ಚಾಮರಾಜನಗರ: ಸಾಲಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ
ಚಾಮರಾಜನಗರ, ಸೆಪ್ಟೆಂಬರ್ 23: ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮೇಲಿಂದ ಮೇಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ನಡೆಯುತ್ತಲೇ ಇದ್ದು, ಇದೀಗ ಸಾಲಬಾಧೆಯಿಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಕಳ್ಳೀಪುರ ಗ್ರಾಮದಲ್ಲಿ ನಡೆದಿದೆ.
ಕಳ್ಳೀಪುರ ಗ್ರಾಮದ ನಿಂಗೇಗೌಡ ಎಂಬುವವರ ಮಗ ಶ್ರೀನಿವಾಸ್(46) ರಾಸಾಯನಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಇವರು ಗ್ರಾಮದಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದಾರೆ.
ಇದರಲ್ಲಿ ಕೃಷಿ ಮಾಡುವ ಸಲುವಾಗಿ ಹಂಗಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಖಾಸಗಿ ವ್ಯಕ್ತಿಗಳಿಂದ ಕೈಸಾಲ ಹಾಗೂ ಚಿನ್ನಾಭರಣಗಳನ್ನು ಗಿರವಿಗಿಟ್ಟು ಸಾಲ ಪಡೆದಿದ್ದರು. ಅಲ್ಲದೆ ಈ ಬಾರಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಳೆದಿದ್ದರು. ಬೆಳೆ ಚೆನ್ನಾಗಿ ಬೆಳೆದಿದ್ದರೂ ಬೆಳೆಗಳಿಗೆ ಸರಿಯಾದ ಬೆಲೆ ದೊರಕದೆ ತೀವ್ರ ನಷ್ಟ ಅನುಭವಿಸಿದ್ದರು.
ಸಾಲ ತೀರಿಸುವ ಮಾರ್ಗ ಕಾಣದೆ ಮನನೊಂದ ರೈತ ಶ್ರೀನಿವಾಸ್, ಮಂಗಳವಾರ ರಾತ್ರಿ ಗ್ರಾಮದ ಸಮೀಪದಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ. ವಿಷಯ ತಿಳಿದು ಅವರನ್ನು ರಕ್ಷಿಸಿ ಅಲ್ಲಿಂದ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಯಿತು.
Recommended Video
ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಯೂ ಚಿಕಿತ್ಸೆ ಸಾಧ್ಯವಾಗದಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ರೈತ ಸಾವನ್ನಪ್ಪಿದ್ದಾರೆ.