ಇಲ್ಲಿ ನೀರಿದ್ದರೂ ವಿದ್ಯುತ್ ಇಲ್ಲದೆ ಒಣಗುತ್ತಿವೆ ಬೆಳೆಗಳು
ಚಾಮರಾಜನಗರ, ಜೂನ್ 21: ನೀರಿದ್ದರೂ ಹರಿಸಲಾಗದೆ ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳು ಒಣಗುತ್ತಿರುವ ದೃಶ್ಯ ಜಿಲ್ಲೆಯ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಹೋಬಳಿಯ ವೆಂಕಟಶೆಟ್ಟಿದೊಡ್ಡಿ ಗ್ರಾಮದಲ್ಲಿ ಕಂಡುಬಂದಿದೆ.
ಪ್ರಸಕ್ತ ವರ್ಷ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದರಿಂದ ವೆಂಕಟಶೆಟ್ಟಿದೊಡ್ಡಿ ವ್ಯಾಪ್ತಿಯ ರೈತರು ಖುಷಿಯಿಂದಲೇ ಜಮೀನಿನತ್ತ ಮುಖ ಮಾಡಿ ಹಲವು ಬೆಳೆಗಳನ್ನು ಬೆಳೆದಿದ್ದರು. ಪಂಪ್ ಸೆಟ್ಗಳ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಿದ್ದರು. ಕೆಲವು ವರ್ಷಗಳಿಂದ ಬರದಿಂದ ಬೆಂದಿದ್ದ ರೈತಾಪಿ ವರ್ಗ ಕಳೆದ ವರ್ಷದಿಂದ ಮಳೆಯಾದ ಪರಿಣಾಮ ಕೃಷಿಯತ್ತ ಒಲವು ತೋರಿದ್ದರು.
ಮುದುಡಿದ ತಂಬಾಕು ಚಿಗುರಿತು... ರೈತನ ಮೊಗದಲ್ಲಿ ಮಂದಹಾಸ ಮಿನುಗಿತು
ಇತ್ತೀಚೆಗೆ ಸುರಿದ ಮಳೆ ಕೂಡ ರೈತರಲ್ಲಿ ಆಶಾಭಾವವನ್ನು ಹುಟ್ಟುಹಾಕಿತ್ತು. ಕೃಷಿಯಿಂದ ಜೀವನ ಹಸನು ಮಾಡಿಕೊಳ್ಳುವ ಸಲುವಾಗಿ ರೈತರು ಸಾಲ ಮಾಡಿ ಮೆಣಸು, ಬೀನ್ಸ್, ಬೀಟ್ ರೂಟ್ ಸೇರಿದಂತೆ ಹಲವು ತರಕಾರಿಗಳನ್ನು ಬೆಳೆದಿದ್ದರು. ಈ ಬೆಳೆಗಳಿಗೆ ತಮ್ಮ ಜಮೀನಿನಲ್ಲಿರುವ ಪಂಪ್ ಸೆಟ್ ನಿಂದಲೇ ನೀರು ಹಾಯಿಸುತ್ತಿದ್ದರು.
ಆದರೆ ಈ ವ್ಯಾಪ್ತಿಯಲ್ಲಿದ್ದ ಟ್ರಾನ್ಸ್ ಫಾರ್ಮರ್ ದುರಸ್ತಿಯಾಗಿದ್ದು, ಅದನ್ನು ಕಳೆದ ಎರಡು ತಿಂಗಳಿನಿಂದ ಚೆಸ್ಕಾಂ ದುರಸ್ತಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಇದರಿಂದಾಗಿ ಪಂಪ್ ಸೆಟ್ಗೆ ವಿದ್ಯುತ್ ಕೊರತೆಯುಂಟಾಗಿದ್ದು, ನೀರು ಹರಿಸಲಾಗದೆ ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಪರಿಣಾಮ, ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ.
ಮಂಡ್ಯದಲ್ಲಿ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ ಏಕೆ?
ವೆಂಕಟಶೆಟ್ಟಿದೊಡ್ಡಿ ಗ್ರಾಮದಲ್ಲಿ 100 ಕೆ.ವಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಎರಡು ತಿಂಗಳುಗಳ ಹಿಂದೆಯೇ ಕೆಟ್ಟು ಹೋಗಿದ್ದು, ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ರೈತರ ಅಳಲಾಗಿದೆ.
