ಬಿಎಸ್ಪಿ ತೊರೆದ ಎನ್. ಮಹೇಶ್ ಬಿಜೆಪಿಯತ್ತ?
ಚಾಮರಾಜನಗರ, ಜುಲೈ 19: ಬಿಎಸ್ಪಿ ಪಕ್ಷದಿಂದ ದೂರವಾಗಿ ಸದ್ಯ ಪಕ್ಷೇತರ ಶಾಸಕರಂತಿರುವ ಕೊಳ್ಳೇಗಾಲ ಮೀಸಲು ಕ್ಷೇತ್ರದ ಶಾಸಕ ಎನ್. ಮಹೇಶ್ ಮುಂದಿನ ತಾ.ಪಂ ಮತ್ತು ಜಿ.ಪಂ ಚುನಾವಣೆ ವೇಳೆಗೆ ಬಿಜೆಪಿ ಪಕ್ಷ ಸೇರಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕ್ಷೇತ್ರದಾದ್ಯಂತ ಸಂಚರಿಸಿ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುತ್ತಿರುವುದು ಹೊಸ ರಾಜಕೀಯ ಬೆಳವಣಿಗೆಯಾಗಿದೆ.
ಬಿಜೆಪಿ ಸೇರ್ಪಡೆ ಕುರಿತಂತೆ ಚರ್ಚೆ
ಬಿಎಸ್ಪಿ ಸಖ್ಯ ತೊರೆದ ನಂತರ ಬಿಜೆಪಿ ಸರ್ಕಾರದ ವಿರುದ್ಧ ಯಾವುದೇ ಆರೋಪ ಮಾಡದೆ, ಬಿಜೆಪಿ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿರುವ ಮಹೇಶ್, ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವತ್ತ ಆಲೋಚನೆ ಮಾಡಿದ್ದು, ಅದಕ್ಕೆ ಮುನ್ನ ಬರಲಿರುವ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಬೆಂಬಲಿಗರನ್ನು ಗೆಲ್ಲಿಸಿ ತನ್ನ ಪ್ರಾಬಲ್ಯ ಸಾಧಿಸುವ ಚಿಂತನೆಯಲ್ಲಿದ್ದಾರೆ.
ಈ ಸಂಬಂಧ ಕ್ಷೇತ್ರದ ಬೆಂಬಲಿಗರೊಂದಿಗೆ ಗೌಪ್ಯವಾಗಿ ಸಭೆ ಮಾಡುತ್ತಿದ್ದು, ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಕಲೆ ಹಾಕಿ ಒಳಿತು, ಕೆಡಕುಗಳ ಕುರಿತಂತೆಯೂ ಚರ್ಚೆ ನಡೆಸುತ್ತಿದ್ದಾರೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದರೆ ತಾ.ಪಂ, ಜಿ.ಪಂ ಚುನಾವಣೆಗೆ ಮುನ್ನವೇ ಬಿಜೆಪಿಯನ್ನು ಸೇರುವುದಂತು ನಿಶ್ಚಿತ.
ಸಮ್ಮತಿ ಸೂಚಿಸಿರುವ ಬೆಂಬಲಿಗರು
ಈ ನಡುವೆ ತಮ್ಮ ಕ್ಷೇತ್ರವಾದ ಕೊಳ್ಳೇಗಾಲ ತಾಲೂಕಿನ ಕುರುಬನಕಟ್ಟೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಸಭೆ ನಡೆಸಿದ ಎನ್. ಮಹೇಶ್, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರುವ ಚಿಂತನೆ ನಡೆಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಾಗಬೇಕೆಂದರೆ ಆಡಳಿತ ಪಕ್ಷದಲ್ಲಿರುವುದು ಸೂಕ್ತ. ಬೆಂಬಲಿಗರು ಸಮ್ಮತಿಸಿದರೆ ಬಿಜೆಪಿ ಸೇರುವುದಾಗಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದೆಲ್ಲ ಬೆಳವಣಿಗೆಯನ್ನು ಗಮನಿಸಿದರೆ ಬಹುಶಃ ಶೀಘ್ರವೇ ಬಿಜೆಪಿಗೆ ಸೇರ್ಪಡೆಗೊಂಡು ತಾ.ಪಂ ಜಿ.ಪಂ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವುದರೊಂದಿಗೆ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಲು ತಯಾರಿ ನಡೆಸಿದರೆ ಅಚ್ಚರಿ ಪಡಬೇಕಾಗಿಲ್ಲ. ಸದ್ಯ ಸಭೆಯಲ್ಲಿ ಬೆಂಬಲಿಗರು ಸಹಮತ ವ್ಯಕ್ತಪಡಿಸಿದ್ದು, ಬಿಜೆಪಿ ಸೇರಲು ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಜಿಲ್ಲೆಯ ಇತರೆ ಬೆಂಬಲಿಗರ ಜೊತೆಯೂ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಶಾಸಕ ಎನ್. ಮಹೇಶ್ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಚ್ಚರಿಯನ್ನುಂಟು ಮಾಡಿದ ಎನ್. ಮಹೇಶ್ ನಡೆ
Recommended Video
ಬಿಎಸ್ಪಿ ಪಕ್ಷವನ್ನು ಹಲವು ವರ್ಷಗಳ ಕಾಲ ಸಂಘಟಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಗೆಲುವು ಸಾಧಿಸಿ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎನ್. ಮಹೇಶ್, ಕೆಲ ತಿಂಗಳ ಕಾಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮೌನಕ್ಕೆ ಶರಣಾಗಿದ್ದರು. ಆದರೆ ಬಿಜೆಪಿಯನ್ನು ವಿರೋಧಿಸುತ್ತಲೇ ಬಂದಿದ್ದು, ಅವರು ಈಗ ಬಿಜೆಪಿಯನ್ನು ಸೇರ್ಪಡೆಗೊಳ್ಳುತ್ತಾರೆ ಎನ್ನುವುದು ರಾಜಕೀಯ ವಲಯದಲ್ಲಿ ಅಚ್ಚರಿಯನ್ನುಂಟು ಮಾಡಿರುವುದಂತು ಸತ್ಯ.