ಚಾಮರಾಜನಗರದ ಕುದೇರಲ್ಲಿ ಊರಿಗೊಂದೇ ಗೌರಮ್ಮ, ಒಂದೇ ಗೌರಿಹಬ್ಬ!
ಚಾಮರಾಜನಗರ, ಸೆಪ್ಟೆಂಬರ್ 13 : ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಹೋಬಳಿಯ ಕುದೇರು ಗ್ರಾಮದಲ್ಲಿ ನಡೆಯುವ ಗೌರಿಹಬ್ಬ ಪ್ರಖ್ಯಾತವಾಗಿದೆ. ಇಲ್ಲಿ ನಡೆಯುವ ಸಂಪ್ರದಾಯ, ಆಚರಣೆ ಎಲ್ಲವೂ ಇತರೆಡೆಗಳಲ್ಲಿ ನಡೆಯುವ ಹಬ್ಬಕ್ಕಿಂತ ವಿಭಿನ್ನ ಮತ್ತು ವಿಶಿಷ್ಟವಾಗಿದೆ.
ಇಲ್ಲಿ ಯಾರ ಮನೆಯಲ್ಲೂ ಗೌರಮ್ಮನ ಪ್ರತಿಷ್ಠಾಪಿಸದೆ, ಪೂಜೆ ವ್ರತ ಮಾಡದೆ ಗ್ರಾಮಕ್ಕೊಂದು ಗೌರಮ್ಮನನ್ನು ಸ್ಥಾಪಿಸಿ, ಪೂಜಿಸಿ ಹಬ್ಬ ಆಚರಣೆ ಮಾಡುವುದು ವಾಡಿಕೆ. ಈ ಆಚರಣೆ ಇಲ್ಲಿ ಶತ ಶತಮಾನಗಳಿಂದ ಇದೆ. 'ಸ್ವರ್ಣ ಗೌರಿ' ದೇವಾಲಯ ನಿರ್ಮಾಣ ಮಾಡಿ ಇಡೀ ಗ್ರಾಮವೇ ಒಟ್ಟಿಗೆ ಸೇರಿ ಗೌರಿ ಪೂಜೆ ಮಾಡುವುದು ವಿಶೇಷ.
ಸಾಮಾನ್ಯವಾಗಿ ಗೌರಿ ಹಬ್ಬ ಬಂತೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಂತೋಷ, ಸಂಭ್ರಮ, ಜತೆಗೆ ತವರು ಮನೆಗೆ ಹೋಗುವ ಸಡಗರ. ತವರಲ್ಲಿ ನೀಡುವ ಬಾಗಿನ ಸ್ವೀಕರಿಸೋದೆ ಎಲ್ಲಿಲ್ಲದೆ ಖುಷಿ. ಎಲ್ಲೆಡೆ ಮನೆ ಮನೆಯಲ್ಲೂ ಗೌರಿಯನ್ನು ಪ್ರತಿಷ್ಠಾಪಿಸಿ ವೃತ ಮಾಡುವುದು ವಾಡಿಕೆ. ಆದರೆ ಕುದೇರು ಗ್ರಾಮದ ಸ್ವರ್ಣ ಗೌರಿ ದೇವಾಲಯದಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಿ ಹನ್ನೆರಡು ದಿನಗಳ ಕಾಲ ಹಬ್ಬ ಆಚರಣೆ ಮಾಡಲಾಗುತ್ತದೆ.
ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿ ಗೌರಮ್ಮಳಿಗಾಗಿಯೇ ದೇವಾಲಯವನ್ನು ಹಲವಾರು ವರ್ಷಗಳ ಹಿಂದೆ ಕಟ್ಟಿಸಿದ್ದಾರೆ. ಹಬ್ಬದಂದು ಯಾವುದೇ ಮನೆಯಲ್ಲಿ ಗೌರಮ್ಮಳನ್ನು ಪ್ರತಿಷ್ಠಾಪನೆ ಮಾಡದೆ ಊರಿನ ಮಹಿಳೆಯರು ಎಲ್ಲರೂ ದೇವಾಲಯಕ್ಕೆ ಬಂದು ಗೌರಿಯನ್ನು ಪೂಜಿಸುತ್ತಾರೆ.
ಇನ್ನು ಕುದೇರು ಗ್ರಾಮದ ಹೆಣ್ಣು ಮಕ್ಕಳು ಬೇರೆ ಊರಿಗೆ ಮದುವೆಯಾಗಿದ್ದರೆ, ತವರು ಮನೆಗೆ ತಪ್ಪದೆ ಬಂದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಊರಿನಲ್ಲಿರುವ ಕೆರೆಯ ಬಳಿ ಗೌರಿಯನ್ನು ತಯಾರಿಸಿ ಹೋಮ ಹವನ ನಡೆಸುವ ಮೂಲಕ ಗ್ರಾಮಸ್ಥರು ಪಲ್ಲಕ್ಕಿಯಲ್ಲಿ ಗೌರಮ್ಮಳನ್ನು ಕುಳ್ಳರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭ ಮಹಿಳೆಯರು ಬಂದು ಗೌರಮ್ಮಳಿಗೆ ಪೂಜೆ ಮಾಡಿ, ಬಾಗಿನ ಸಮರ್ಪಣೆ ಮಾಡಿ ಪರಸ್ಪರ ಬಾಗಿನ ಸ್ವೀಕರಿಸುತ್ತಾರೆ.
ಕುದೇರು ಗ್ರಾಮದಲ್ಲಿ ಜಾತಿ ಮತಗಳನ್ನು ಹೊರತು ಪಡಿಸಿ ಎಲ್ಲರೂ ಒಂದೇ ಭಾವನೆಯಿಂದ ಹಬ್ಬದಲ್ಲಿ ಭಾಗವಹಿಸಿ ಸಂತೋಷ ಹಂಚಿಕೊಳ್ಳುವುದು ಇಲ್ಲಿನ ವಿಶೇಷವಾಗಿದೆಯಲ್ಲದೆ, ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಪ್ರಾರ್ಥನೆಯೂ ನಡೆಯುತ್ತದೆ.