ಏನಿದು ಫೈರ್ ಅಲರ್ಟ್? ಬಂಡೀಪುರದಲ್ಲಿ ಇದರ ಅಳವಡಿಕೆ ಏಕೆ?
ಚಾಮರಾಜನಗರ, ಫೆಬ್ರವರಿ 29: ಬೇಸಿಗೆಯ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಬಂಡೀಪುರದಲ್ಲಿ ಕಾಡ್ಗಿಚ್ಚಿನ ಆತಂಕ ಶುರುವಾಗುತ್ತದೆ. ಅರಣ್ಯಾಧಿಕಾರಿಗಳ ಎದೆ ಢವಢವ ಬಡಿದುಕೊಳ್ಳಲಾರಂಭಿಸುತ್ತದೆ. ಏಕೆಂದರೆ, ಎಷ್ಟೇ ಅಲರ್ಟ್ ಆಗಿದ್ದರೂ ಕಳೆದ ಕೆಲವು ವರ್ಷಗಳಿಂದ ಕಾಡ್ಗಿಚ್ಚಿಗೆ ಬಂಡೀಪುರ ಅರಣ್ಯ ನಾಶವಾಗುತ್ತಲೇ ಇದೆ.
ಈ ಬಾರಿ ಅರಣ್ಯ ಇಲಾಖೆ, ಏನೇ ಆಗಲಿ ಅರಣ್ಯಕ್ಕೆ ಬೆಂಕಿ ತಗುಲದಂತೆ ನೋಡಿಕೊಳ್ಳಲೇಬೇಕೆಂಬ ಹಟಕ್ಕೆ ಬಿದ್ದಿದ್ದು, ಸರ್ವ ರೀತಿಯಲ್ಲಿಯೂ ಅಧಿಕಾರಿಗಳು ಮತ್ತು ಸಿಬ್ಬಂದಿ ಕಣ್ಣಿಟ್ಟು ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ, ಹಲವು ರೀತಿಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಾಡ್ಗಿಚ್ಚು ತಡೆಗೆ ಶ್ರಮವಹಿಸಿ ದುಡಿಯುತ್ತಿದ್ದಾರೆ. ಈ ಸಲದ ಪ್ರಯೋಗ "ಫೈರ್ ಅಲರ್ಟ್".
ಬಂಡೀಪುರದಲ್ಲಿ ಜನರು ಹೀಗೆ ಮಾಡೋದು ಎಷ್ಟು ಸರಿ? ಇದಕ್ಕೆ ಹೊಣೆ ಯಾರು?
ಬಂಡೀಪುರದಲ್ಲಿ ಹೊಸ ಪ್ರಯೋಗ
ಈ ಸಲ ಉಪಗ್ರಹ ಆಧಾರಿತ ಫೈರ್ ಅಲರ್ಟ್ ಅನ್ನು ಹೊಸದಾಗಿ ಪ್ರಯೋಗಿಸಲಾಗುತ್ತಿದೆ. ಇದು ಅರಣ್ಯದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೂ ಕೂಡಲೇ ಎಚ್ಚರಿಸುವ ವ್ಯವಸ್ಥೆಯಾಗಿದ್ದು, ಪ್ರತಿ ಮೂವತ್ತು ನಿಮಿಷಕ್ಕೆ ಒಂದು ಸಲ ಎಸ್ ಎಂಎಸ್ ಮೂಲಕ ಆಯಾ ಅಧಿಕಾರಿಗಳಿಗೆ ಸಂದೇಶ ರವಾನೆ ಮಾಡುತ್ತದೆ. ಇದರಿಂದ ಅರಣ್ಯದ ಪರಿಸ್ಥಿತಿಯ ಬಗೆಗಿನ ಮಾಹಿತಿ ಅಧಿಕಾರಿಗಳಿಗೆ ತಿಳಿಯುತ್ತಿರುತ್ತದೆ. ಇದರ ಸಂಪೂರ್ಣ ಕಾರ್ಯ ನಿರ್ವಹಣೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಿಮೋಟ್ ಸೆನ್ಸಿಂಗ್ ಏಜೆನ್ಸಿ ಜೊತೆಗೆ ಒಪ್ಪಂದ ಮಾಡಿಕೊಂಡು ಕಾರ್ಯ ನಿರ್ವಹಿಸಲಾಗುತ್ತದೆ.
ಬೆಂಕಿ ಕಾಣಿಸಿಕೊಂಡರೆ ಸಂದೇಶ
ಒಂದು ಅರಣ್ಯದ ಯಾವುದಾದರೂ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಆಯಾ ವ್ಯಾಪ್ತಿಯ ಸಿಎಫ್, ಎಸಿಎಫ್, ಆರ್ಎಫ್ ಮೊದಲಾದ ಅಧಿಕಾರಿಗಳ ದೂರವಾಣಿಗೆ ಸಂದೇಶ ಬರುತ್ತದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಮಾಹಿತಿ ನೀಡಬೇಕಾಗುತ್ತದೆ. ಈ ಫೈರ್ ಅಲರ್ಟ್ ವ್ಯವಸ್ಥೆಯಿಂದ ಈ ಬಾರಿ ಬಂಡೀಪುರ ಅರಣ್ಯವನ್ನು ಬೆಂಕಿಯಿಂದ ರಕ್ಷಿಸಲು ಸಾಧ್ಯವಾಗಬಹುದು ಎಂಬುದು ಅಧಿಕಾರಿಗಳ ಆಶಾಭಾವನೆಯಾಗಿದೆ. ಈಗಾಗಲೇ ಅರಣ್ಯವನ್ನು ರಕ್ಷಿಸಲು ಕೈಗೊಳ್ಳಬಹುದಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರ ಜತೆಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳು ಬೇಸಿಗೆ ದಿನಗಳಾಗಿರುವುದರಿಂದ ಯಾವಾಗ ಏನಾಗುತ್ತದೆ ಎಂಬುದನ್ನು ಹೇಳಲಾಗದು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮೈಮರೆತು ಕುಳಿತುಕೊಳ್ಳುವಂತಿಲ್ಲ.
