ಉಘೇ ಉಘೇ ಜೈಕಾರದೊಂದಿಗೆ ಮಹದೇಶ್ವರ ಬೆಟ್ಟದಲ್ಲಿ ಸಂಭ್ರಮದ ರಥೋತ್ಸವ
ಚಾಮರಾಜನಗರ, ಫೆಬ್ರವರಿ 25: ಉಘೇ ಉಘೇ ಮಾಯ್ಕಾರ ಮಾದಪ್ಪ ಉಘೇ ಉಘೇ ಎಂಬ ಘೋಷಣೆಯೊಂದಿಗೆ ಪ್ರಸಿದ್ಧ ಯಾತ್ರಾಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ರಥೋತ್ಸವವು ಲಕ್ಷಾಂತರ ಭಕ್ತರ ಸಮೂಹದಲ್ಲಿ ಅದ್ಧೂರಿಯಾಗಿ ಜರುಗಿತು.
ಚಾಮರಾಜನಗರದ ಹನೂರು ತಾಲೂಕಿನ ಮಲೈ ಮಹದೇಶ್ವರ ಬೆಟ್ಟದಲ್ಲಿ ಬೆಳಿಗ್ಗೆ 10.45ರ ಶುಭ ಲಗ್ನದಲ್ಲಿ ಜರುಗಿದ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಮಹಾ ರಥೋತ್ಸವ ತೇರು ಸಾಗುವ ವೇಳೆ ಭಕ್ತರು ಉಘೇ ಮಾದಪ್ಪ ಎಂಬ ಜಯಕಾರದೊಂದಿಗೆ ಹಣ್ಣು, ದವನ, ಧವಸ ಧಾನ್ಯಗಳನ್ನು ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು. ಸಾಲೂರು ಮಠದ ಗುರುಸ್ವಾಮಿಯವರ ಸಾನಿಧ್ಯದಲ್ಲಿ ಉತ್ಸವ ಮೂರ್ತಿಗೆ ಧೂಪ, ಮಂಗಳಾರತಿ ಸೇರಿದಂತೆ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ರಥವನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು. ಹೆಣ್ಣುಮಕ್ಕಳು ಕಳಸ ಹೊತ್ತು ಬೆಲ್ಲದ ಆರತಿ ಬೆಳಗಿದರು. ದೇವಾಲಯವನ್ನು ವಿವಿಧ ಫಲಪುಷ್ಪಗಳಿಂದ ಅಲಂಕಾರಗೊಳಿಸಲಾಗಿತ್ತು. ಪವಾಡ ಪುರುಷ ಮಾದಪ್ಪನ ಚರಿತ್ರೆ ಸಾರುವ ಕಂಸಾಳೆ ಪದ, ಡೊಳ್ಳುಕುಣಿತ, ವೀರಗಾಸೆ ಕಲಾವಿದರು ರಥೋತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬ್ರಹ್ಮ ರಥದ ಜತೆಯಲ್ಲಿ ರುದ್ರಾಕ್ಷಿ ವಾಹನ, ಹುಲಿ ವಾಹನ, ಬಸವ ವಾಹನಗಳು ಸಾಗಿ ಬಂದವು.
ಜನ ಸಾಗರದ ನಡುವೆ ಸಾಗಿತು ಕೊಟ್ಟೂರೇಶ್ವರನ ವೈಭವದ ತೇರು
ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಜಾತ್ರಾ ಮಹೋತ್ಸವಕ್ಕೆ ರಾತ್ರಿ ನಡೆದ ತೆಪ್ಪೋತ್ಸವದ ಮೂಲಕ ತೆರೆ ಬಿತ್ತು. ಲಕ್ಷಾಂತರ ಭಕ್ತರು ಭಕ್ತಿ ಭಾವಗಳಿಂದ ನಮಿಸಿ ಮಾದಪ್ಪನ ರಥೋತ್ಸವವನ್ನು ಕಣ್ತುಂಬಿಕೊಂಡರು. ಮಹದೇಶ್ವರ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದು ಬಂದಿತ್ತು. ಭಕ್ತರು ಸರತಿ ಸಾಲಿನಲ್ಲಿ ಸಾಗಿ ಮಾದಪ್ಪನ ದರ್ಶನ ಪಡೆದರು. ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿತ್ತು.