ಬಂಡೀಪುರ ರಸ್ತೆ ಅಗಲೀಕರಣ, ಶಾಸಕರ ವಿರುದ್ಧ ಪರಿಸರ ಪ್ರೇಮಿಗಳ ಆಕ್ಷೇಪ
ಚಾಮರಾಜನಗರ,ಜೂನ್ 28 : ರಾತ್ರಿ ಸಂಚಾರ ನಿಷೇಧದ ಬಳಿಕ ಬಂಡೀಪುರ ರಸ್ತೆ ಈಗ ಮತ್ತೇ ಸುದ್ದಿ ಕೇಂದ್ರಬಿಂದುವಾಗಿದೆ. ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ವಿರುದ್ಧ ಪರಿಸರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಯೋಗ ದಿನಾಚರಣೆಗೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಶಾಸಕ ನಿರಂಜನ ಕುಮಾರ ಮನವಿ ಪತ್ರವನ್ನು ಸಲ್ಲಿಸಿದ್ದು , ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766 ಬಂಡೀಪುರ ಮೂಲಕ ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸಲಿದ್ದು ವಾಹನ ದಟ್ಟನೆಯಿಂದಾಗಿ ಅಪಘಾತ ಮಿತಿ ಮೀರುತ್ತಿದ್ದು ರಸ್ತೆ ಅಗಲೀಕರಣ ಮಾಡಿ ರಸ್ತೆ ವಿಭಜಕ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಡ ಹೇರುತ್ತಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದರು.
ಬಂಡೀಪುರ: ಪ್ರವಾಸಿಗರಿಗೆ ಪೋಟೊ ಹುಚ್ಚು, ಕಾಡುಪ್ರಾಣಿಗಳಿಗೆ ಪೆಚ್ಚು
ಆದರೆ ಶಾಸಕ ನಿರಂಜನಕುಮಾರ್ ಮನವಿಗೆ ಪರಿಸರ ಪ್ರೇಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಬಂಡೀಪುರ ವನ್ಯಜೀವಿಗಳ ಸೂಕ್ಷ್ಮ ಪ್ರದೇಶವಾಗಿದ್ದು ಕಾಡಿನಲ್ಲಿ ರಸ್ತೆ ವಿಭಜಕ ಅಳವಡಿಸುವ ಮನವಿ ತೀರಾ ಅವೈಜ್ಞಾನಿಕ ಎಂದು ಕಿಡಿಕಾರಿದ್ದಾರೆ.
ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಪುಟ ಒಪ್ಪಿಗೆ
ಕಾನೂನಿನ ಉಲ್ಲಂಘನೆ
ಪ್ರಸ್ತುತ ಬಂಡೀಪುರ ರಸ್ತೆ ಅಗಲೀಕರಣಕ್ಕೆ ಮುಂದಾಗಿರುವ ಮಾರ್ಗ ಪರಿಸರ ಮೌಲ್ಯಮಾಪನ ಅಧಿಸೂಚನೆ 2006ರ ಪ್ರಕಾರ 'ಎ' ದರ್ಜೆಯ ಯೋಜನೆಯಾಗಿದೆ. ಅಲ್ಲದೆ, ಬಂಡೀಪುರ ಹುಲಿ ಸಂರಕ್ಷಣಾ ಧಾಮವು ಪರಿಸರ ಸೂಕ್ಷ್ಮವಲಯವಾಗಿದ್ದು, ಈ ಯೋಜನೆಗೆ ಅನುಮತಿ ನೀಡುವ ಮುನ್ನ ಈ ಭಾಗದಲ್ಲಿನ ಪರಿಸರಕ್ಕೆ ಆಗುತ್ತಿರುವ ಪರಿಣಾಮವನ್ನು ಮಾಪನ ಮಾಡುವುದು ಕಡ್ಡಾಯವಾಗಿದೆ. ಆದರೆ, ಶಾಸಕರ ಮನವಿ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಇದು ಕಾನೂನಿನ ಸ್ಪಷ್ಟಉಲ್ಲಂಘನೆಯಾಗಿದೆ ಎಂದು ಪರಿಸರವಾದಿಗಳು ಆರೋಪವಾಗಿದೆ.
