ಕಾಡ್ಗಿಚ್ಚನ್ನು ತಹಬದಿಗೆ ತರುವುದು ಕಷ್ಟವಾಗಿತ್ತು. ಬೆಂಕಿ ಬಿಳಿಗಿರಿರಂಗನಬೆಟ್ಟದಿಂದ ಚಾಮರಾಜನಗರಕ್ಕೆ ತೆರಳುವ ರಸ್ತೆ ಬದಿಯ ಮಲ್ಕಿ ಬೆಟ್ಟದತ್ತ ಆವರಿಸಿದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳೀಯ ಸೋಲಿಗರ ನೆರವನ್ನು ಪಡೆದುಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.[ಉಪಚುನಾವಣೆ: ಮುಖ್ಯಮಂತ್ರಿ ಮಗ ಡಾ.ಯತೀಂದ್ರ ಕಾರು ಜಪ್ತಿ]
ಸ್ಥಳಕ್ಕೆ ಯಳಂದೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜು, ವಲಯ ಅರಣ್ಯಾಧಿಕಾರಿ ಮಹದೇವು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಬೇಸಿಗೆಯ ಕಾಲದಲ್ಲಿ ಕಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುವಂತಹ ಕೃತ್ಯವನ್ನು ನಡೆಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಕಠಿಣ ಕ್ರಮಕೈಗೊಂಡು, ಅರಣ್ಯ ರಕ್ಷಣೆಗಾಗಿ ಸಿಬ್ಬಂದಿಗಳನ್ನು ನೇಮಿಸಿದ್ದರೂ ತಮ್ಮ ಕೃತ್ಯವನ್ನು ಕಿಡಿಗೇಡಿಗಳು ಮುಂದುವರೆಸಿರುವುದು ಆತಂಕ ತಂದಿದೆ.