ಕಳೆದ 5 ತಿಂಗಳುಗಳಿಂದ ಮೂರು ಟ್ರಾನ್ಸ್ ಫಾರ್ಮರ್ ಗಳು ಹಾಳಾಗಿದ್ದು, ಪದೇ ಪದೇ ಟಾನ್ಸ್ ಫಾರ್ಮರ್ ಗಳು ದುರಸ್ತಿಗೀಡಾಗಲು ಕಾರಣವೇನು ಎಂಬುದೇ ಅರ್ಥವಾಗುತ್ತಿಲ್ಲ. ಪದೇ ಪದೇ ದುರಸ್ತಿಗೀಡಾಗುವುದರಿಂದ ವಿದ್ಯುತ್ ಇಲ್ಲದೆ ಬೆಳೆಗಳಿಗೆ ನೀರು ಹಾಯಿಸಲು ಕಷ್ಟವಾಗುತ್ತಿದೆ. ಇದರಿಂದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.
ಈ ಕುರಿತಂತೆ ವೆಂಕಟಶೆಟ್ಟಿದೊಡ್ಡಿ ಗ್ರಾಮದ ರೈತರಾದ ಅಶ್ವಥ್ ಶೆಟ್ಟಿ, ರಂಗನಾಥ್, ಬಸವರಾಜು, ಶ್ರೀನಿವಾಸ್ ಶೆಟ್ಟಿ, ಹರೀಶ್, ಮಹದೇವ್ ಶೆಟ್ಟಿ, ಬಸವರಾಜು ಮಾತನಾಡಿ ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗುತ್ತಿರುವುದು ಚೆಸ್ಕಾಂ ಇಲಾಖೆ ನೀಡುವ ಟಿ.ಸಿ.ಗಳ ಗುಣಮಟ್ಟ ಸರಿ ಇಲ್ಲ ಎಂಬುದನ್ನು ಖಾತರಿಪಡಿಸುತ್ತಿದೆ. ಟಿ.ಸಿ ರಿಪೇರಿಯಾಗುತ್ತಿರುವುದರಿಂದ ಈಗಾಗಲೇ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿ ಸಾಲಗಾರರಾಗಿದ್ದೇವೆ. ಕೂಡಲೇ ಟ್ರಾನ್ಸ್ ಫಾರ್ಮರ್ ಅಳವಡಿಸದಿದ್ದರೆ, ಹನೂರು ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮುಚ್ಚಿ ಹೋದ ಕಂದಕ: ಕುಂಟಗುಡಿ ಕಾಲೋನಿಗೆ ವನ್ಯ ಪ್ರಾಣಿಗಳ ಲಗ್ಗೆ
ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಚೆಸ್ಕಾಂ ಎ.ಇ.ಇ ಶಂಕರ್, ವೆಂಕಟಶೆಟ್ಟಿದೊಡ್ಡಿ ಗ್ರಾಮದ ಟಿ.ಸಿ ಹಾಳಾಗಿದ್ದು, ಬದಲಿ ಟಿ.ಸಿ ಅಳವಡಿಸಲು ಮನವಿ ಮಾಡಲಾಗಿದೆ. ಹೊಸ ಟಿ.ಸಿ ನೀಡಲು ವರ್ಕ್ ಆರ್ಡರ್ ನೀಡಿದ್ದು, ಇನ್ನೆರಡು ದಿನಗಳಲ್ಲಿ ಟಿ.ಸಿ ಅಳವಡಿಸಲಾಗುವುದು ಎಂದಿದ್ದಾರೆ. ಆದರೆ ರೈತರು ಮಾತ್ರ ನೀರಿಲ್ಲದೆ ತಮ್ಮ ಕಣ್ಮುಂದೆ ಒಣಗುತ್ತಿರುವ ಬೆಳೆಗಳನ್ನು ನೋಡಿಕೊಂಡು ಚೆಸ್ಕಾಂಗೆ ಶಾಪ ಹಾಕುತ್ತಿದ್ದಾರೆ. ಸಂಬಂಧಿಸಿದವರು ಕೂಡಲೇ ಇತ್ತ ಗಮನಹರಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ.