ವಾಹನ ಸವಾರರ ಕೀಟಲೆಗೆ ಕೋಪಗೊಂಡು ಅಟ್ಟಿಸಿ ಬಂದ ಕಾಡಾನೆಗಳು
ಚಾಮರಾಜನಗರ, ಜುಲೈ 12: ತನ್ನ ಪಾಡಿಗೆ ತನ್ನ ಮರಿಗಳೊಂದಿಗೆ ರಸ್ತೆ ದಾಟುತ್ತಿದ್ದ ಆನೆಗಳಿಗೆ ಕೀಟಲೆ ಮಾಡಿದ್ದರಿಂದ ಆಕ್ರೋಶಗೊಂಡ ಅವು ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಬಂದ ಘಟನೆ ಚಾಮರಾಜನಗರ-ಸತ್ಯಮಂಗಲ ರಸ್ತೆಯ ಪುನಜನೂರು ಬಳಿ ನಡೆದಿದೆ. ಈ ಘಟನೆಯ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಸರಿನಲ್ಲಿ ಸಿಲುಕಿದ್ದ ಆನೆ ಮರಿಯನ್ನು ರಕ್ಷಿಸಿದ ಜನರ ವಿಡಿಯೋ ವೈರಲ್
ಮರಿಯೊಂದಿಗೆ ತಾಯಿ ಆನೆ ಹಾಗೂ ಇನ್ನೊಂದು ಹೆಣ್ಣಾನೆ ಹೆದ್ದಾರಿ ದಾಟುತ್ತಿದ್ದು, ಈ ಸಂದರ್ಭ ವಾಹನ ಸವಾರರು ಕೀಟಲೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡು, ವಾಹನವನ್ನು ಆನೆಗಳು ಅಟ್ಟಿಸಿಕೊಂಡು ಬಂದಿವೆ. ಆನೆಗಳು ಹತ್ತಿರ ಬರುತ್ತಿದ್ದಂತೆಯೇ ಇಬ್ಬರು ದ್ವಿಚಕ್ರ ವಾಹನ ಸವಾರರು ವೇಗವಾಗಿ ಗಾಡಿ ಓಡಿಸಿಕೊಂಡು ಹೋಗಿದ್ದಾರೆ. ಮತ್ತೊಬ್ಬ ವ್ಯಕ್ತಿ ಓಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಆನೆ ದಾಳಿಯಿಂದ ಪ್ರಯಾಣಿಕರು ಕೂದಲೆಳೆಯಲ್ಲಿ ತಪ್ಪಿಸಿಕೊಂಡಿದ್ದು, ಅನಾಹುತದಿಂದ ಪಾರಾಗಿದ್ದಾರೆ.
ಪ್ರವಾಸಿಗರ ಮೇಲೆ ದಾಳಿಗೆ ಮುಂದಾದ ಆನೆ: ವೈರಲ್ ವಿಡಿಯೋ
ತುಂಬ ಹೊತ್ತು ಆನೆಗಳು ರಸ್ತೆ ಮಧ್ಯೆ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ದೃಶ್ಯವೂ ವಿಡಿಯೊದಲ್ಲಿದೆ. ಸತ್ಯಮಂಗಲಕ್ಕೆ ತೆರಳುವ ರಸ್ತೆಯು ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಹಾದು ಹೋಗುತ್ತದೆ. ಆದರೆ ತಮ್ಮ ವ್ಯಾಪ್ತಿಯಲ್ಲಿ ಅಂತಹ ಘಟನೆ ನಡೆದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.