ಕಾಡಿನ ರಸ್ತೆಯಲ್ಲಿ ವಿಭಜಕ ಬೇಡ
ಹಿಂದೆ ರಾತ್ರಿ ಸಂಚಾರ ಆರಂಭಿಸುವ ಕ್ರಮಕ್ಕೆ ಶಾಸಕ ನಿರಂಜನ್ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈಗ ಅವರು ವಿಭಿನ್ನ ರಾಗ ಹಾಡಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಆವಾಸಸ್ಥಾನದ ರಸ್ತೆಯಲ್ಲಿ ವಿಭಜಕ ಬಯಸುವುದು ಸರಿಯಲ್ಲ, ಅಪಘಾತ ಉಂಟಾಗುವುದು ಅಜಾಗರೂಕ ಚಾಲನೆಯಿಂದಾಗಿ ಈ ಬಗ್ಗೆ ಜಾಗೃತಿ ಮೂಡಿಸಲಿ, ಕಾಡು ಪ್ರವೇಶಕ್ಕೂ ಮುನ್ನ ಬೇಕಾದರೇ ವಿಭಜಕ ಅಳವಡಿಸಿಕೊಳ್ಳಲಿ, ಅದು ಬಿಟ್ಟು ಕಾಡಿನ ರಸ್ತೆಯಲ್ಲಿ ವಿಭಜಕ ಅಳವಡಿಸಿ, ರಸ್ತೆ ಅಗಲೀಕರಣ ಮಾಡುವುದು ಸರಿಯಲ್ಲ ಎಂದು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಕಿಡಿಕಾರಿದ್ದಾರೆ.
ತಮಿಳುನಾಡು ಅನುಮತಿ ಕೇಳುವ ಸಾಧ್ಯತೆ
ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶವು ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಣಾ ಧಾಮಕ್ಕೆ ಹೊಂದಿಕೊಂಡಿದೆ. ಈ ರಾಷ್ಟ್ರೀಯ ಹೆದ್ದಾರಿ ಎರಡೂ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಹಾದು ಹೋಗುತ್ತಿದೆ. ಕರ್ನಾಟಕದಲ್ಲಿ ರಸ್ತೆ ಅಗಲೀಕರಣವಾದರೆ ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿಯೂ ಅನುಮತಿ ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ಎರಡು ವನ್ಯಜೀವಿ ಧಾಮಗಳ ನಡುವೆ ಸುಮಾರು 30 ಕಿ. ಮೀ. ರಸ್ತೆಯ ಅಗಲೀಕರಣದ ಉದ್ದೇಶ ಇದೆ. ಒಂದು ವೇಳೇ ಈ ರಸ್ತೆ ಅಗಲೀಕರಣ ಮಾಡಿದರೆ ವನ್ಯಜೀವಿಗಳಿಗೆ ಹಾಗೂ ಪರಿಸರಕ್ಕೂ ಹಾನಿಯಾಗಲಿದೆ.
ವನ್ಯ ಜೀವಿಗಳ ಪ್ರಾಣಕ್ಕೆ ಕುತ್ತು
ಒಂದು ವೇಳೆ ಈ ರಸ್ತೆಯ ಅಗಲೀಕರಣವಾದರೆ ವಾಹನಗಳ ಓಡಾಟದಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯದಿಂದ ವನ್ಯಜೀವಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಈ ಮಾರ್ಗದಲ್ಲಿ ಹುಲಿ, ಆನೆ, ಚಿರತೆ, ಸೇರದಿಂತೆ ಹಲವು ಪ್ರಾಣಿಗಳು ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಸಾವನ್ನಪ್ಪುವ ಸಾಧ್ಯತೆಯಿವೆ. ಈ ಕಾರಣದಿಂದ ತುರ್ತು ವಾಹನಗಳು ಮತ್ತು ಕೆಲವೇ ಸಾರ್ವಜನಿಕ ಬಸ್ಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡದಂತೆ ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ ಈ ಮಾರ್ಗದಲ್ಲಿ ಇದೀಗ ಈ ಯೋಜನೆಗೆ ಅನುಮತಿ ಸಿಕ್ಕಲ್ಲಿ ಮತ್ತಷ್ಟು ವ್ಯನ್ಯಜೀವಿಗಳು ಜೀವ ಕಳೆದುಕೊಳ್ಳಲು ಕಾರಣವಾಗಲಿದೆ ಎಂಬುದು ಪರಿಸರವಾದಿಗಳ ಆಶಯವಾಗಿದೆ.