ಉತ್ಸವಮೂರ್ತಿ ಮೆರವಣಿಗೆ ವಿವಾದ; ಗ್ರಾಮಸ್ಥರಿಂದ ದಂಡ ವಾಪಸ್
ಚಾಮರಾಜನಗರ, ಅಕ್ಟೋಬರ್ 20: ಗ್ರಾಮ ದೇವತೆಯ ಉತ್ಸವಮೂರ್ತಿ ಮೆರವಣಿಗೆ ತಮ್ಮ ಕೇರಿಯಲ್ಲೂ ಹಾದು ಹೋಗಲಿ ಎಂದು ಮನವಿ ಮಾಡಿದ್ದ ದಲಿತ ಸಮುದಾಯದ ಇಬ್ಬರು ಕೂಲಿಕಾರ್ಮಿಕರಿಗೆ ಗ್ರಾಮಸ್ಥರು ದಂಡ ವಿಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ದಂಡದ ಮೊತ್ತವನ್ನು ಅವರಿಗೆ ವಾಪಸ್ ನೀಡಲಾಗಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಹೊನ್ನೂರಿನಲ್ಲಿ ಈ ಸಂಗತಿ ನಡೆದಿದ್ದು, ವಿಜಯದಶಮಿ ಅಂಗವಾಗಿ ಗ್ರಾಮ ದೇವತೆಯ ಉತ್ಸವಮೂರ್ತಿ ಮೆರವಣಿಗೆ ತಮ್ಮ ಕೇರಿಯಲ್ಲೂ ಹಾದು ಹೋಗಲಿ ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದ ದಲಿತ ಸಮುದಾಯದ ಇಬ್ಬರು ಕೂಲಿಕಾರ್ಮಿಕರಿಗೆ ಗ್ರಾಮಸ್ಥರು ಬರೋಬ್ಬರಿ 60,202 ರೂ ದಂಡ ವಿಧಿಸಿದ್ದರು.
ದಲಿತ ಕೇರಿಗೆ ಗ್ರಾಮ ದೇವತೆ ಮೆರವಣಿಗೆ ಆಹ್ವಾನಿಸಿದ್ದಕ್ಕೆ 60 ಸಾವಿರ ದಂಡ
ಕಳೆದ ಗುರುವಾರ ರಾತ್ರಿ ಗ್ರಾಮದ ನಿಂಗರಾಜು ಅವರಿಗೆ 50,101 ರೂ ಹಾಗೂ ಶಂಕರಮೂರ್ತಿ ಎಂಬುವರಿಗೆ 10,101 ರೂ. ದಂಡ ವಿಧಿಸಲಾಗಿತ್ತು. ದಂಡದ ಹಣವನ್ನು ಅಂದೇ ಪಾವತಿಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ನಿಂಗರಾಜು, ತಮ್ಮ ಪತ್ನಿಯ ಒಡವೆಗಳನ್ನು ಅಡವಿಟ್ಟು ದಂಡ ಪಾವತಿಸಿದ್ದರು. ಈ ಘಟನೆ ಕುರಿತು ತಹಶೀಲ್ದಾರ್ ಹಾಗೂ ಯಳಂದೂರು ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿ, ತಮಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದರು. "ದಂಡ ವಿಧಿಸಿರುವ ಕುರಿತು ದೂರು ಬಂದಿದೆ. ಈ ಕುರಿತು ಇಂದು ಗ್ರಾಮಸ್ಥರ ಸಭೆ ಕರೆದಿದ್ದು, ಸಭೆಯ ತೀರ್ಮಾನದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಹಶೀಲ್ದಾರ್ ಬಿ.ಕೆ. ಸುದರ್ಶನ ತಿಳಿಸಿದ್ದರು.
ಇಂದು ಈ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮದ ಮುಖಂಡರು, ಅಧಿಕಾರಿಗಳೊಂದಿಗೆ ಸಸಭೆ ನಡೆಸಿದ್ದು, ರಾಜಿ ಸಂಧಾನ ಮಾಡಿ ದಂಡದ ಮೊತ್ತವನ್ನು ವಾಪಸ್ ನೀಡಲಾಗಿದೆ. ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ದೇಗುಲ ಸಂಬಂಧಿತ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ. ಗ್ರಾಮದಲ್ಲಿ ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಬಾರದು ಎಂದು ಗ್ರಾಮದ ಮುಖಂಡರಿಗೂ ತಹಶೀಲ್ದಾರ್ ಸೂಚಿಸಿದರು.