ಫ್ಯಾಕ್ಟ್ ಚೆಕ್: ವೀರಾಂಜನೇಯ ದೇವಾಲಯದಲ್ಲಿ ಯೇಸು ಫೋಟೊ; ನಿಜವಾಗಿಯೂ ನಡೆದಿದ್ದೇನು?
ಚಾಮರಾಜನಗರ, ಆಗಸ್ಟ್ 17: ಇಂದು ಸಾಮಾಜಿಕ ತಾಣಗಳಲ್ಲಿ ಪ್ರಕಟಗೊಳ್ಳುವ ಕೋಮು ಪ್ರಚೋದಕ, ಧಾರ್ಮಿಕ ನಿಂದನೆಯ ಪೋಸ್ಟ್ ಗಳು ಸಾಕಷ್ಟು ಅನಾಹುತಗಳಿಗೆ ಕಾರಣವಾಗುತ್ತಿವೆ. ಜನರು ಕೂಡ ಹಿಂದು ಮುಂದು ಆಲೋಚಿಸದೆ, ಅವುಗಳನ್ನು ಹಂಚಿಕೊಳ್ಳುತ್ತಾ, ರೀ ಪೋಸ್ಟ್ ಮಾಡುತ್ತಾ, ಫಾರ್ವರ್ಡ್ ಮಾಡುತ್ತಾ ಕೆಲವು ಅನರ್ಥಗಳಿಗೆ ಕಾರಣರಾಗುತ್ತಿದ್ದಾರೆ.
Recommended Video
ಕಳೆದ ವಾರವೂ ಇಂಥದ್ದೇ ಒಂದು ಪೋಸ್ಟ್ ವಾಟ್ಸ್ ಆಪ್, ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ವೈರಲ್ ಆಗಿತ್ತು. ಟ್ವಿಟರ್ ನಲ್ಲಿ ದೇಶಾದ್ಯಂತ ಆರು ಸಾವಿರಕ್ಕೂ ಹೆಚ್ಚು ಬಾರಿ ಈ ಪೋಸ್ಟ್ ರೀಟ್ವೀಟ್ ಆಗಿದ್ದು, ವಾಟ್ಸ್ ಆಪ್ ನಲ್ಲಿ ಸಾವಿರಾರು ಬಾರಿ ಶೇರ್ ಮಾಡಲ್ಪಟ್ಟಿತ್ತು. ಚಾಮರಾಜನಗರದಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಎಸ್ಪಿ ದಿವ್ಯ ಸಾರಾ ಥಾಮಸ್ ಅವರು ಕೊಳ್ಳೇಗಾಲದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಆಂಜನೇಯನ ಮೂರ್ತಿ ಎದುರು ತಾವು ತಂದಿದ್ದ ಯೇಸು ಕ್ರಿಸ್ತನ ಫೋಟೋ ಇರಿಸಿ ಬಲವಂತವಾಗಿ ಅರ್ಚಕರಿಂದ ಪೂಜೆ ಮಾಡಿಸಿದರು ಎನ್ನುವ ವಿಷಯ ಮತ್ತು ಆ ಸಂಬಂಧಿತ ಫೋಟೊ ಸಾವಿರಾರು ಬಾರಿ ಶೇರ್ ಆಗಿತ್ತು.
ಮಸೀದಿ ಸುಟ್ಟು ಹಿಂದು ಧ್ವಜ ಹಾರಿಸಿದ ವಿಡಿಯೋ ದೆಹಲಿಯದ್ದೇ
ಫೋಟೊ ಇದ್ದದ್ದು ನಿಜ...
ಫೋಟೊ ನಿಜವಾಗಿಯೇ ಇದ್ದುದರಿಂದ ಶೇರ್ ಮಾಡಿದ್ದ ಎಲ್ಲರೂ ಸತ್ಯವೆಂದೇ ಭಾವಿಸಿಕೊಂಡಿದ್ದು, ಸಾಮಾಜಿಕ ತಾಣಗಳಲ್ಲಿ ಎಸ್ಪಿ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು. ಆದರೆ ವಾಸ್ತವ ಮಾತ್ರ ಸಂಪೂರ್ಣ ಭಿನ್ನವಾಗಿದೆ. ಈ ಕುರಿತು ಒನ್ ಇಂಡಿಯಾ ಕನ್ನಡ ನಿಜ ಸಂಗತಿಯ ಕುರಿತು ವರದಿ ನೀಡಿದೆ.
ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎಸ್ ಪಿ
ಅಂದು ಆಗಸ್ಟ್ 5ರಂದು ಮಳೆ, ಪ್ರವಾಹ ಸಮೀಕ್ಷೆಗಾಗಿ ಕೊಳ್ಳೇಗಾಲಕ್ಕೆ ಭೇಟಿ ನೀಡಿದ್ದ ದಿವ್ಯಾ ಅವರನ್ನು ಸಂಪ್ರದಾಯದಂತೆ ವೀರಾಂಜನೇಯ ದೇವಾಲಯಕ್ಕೆ ಆಹ್ವಾನಿಸಲಾಗಿತ್ತು. ಅಲ್ಲಿ ದೇವಾಲಯ ಸಮಿತಿಯವರು ದಿವ್ಯಾ ಅವರು ಕ್ರಿಶ್ಚಿಯನ್ ಆಗಿದ್ದುದರಿಂದ ಏಸು ಕ್ರಿಸ್ತನ ಫೋಟೊವನ್ನು ನೀಡಿದರು. ಅದನ್ನು ಆ ಸಂದರ್ಭದಲ್ಲಿ ಸಮಿತಿಯವರೇ ಆಂಜನೇಯನ ಮೂರ್ತಿಯ ಕೆಳ ಭಾಗದಲ್ಲಿ ಫೋಟೊ ಇಟ್ಟಿದ್ದರು.
ವೈರಲ್ ಆದ ಈ ಫೋಟೊ ಹಿಂದಿನ ಸತ್ಯಾಂಶ ಫ್ಯಾಕ್ಟ್ ಚೆಕ್ ನಲ್ಲಿ ಹೊರಬಿತ್ತು
"ಸತ್ಯ ತಿರುಚಿರುವುದು ಎಷ್ಟು ಸರಿ?"
ಇದನ್ನು ಇಟ್ಟಿದ್ದು ದೇವಾಲಯದ ಪ್ರಧಾನ ಅರ್ಚಕ ರಾಘವನ್ ಲಾಚೂ ಅವರಾಗಿದ್ದು, ಜಿಲ್ಲೆಗೆ ಬರುವ ಹಿರಿಯ ಅಧಿಕಾರಿಗಳನ್ನು ಸಂಪ್ರದಾಯದಂತೆ ದೇವಾಲಯಕ್ಕೆ ಆಹ್ವಾನಿಸಲಾಗುತ್ತಿದ್ದು, ನೆನಪಿಗಾಗಿ ಅವರ ನಂಬಿಕೆಯ ದೇವರ ಫೋಟೊವನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಆದರೆ ದಿವ್ಯಾ ಅವರು ಕ್ರಿಶ್ಚಿಯನ್ ಆಗಿದ್ದುದರಿಂದ ಅವರ ಧರ್ಮದ ಫೋಟೊ ನೀಡಲಾಯಿತು ಅಷ್ಟೆ. ಸತ್ಯವನ್ನು ತಿರುಚಿ ಇದನ್ನು ವಿವಾದ ಮಾಡಿದ್ದಾರೆ ಎಂದು ಕ್ರೋಧ ವ್ಯಕ್ತಪಡಿಸಿದರು.
ಎಸ್ ಪಿ ದಿವ್ಯಾ ಥಾಮಸ್ ಹೇಳುವುದೇನು?
ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ದಿವ್ಯಾ ಥಾಮಸ್ ಅವರು, "ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಬೇರೇಯೇ ಆಯಾಮ ಪಡೆದುಕೊಂಡಿರುವುದು ದುರದೃಷ್ಟಕರ. ನಾನು ಎಂದಿಗೂ ಒಬ್ಬ ಕ್ರಿಶ್ಚಿಯನ್ ಎಂಬ ಮನಸ್ಥಿತಿಯಿಂದ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಸರ್ಕಾರಿ ನೌಕರರು ಕರ್ತವ್ಯದಲ್ಲಿರುವಾಗ, ಸಾರ್ವಜನಿಕರು ಶುಭ ಕೋರುವಾಗ ನೀಡುವ ಹೂಗುಚ್ಚ ಅಥವಾ ಕಿರು ಕಾಣಿಕೆಯನ್ನು ಪಡೆಯಲೇಬೇಕಾಗುತ್ತದೆ. ಇಲ್ಲದಿದ್ದರೆ ಜನರು ತಪ್ಪು ತಿಳಿದುಕೊಳ್ಳುತ್ತಾರೆ ಎಂದರು. ಈ ಘಟನೆಯನ್ನು ನಿರ್ಲಕ್ಷಿಸಿ ತಾವು ಎಂದಿನ ಉತ್ಸಾಹ ಕಾರ್ಯ ದಕ್ಷತೆಯಿಂದ ಕರ್ತವ್ಯ ನಿರ್ವಹಣೆ ಮಾಡುವುದಾಗಿ ಸ್ಪಷ್ಟಪಡಿಸಿದರು.
ಈ ಘಟನೆಯ ಕುರಿತು ರಾಜ್ಯ ಪೊಲೀಸ್ ಇಲಾಖೆಯೂ ಸ್ಪಷ್ಟೀಕರಣ ಬಿಡುಗಡೆ ಮಾಡಿದ್ದು, ಎಸ್ಪಿ ಅವರು ಯೇಸುವಿನ ಫೋಟೊ ಇಡಲು ಸೂಚಿಸಿಲ್ಲ ಎಂದಿದೆ.