ಚಾಮರಾಜನಗರ: ಬಂಡೀಪುರದಲ್ಲಿ ಆನೆ ಸಫಾರಿಗೆ ನಡೆದಿದೆಯಾ ಸಿದ್ಧತೆ?
ಚಾಮರಾಜನಗರ, ಫೆಬ್ರವರಿ 09: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿರುವ ಸಾಕಾನೆಗಳಿಂದ ಅರಣ್ಯ ಇಲಾಖೆಗೆ ಖರ್ಚು ಹೆಚ್ಚಾಗುತ್ತಿದೆಯೇ ವಿನಃ ಇನ್ಯಾವುದೇ ರೀತಿಯ ಲಾಭವಾಗುತ್ತಿಲ್ಲ. ಹೀಗಾಗಿ ಸಾಕಾನೆಗಳನ್ನು ಬಳಸಿಕೊಂಡು ಸಫಾರಿ ನಡೆಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಬಹಳಷ್ಟು ಕಡೆಗಳಲ್ಲಿರು ಆನೆಶಿಬಿರಗಳಲ್ಲಿ ಸಫಾರಿಗಳಿಗೆ ಆನೆಯನ್ನು ಬಳಸಲಾಗುತ್ತಿದ್ದು, ಇವುಗಳ ಮೇಲೆ ಕುಳಿತು ಸವಾರಿ ಮಾಡಲು ಅವಕಾಶ ಕಲ್ಪಿಸಲಾಗುತ್ತಿದ್ದು, ಇದರಿಂದ ಒಂದಷ್ಟು ಆದಾಯವೂ ಬರುತ್ತಿದೆ.
ಬಂಡೀಪುರ ಶಿಬಿರದಿಂದ ಸಾಕಾನೆಗಳ ಸ್ಥಳಾಂತರ?
ಬಂಡೀಪುರದಲ್ಲಿ ಜಯಪ್ರಕಾಶ, ಚೈತ್ರಾ, ಲಕ್ಷ್ಮೀ ಹಾಗೂ ಎರಡು ಮರಿಯಾನೆ ಸೇರಿ ಐದು ಸಾಕಾನೆಗಳಿವೆ. ಈ ಪೈಕಿ ಎರಡು ಆನೆಗಳನ್ನು ಸಫಾರಿಗೆ ಬಳಸಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಹೇಳಲಾಗಿದೆ. ಒಂದು ವೇಳೆ ಇದಕ್ಕೆ ಹಸಿರು ನಿಶಾನೆ ದೊರಕಿದ್ದೇ ಆದರೆ ಒಂದಷ್ಟು ಆದಾಯ ಬರುವುದಂತೂ ನಿಜ.
ಬಂಡೀಪುರಕ್ಕೆ ರಜಾ ದಿನ ಸೇರಿದಂತೆ ಎಲ್ಲ ದಿನಗಳಲ್ಲೂ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಸಫಾರಿಗೆ ಮುಗಿ ಬೀಳುತ್ತಾರೆ. ಕೆಲವರಿಗೆ ಅವಕಾಶ ಸಿಗದೆ ಹಿಂತಿರುಗುವ ಸಾಧ್ಯತೆಯೂ ಇಲ್ಲದಿಲ್ಲ. ಇಂತಹ ಸಂದರ್ಭಗಳಲ್ಲಿ ಆನೆ ಸಫಾರಿಯನ್ನು ನಡೆಸಿದ್ದೇ ಆದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗುತ್ತದೆ.
ಈ ಬಗ್ಗೆ ಹುಲಿ ಯೋಜನೆ ನಿರ್ದೇಶಕರಿಗೆ ಪತ್ರ ಬರೆಯಲಾಗಿದ್ದು ಅವರು ಅನುಮತಿ ನೀಡಿದ ಬಳಿಕ ಬಹುಶಃ ಆನೆ ಸಫಾರಿಯನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಪ್ರಾಯೋಗಿಕವಾಗಿ ಬಂಡೀಪುರದ ಸುತ್ತ ಹತ್ತು ಹದಿನೈದು ನಿಮಿಷದ ಆನೆ ಸಫಾರಿಯನ್ನು ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದ್ದು, ಎಲ್ಲವೂ ಸರಿಹೋಗಿದ್ದೇ ಆದರೆ ಬಹುಶಃ ಶೀಘ್ರವೇ ಬಂಡೀಪುರಕ್ಕೆ ತೆರಳುವ ಪ್ರವಾಸಿಗರಿಗೆ ಆನೆ ಮೇಲೆ ಕುಳಿತು ಸವಾರಿ ಮಾಡುವ ಅವಕಾಶ ದೊರೆಯಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.