ಚಾಮರಾಜನಗರ ಜಿಲ್ಲೆಯಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ
ಚಾಮರಾಜನಗರ, ಸೆಪ್ಟೆಂಬರ್ 10: ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ದ ಭಾರತ ಬಂದ್ ಗೆ ಚಾಮರಾಜನಗರದಲ್ಲಿ ಸಂಪೂರ್ಣ ಬೆಂಬಲ ದೊರೆತಿದ್ದು ಯಶಸ್ವಿಯಾಗಿದೆ.
ಹಾಗೆನೋಡಿದರೆ ಚಾಮರಾಜನಗರ ಕಾಂಗ್ರೆಸ್ ನ ಭದ್ರಕೋಟೆ ಆಗಿರುವ ಕಾರಣ ಇಲ್ಲಿ ಬಂದ್ ಯಶಸ್ವಿಯಾಗುವುದು ಸಾಮಾನ್ಯ. ಆದರೆ ಬಿಜೆಪಿ ಶಾಸಕರಿರುವ ಗುಂಡ್ಲುಪೇಟೆಯಲ್ಲಿ ಬಂದ್ ಗೆ ನಿರಸ ಪ್ರತಿಕ್ರಿಯೆ ದೊರೆತ್ತಿದ್ದು, ಗುಂಡ್ಲುಪೇಟೆಯ ಪೆಟ್ರೋಲ್ ಬಂಕ್ ನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಖವಾಡ ಧರಿಸಿಕೊಂಡು ಗ್ರಾಹಕರಿಗೆ ಪೆಟ್ರೋಲ್ ಹಾಕಿದ ಘಟನೆಯೂ ನಡೆದಿದೆ.
ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ನವರು ಬಾಗಿಲು ಹಾಕಿಸಿದರು, ಬಿಜೆಪಿಯವರು ತೆಗೆಸಿದರು
ಇದನ್ನು ಹೊರತು ಪಡಿಸಿದಂತೆ ಉಳಿದ ಐದು ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಚಾಮರಾಜನಗರದಲ್ಲಿ ಬೆಳಗ್ಗಿನಿಂದಲೇ ಕೆಎಸ್ ಆರ್ಟಿಸಿ ಬಸ್ ಗಳು ರಸ್ತೆಗಿಳಿಯದೆ ಬಸ್ ಡಿಪೋ ಸೇರಿದ್ದರಿಂದ ಕೆಲವರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು. ಇನ್ನು ಖಾಸಗಿ ಬಸ್ಗಳು ಕೂಡ ರಸ್ತೆಗೆ ಇಳಿಯದೆ ಬೆಂಬಲ ಸೂಚಿಸಿದ್ದವು. ಎತ್ತಿನಗಾಡಿ, ಬೈಸಿಕಲ್ ಮೇಲೆ ಮೆರವಣಿಗೆಯಲ್ಲಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ಕಾರ್ಯಕರ್ತರು ತೆರಳಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಇದೇ ವೇಳೆ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಸಂಸದ ಆರ್.ಧ್ರುವನಾರಾಯಣ್, ಕೇಂದ್ರ ಸರ್ಕಾರವು ಬರೀ ಯೋಜನೆಗಳ ಘೋಷಣೆಯನ್ನು ಮಾಡುತ್ತಿದೆ, ಜನರ ನೋವುಗಳಿಗೆ ಸ್ಪಂದನೆ ನೀಡುತ್ತಿಲ್ಲ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಬಂದ್ ವಿಫಲಗೊಳಿಸಲು ಬಿಜೆಪಿಯವರು ಯತ್ನಿಸಿದ್ದಾರೆ, ಆದರೆ ಜನತೆ ಇದಕ್ಕೆ ಮನ್ನಣೆ ನೀಡದೆ ಬಂದ್ಗೆ ಬೆಂಬಲ ನೀಡಿದ್ದಾರೆ. ಅದರಂತೆ ಚಾಮರಾಜನಗರ ಜಿಲ್ಲೆಯಾದ್ಯಂತ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.
ಮೈಸೂರಿನಲ್ಲಿ ಭಾರತ್ ಬಂದ್ ಗೆ ಮಿಶ್ರಪ್ರತಿಕ್ರಿಯೆ:ವಿವಿಧ ಸಂಘಟನೆಗಳಿಂದ ವಿಶಿಷ್ಟ ಶೈಲಿಯಲ್ಲಿ ಪ್ರತಿಭಟನೆ
ಈ ಮಧ್ಯೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭುವನೇಶ್ವರಿ ವೃತ್ತದಲ್ಲಿ ಟೈರ್ಗೆ ಬೆಂಕಿ ಹಾಕಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಸೌಮ್ಯದ ಭಾರತೀಯ ಜೀವವಿಮಾ ಕಚೆÉೀರಿಯನ್ನು ಹೊರತು ಪಡಿಸಿದರೆ, ಬ್ಯಾಂಕ್, ಅಂಚೆ ಕಚೇರಿ , ದೂರವಾಣಿ ಇಲಾಖೆಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದವು.
ಹೊಟೇಲ್, ಪೆಟ್ರೋಲ್ ಬಂಕ್, ಸಿನಿಮಾಮಂದಿರ, ಶಾಲಾ ಕಾಲೇಜು ಬಂದ್ ಆಗಿದ್ದರೆ, ಸರ್ಕಾರಿ ಕಚೇರಿಗಳು ಕರ್ತವ್ಯ ನಿರ್ವಹಿಸಿದರೂ ಬೆರಳೆಣಿಕೆಯಷ್ಟು ಸರ್ಕಾರಿ ನೌಕರರು ಹಾಜರಿದ್ದು ಕರ್ತವ್ಯ ನಿರ್ವಹಿಸಿದ್ದು ಕಂಡು ಬಂತು.
ಅದೇ ರೀತಿಯಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು, ಕೊಳ್ಳೇಗಾಲ, ಹನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಇನ್ನಿತರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಎಲ್ಲಾ ಕಡೆಯಲ್ಲೂ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು.