ಅರಿಶಿಣ, ಮೆಣಸಿನ ನಡುವೆ ಇದನ್ನು ಬೆಳೆದು ಸಿಕ್ಕಿಬಿದ್ದ ರೈತ
ಚಾಮರಾಜನಗರ, ಜನವರಿ 21: ಜಮೀನಿನಲ್ಲಿ ಕೃಷಿ ಬೆಳೆಗಳ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಸುಮಾರು 12 ಕೆ.ಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.
ಜಾತ್ರೆಯಲ್ಲಿ ಮಾರಲೆಂದು ಇದನ್ನು ಬೆಳೆದರಾ ಈ ದಂಪತಿ...
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಜಾಗೇರಿಯ ಸಿ.ಆರ್.ನಗರ ಗ್ರಾಮದ ನಿವಾಸಿ ಲೂದ್ಸ್ವಾಮಿ (45) ಬಂಧಿತ ಆರೋಪಿ. ಈತ ಹಣದ ಆಸೆಗಾಗಿ ತನ್ನ ಜಮೀನಿನಲ್ಲಿ ಕೃಷಿ ಮಾಡಿದ್ದ ಮೆಣಸು ಹಾಗೂ ಅರಿಶಿಣ ಗಿಡಗಳ ನಡುವೆ ಯಾರಿಗೂ ತಿಳಿಯದಂತೆ ಸುಮಾರು 13 ಕೆ.ಜಿಗೂ ಹೆಚ್ಚು ಗಾಂಜಾ ಗಿಡವನ್ನು ಬೆಳೆದಿದ್ದನು.
ಇದು ಹುಲುಸಾಗಿ ಬೆಳೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕೊಯ್ಲಿಗೆ ಬರುತ್ತಿತ್ತು. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ನವೀನ್ಕುಮಾರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ದಾಳಿ ನಡೆಸಿ ಆರೋಪಿ ಲೂದ್ಸ್ವಾಮಿಯನ್ನು ಬಂಧಿಸಿದ್ದಾರೆ. ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.