ಅರಣ್ಯ ಸೇವೆಗೆ ಬದುಕು ಮುಡಿಪಾಗಿಟ್ಟ ಕುಟುಂಬವಿದು
ಚಾಮರಾಜನಗರ, ಡಿಸೆಂಬರ್ 3: ಅಪ್ಪ ಮತ್ತು ಮಕ್ಕಳು ಒಂದೇ ಇಲಾಖೆಯಲ್ಲಿ, ಅದರಲ್ಲೂ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುಟುಂಬದ ಬಗ್ಗೆ ಹೇಳಲೇಬೇಕಾಗಿದೆ.
ಬಹಳಷ್ಟು ಸಂದರ್ಭ ಹೆತ್ತವರು ತಾವು ಮಾಡುವ ಉದ್ಯೋಗದ ಬದಲಿಗೆ ಬೇರೆ ಉದ್ಯೋಗದತ್ತ ತಮ್ಮ ಮಕ್ಕಳನ್ನು ಕಳುಹಿಸಲು ಇಷ್ಟಪಡುತ್ತಾರೆ. ಆದರೆ ಪ್ರಸ್ತುತ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಲೋಕೇಶ್ ಅವರ ಕುಟುಂಬ ಮಾತ್ರ ಭಿನ್ನ. ಇವತ್ತಿಗೂ ಇವರ ತಂದೆ ಮತ್ತು ತಂಗಿ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೋಲಿಗರ ಈ ಸ್ಥಿತಿ ನೋಡಿದರೆ ನಿಮ್ಮ ಮನಸ್ಸೂ ಕರಗಬಹುದು, ಆದರೆ...
ಸಾಮಾನ್ಯವಾಗಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಬೇಕಾದರೆ ಕಾಡು ಮತ್ತು ಪ್ರಾಣಿಗಳ ಬಗ್ಗೆ ಒಲವು ಇರಬೇಕು. ಈ ಒಲವು ಇವರ ಇಡೀ ಕುಟುಂಬದಲ್ಲೇ ಸೇರಿಕೊಂಡಿದೆ. ಡಾ.ಲೋಕೇಶ ಅವರ ಸ್ವಂತ ಊರು ಕೋಲಾರ ಪಟ್ಟಣ. ತಂದೆ ಲಕ್ಷ್ಮಿ ನಾರಾಯಣ ಹಾಗೂ ತಾಯಿ ಅಕ್ಕಯ್ಯಮ್ಮರ ಹಿರಿಯ ಪುತ್ರ ಲೋಕೇಶ್ ಅರಣ್ಯ ವಲಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಂದೆ ಲಕ್ಷ್ಮಿ ನಾರಾಯಣ ಅವರು 1972ರಲ್ಲಿ ಗಾರ್ಡ್ ಆಗಿ ಅರಣ್ಯ ಇಲಾಖೆಗೆ ಸೇರಿ ನಂತರ ಮುಂಬಡ್ತಿ ಪಡೆದು ವಲಯ ಅರಣ್ಯಾಧಿಕಾರಿಯಾಗಿ 2012ರಲ್ಲಿ ನಿವೃತ್ತಿ ಹೊಂದಿದರು. ತಾಯಿ ಅಕ್ಕಯ್ಯಮ್ಮ ಶಿಕ್ಷಕಿಯಾಗಿ ಪ್ರಸ್ತುತ ಕೋಲಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ. ಲೋಕೇಶ ಅವರು ಕೊಯಮತ್ತೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಅರಣ್ಯಶಾಸ್ತ್ರದಲ್ಲಿ ಪಿಎಚ್ ಡಿ ಪಡೆದಿದ್ದು, 2014ರಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಆಯ್ಕೆಯಾಗಿ, ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮೊದಲು ಸೇವೆ ಸಲ್ಲಿಸಿ ನಂತರ 2016ರಲ್ಲಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಗುಂಡ್ರೆ ವಲಯಾಧಿಕಾರಿ, ನಂತರ 2019ರಲ್ಲಿ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿಯಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಲೋಕೇಶ ಕೇಂದ್ರ ಲೋಕಸೇವಾ ಆಯೋಗದಲ್ಲಿ ಎರಡು ಬಾರಿ ಐಎಫ್ ಎಸ್ ಪರೀಕ್ಷೆ ಬರೆದಿದ್ದಾರೆ. ಇವರ ಸಹೋದರಿ ಶಿಲ್ಪಾ ವಲಯ ಅರಣ್ಯಾಧಿಕಾರಿಯಾಗಿ 2014ರಲ್ಲಿ ಆಯ್ಕೆಯಾಗಿದ್ದು, ಚಿಕ್ಕಮಗಳೂರು, ಶಿರಸಿಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರ ಉತ್ತಮ ಕೆಲಸವನ್ನು ಗುರುತಿಸಿದ ಸರ್ಕಾರ 2019ರಲ್ಲಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಮಾಡಿರುವುದು ಹೆಮ್ಮೆಯ ವಿಚಾರ.
ತಮ್ಮ ಕಾರ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿರುವ ಇವರು ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದಾರೆ. ಎಚ್.ಡಿ.ಕೋಟೆ ಹಾಂಡ್ ಪೋಸ್ಟ್ ಬೀಚನಹಳ್ಳಿ ಮೂಲಕವಾಗಿ ಗುಂಡ್ರೆ ವಲಯ ವ್ಯಾಪ್ತಿಯಲ್ಲಿ ಕೇರಳಕ್ಕೆ ಅರಣ್ಯದೊಳಗೆ ಜಾನುವಾರು ಸಾಗಾಣಿಕೆ ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿತ್ತು. ಇದಕ್ಕೆ ಬ್ರೇಕ್ ಹಾಕಿ 150 ಜಾನುವಾರುಗಳನ್ನು ಹಿಡಿದು ಮೈಸೂರಿನ ಪಿಂಜ್ರಾಪೋಲ್ ಕಳುಹಿಸಿದ್ದು, ಇವರ ಸಾಧನೆ. ಹೀಗೆ ಇಡೀ ಕುಟುಂಬ ಅರಣ್ಯ ಇಲಾಖೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವುದು ನಿಜಕ್ಕೂ ಸಂತಸದ ವಿಚಾರ.