ಬಂಡೀಪುರಕ್ಕೆ ಸಂದ "ಬೆಸ್ಟ್ ನ್ಯಾಷನಲ್ ಪಾರ್ಕ್" ಪ್ರಶಸ್ತಿ
ಮತ್ತೆ ಅವಘಡ ಮರುಕಳಿಸದಂತೆ ಎಚ್ಚರಿಕೆ
ಕಳೆದ ವರ್ಷ ಬಂಡೀಪುರದಲ್ಲಿ ಬೆಂಕಿಗೆ ಸಾವಿರಾರು ಎಕರೆ ಪ್ರದೇಶದ ಕಾಡು ಹಾಗೂ ಜೀವರಾಶಿಗಳು ಬೆಂದು ಹೋಗಿದ್ದವು. ಅಂತಹ ಭೀಕರ ಪರಿಸ್ಥಿತಿ ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕೆ ಮತ್ತು ಅರಣ್ಯವನ್ನು ಹೇಗಾದರೂ ಮಾಡಿ ಕಾಪಾಡಿಕೊಳ್ಳಲೇ ಬೇಕೆಂಬ ಉದ್ದೇಶದಿಂದ ಹಲವು ತಂತ್ರಜ್ಞಾನಗಳನ್ನು ಇಲ್ಲಿ ಅಳವಡಿಸಿ ಅರಣ್ಯವನ್ನು ಜತನದಿಂದ ಕಾಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಬೀಡಿ, ಸಿಗರೇಟು ಸೇದಿ ಎಸೆಯುವುದರಿಂದ ಸಂಭವಿಸುವ ಕಾಡ್ಗಿಚ್ಚು ಪ್ರಕರಣಗಳನ್ನು ತಡೆಯಲು ಚಳಿಗಾಲದ ಅಂತ್ಯ ಬೇಸಿಗೆಯ ಆರಂಭದಲ್ಲಿಯೇ ಕಾಡಿನ ಸುತ್ತ ಇರುವ ಪೊದೆ, ಒಣ ಹುಲ್ಲು, ಗಿಡಗಂಟಿಗಳನ್ನು ತೆರವು ಮಾಡಿ ಫೈರ್ಲೈನ್ಗಳನ್ನು ನಿರ್ಮಿಸಲಾಗಿದೆ. ಜತೆಗೆ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ.
ಅರಣ್ಯದಲ್ಲಿ ಫೈರ್ ವಾಚರ್, ಫೈರ್ ಬೀಟರ್
ಆಗಾಗ್ಗೆ ಕಾಡ್ಗಿಚ್ಚು ಹತ್ತಿಕೊಳ್ಳಲು ಅನುವು ಮಾಡಿಕೊಡುವ ಒಣ ಹುಲ್ಲು, ಮರಗಳು ಹೆಚ್ಚಾಗಿರುವ ಪ್ರದೇಶ ಗುರುತಿಸಿ ಅಲ್ಲಿ ಕ್ಯಾಂಪ್ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯ ನಾಲ್ಕೈದು ಸಿಬ್ಬಂದಿಯ ತಂಡ ಜನವರಿಯಿಂದ ಮೇ.31ರ ತನಕ ಕಾವಲಿಗಿರಲಿದೆ. ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ಮತ್ತು ಸಂಪರ್ಕ ಸಾಧಿಸಿ ಸಾರ್ವಜನಿಕರ ಸಹಕಾರ ಪಡೆಯುವ ಜವಾಬ್ದಾರಿ ಅವರದ್ದಾಗಿದೆ. ಸಿಬ್ಬಂದಿಯ ಸ್ವ-ರಕ್ಷಣೆಗಾಗಿ ಇಲಾಖೆ ಅಗತ್ಯ ವೈದ್ಯಕೀಯ ನೆರವು ಪರಿಕರಗಳನ್ನು ನೀಡುತ್ತದೆ. ಕಾಡಿನ ಎತ್ತರದ ಪ್ರದೇಶದಲ್ಲಿ ಫೈರ್ ವಾಚರ್ ಗಳನ್ನು, ಅಲ್ಲಲ್ಲಿ ಫೈರ್ ಬೀಟರ್ ಗಳನ್ನು ನಿಯೋಜಿಸಲಾಗಿದೆ. ಅಗ್ನಿ ಶಾಮಕ ದಳದ ನೆರವನ್ನು ಪಡೆದುಕೊಳ್ಳಲಾಗುತ್ತದೆ. ಅಲ್ಲದೆ, ಸಂವಹನಕ್ಕೆ ವಾಕಿಟಾಕಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟಾರೆ ಬಂಡೀಪುರ ಅರಣ್ಯವನ್ನು ಈ ಬಾರಿ ಬೆಂಕಿಯಿಂದ ರಕ್ಷಿಸಿಕೊಳ್ಳಲು ಸರ್ವ ರೀತಿಯಲ್ಲಿಯೂ ಪ್ರಯತ್ನಗಳು ಮುಂದುವರೆದಿದೆ.