ಕೊರೊನಾ ತಡೆಗೆ ಚಾಮರಾಜನಗರದ 11 ಚೆಕ್ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣು
ಚಾಮರಾಜನಗರ, ಮಾರ್ಚ್ 27: ತಮಿಳುನಾಡು ಮತ್ತು ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕಾರಣ ಚಾಮರಾಜನಗರದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.
ಜಿಲ್ಲೆಯಿಂದ ಹೊರಹೋಗುವ, ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಒಳಬರುವ ವಾಹನಗಳ ಮತ್ತು ಸಾರ್ವಜನಿಕರ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಜಿಲ್ಲೆಯ 11 ಕಡೆ ಅಂತರ ಜಿಲ್ಲಾ ಹಾಗೂ ಅಂತರರಾಜ್ಯ ಚೆಕ್ಪೋಸ್ಟ್ಗಳನ್ನು ತೆರೆದು ಮೂರು ಪಾಳಿಗಳಲ್ಲಿ ರಾತ್ರಿ-ಹಗಲು ಕಾರ್ಯ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ.
ಗುಂಡ್ಲುಪೇಟೆಯಲ್ಲಿ ಬಸ್ಗಳಿಗೆ ಡೆಟಾಲ್ ಸ್ಪ್ರೇ
ಜಿಲ್ಲೆಯಲ್ಲಿರುವ ಚೆಕ್ ಪೋಸ್ಟ್ಗಳ ವಿವರ
ಚಾಮರಾಜನಗರ ತಾಲೂಕಿನ ಹೆಗ್ಗವಾಡಿ, ಪುಣಜನೂರು, ಬಾನಳ್ಳಿ (ಮೂಗೂರು ಗಡಿ), ಗುಂಡ್ಲುಪೇಟೆ ತಾಲೂಕಿನ ಹಿರೇಕಾಟಿ(ಬೇಗೂರು), ಮದ್ದೂರು(ಮೂಲೆಹೊಳೆ), ಮೇಲುಕಾಮನಹಳ್ಳಿ (ಕೆಕ್ಕನಹಳ್ಳ), ಕುರುಬರಹುಂಡಿ, ಹನೂರು ತಾಲೂಕಿನ ಪಾಲಾರ್ (ಮೆಟ್ಟೂರು ರಸ್ತೆ), ನಾಲ್ ರೋಡ್, ಅರ್ಧನಾರೀಪುರ (ಒಡೆಯರಪಾಳ್ಯ) ಮತ್ತು ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಆರೋಗ್ಯ, ಕಂದಾಯ, ಗ್ರಾಮಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಣೆ
ಈ ಸಿಬ್ಬಂದಿಯನ್ನು ಮೂರು ಪಾಳಿಯಲ್ಲಿ ಕರ್ತವ್ಯ ನಿಯೋಜಿಸಲು ಸೂಚಿಸಲಾಗಿದೆ. ಮೊದಲ ಬೆಳಿಗ್ಗೆ ಆರರಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ, ಎರಡನೇ ಪಾಳಿ ಮಧ್ಯಾಹ್ನ ಎರಡರಿಂದ ರಾತ್ರಿ ಹತ್ತು ಗಂಟೆಯವರೆಗೆ ಹಾಗೂ ಮೂರನೇ ಪಾಳಿಯು ರಾತ್ರಿ ಹತ್ತರಿಂದ ಬೆಳಿಗ್ಗೆ ಆರು ಗಂಟೆಯವರೆಗೆ ನಿಗದಿ ಮಾಡಲಾಗಿದೆ. ಜತೆಗೆ ಚೆಕ್ ಪೋಸ್ಟ್ಗಳಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಕೂಡ ಇರಲಿದ್ದಾರೆ.
ಅನಗತ್ಯ ಸಂಚಾರಕ್ಕೆ ಬ್ರೇಕ್
ಎಲ್ಲ ಚೆಕ್ಪೋಸ್ಟ್ಗಳಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಉಪ ತಹಸೀಲ್ದಾರ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಚೆಕ್ ಪೋಸ್ಟ್ಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನಗತ್ಯವಾಗಿ ಒಳ ಬರಲು ಮತ್ತು ಹೊರ ಹೋಗಲು ಅವಕಾಶ ನೀಡುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಅಗತ್ಯ ದಾಖಲಾತಿಗಳನ್ನು ನೀಡಿ ತೆರಳಬೇಕಾಗುತ್ತದೆ. ಇಲ್ಲಿ ತೆರಳುವ ಎಲ್ಲ ವಾಹನ ಮತ್ತು ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ.
ವಾಹನಗಳಿಗೆ ಔಷಧಿ ಸಿಂಪಡಣೆ
ಇನ್ನೊಂದೆಡೆ ಅಗತ್ಯ ಕಾರಣಗಳಿಗೆ ಕೇರಳದಿಂದ ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳಿಗೆ ಅಗ್ನಿ ಶಾಮಕ ದಳದಿಂದ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಸದ್ಯ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಬೈಕ್, ಲಾರಿ, ಟೆಂಪೊ ಮೊದಲಾದ ವಾಹನಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಾರಣ ಕೇರಳಕ್ಕೆ ಹೊಂದಿಕೊಂಡಂತಿರುವ ಗಡಿ ಪ್ರದೇಶದ ಚೆಕ್ ಪೋಸ್ಟ್ಗಳನ್ನು ಹೆಚ್ಚಿನ ನಿಗಾ ವಹಿಸುವುದರೊಂದಿಗೆ ಕೊರೊನಾ ತಡೆಗಟ್ಟಲು ಸರ್ವ ರೀತಿಯಲ್ಲೂ ಕಸರತ್ತುಗಳನ್ನು ಮಾಡಲಾಗುತ್ತಿದೆ.