ಹುಲಿ ದಾಳಿಗೆ ದನ ಮೇಯಿಸುತ್ತಿದ್ದ ರೈತ ಬಲಿ
ಚಾಮರಾಜನಗರ, ಸೆಪ್ಟೆಂಬರ್ 3: ಹುಲಿ ದಾಳಿಗೆ ರೈತನೊಬ್ಬ ಬಲಿಯಾಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಕುಂದಗೆರೆ ವಲಯದ ಬರಕಟ್ಟೆ ಬಳಿ ಭಾನುವಾರ ಸೆ.1ರಂದು ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಚೌಡಹಳ್ಳಿ ಗ್ರಾಮದ ನಿವಾಸಿ ಶಿವಮಾದಯ್ಯ (55) ಹುಲಿ ದಾಳಿಗೆ ಬಲಿಯಾದ ದುರ್ದೈವಿ. ಉಳುಮೆಗೆ ಬಳಸುವ ಎತ್ತನ್ನು ತಮ್ಮ ಹೊಲದ ಬಳಿಯೇ ಶನಿವಾರ ಸಂಜೆ ಮೇಯಿಸುತ್ತಿದ್ದರು. ಈ ವೇಳೆ ಹೊಲದ ಸಮೀಪದ ಪೊದೆಯಲ್ಲಿ ಅಡಗಿದ್ದ ಹುಲಿಯೊಂದು ದಿಢೀರ್ ದಾಳಿ ಮಾಡಿ ಸಾಯಿಸಿ ಒಂದಷ್ಟು ದೂರ ಹೊತ್ತೊಯ್ದು ಹೊಟ್ಟೆಯನ್ನು ಬಗೆದು ಹಾಕಿದೆ.
ಗುಂಡ್ಲುಪೇಟೆಯಲ್ಲಿ ವಿದ್ಯುತ್ ಕಂಬ ಏರಿ ಹುಲಿಯಿಂದ ಜೀವ ಉಳಿಸಿಕೊಂಡ
ಹುಲಿ ದಾಳಿಯಿಂದ ಬೆಚ್ಚಿದ ಎತ್ತುಗಳು ಮನೆಗೆ ಓಡಿ ಬಂದಿವೆ. ಮನೆಯವರು ಎತ್ತುಗಳು ಮಾತ್ರ ಬಂದಿದ್ದರಿಂದ ಅನುಮಾನಗೊಂಡು ಅವರನ್ನು ಹುಡುಕಿಕೊಂಡು ಹೊಲದ ಬಳಿಗೆ ಹೋಗಿದ್ದಾರೆ. ಈ ವೇಳೆ ಹೊಲದ ಬಳಿ ರಕ್ತ ಕಂಡು ಬಂದಿದ್ದಲ್ಲದೆ, ಅವರು ಧರಿಸಿದ್ದ ಚಪ್ಪಲಿ, ಟವಲ್ ಸಿಕ್ಕಿದೆ. ಆದರೆ ಮೃತದೇಹ ಮಾತ್ರ ಸಿಕ್ಕಿರಲಿಲ್ಲ. ಅಲ್ಲದೆ ಕತ್ತಲೆಯಾದ್ದರಿಂದ ಹುಡುಕಲು ಸಾಧ್ಯವಾಗದೆ ಹಿಂತಿರುಗಿದ್ದರು.
ಭಾನುವಾರ ಬೆಳಗ್ಗೆ ಹುಡುಕಾಟ ನಡೆಸಿದಾಗ ಬರಕಟ್ಟೆ ಸಮೀಪ ಶಿವಮಾದಯ್ಯ ಅವರ ಮೃತದೇಹ ಪತ್ತೆಯಾಗಿದೆ. ಹುಲಿ ದೇಹದ ಒಂದು ಭಾಗವನ್ನು ತಿಂದು ಹಾಕಿದ್ದು, ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇರಳದ ಮುತುಂಗಾದಲ್ಲಿ ಬೆನ್ನಟ್ಟಿ ಬಂದ ಹುಲಿಯ ವಿಡಿಯೋ ವೈರಲ್
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ, ಮಹಜರು ನಡೆಸಿದ ಬಳಿಕ ಕಾಡಿನಲ್ಲಿ ಹುಲಿ ದಾಳಿ ನಡೆಸಿದ್ದನ್ನು ಗಂಭೀರವಾಗಿ ಪರಿಗಣಿಸಿ, ಹುಲಿ ಹಿಡಿಯುವ ಭರವಸೆ ನೀಡಿ, ಮೃತನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ಕೊಡುವ ಆಶ್ವಾಸನೆ ನೀಡಿದರು.