ಬಸ್ಅನ್ನೇ ಅಟ್ಟಿಸಿದ ಆನೆ: ಬಂಡಿಪುರದ ಘಟನೆಯ ವೈರಲ್ ವಿಡಿಯೋ
ಚಾಮರಾಜನಗರ, ಜೂನ್ 25: ರಾಜ್ಯದ ವಿವಿಧೆಡೆ ಆನೆಗಳು ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟುವ, ದಾಳಿ ನಡೆಸುವ ಘಟನೆಗಳು ಹೆಚ್ಚಾಗುತ್ತಿವೆ.
ಒಂಟಿ ಸಲಗಗಳು ಮತ್ತು ಮರಿ ಇರುವಲ್ಲಿ ರೊಚ್ಚಿಗೇಳುವ ಆನೆಗಳು ರಸ್ತೆಯಲ್ಲಿ ಎದುರಾಗುವ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಳ್ಳುತ್ತಿವೆ.
ಮರಿ ಆನೆ ಉಳಿಸಲು ಹೆಣ್ಣಾನೆ ದಾಳಿ: 60 ಪ್ರಯಾಣಿಕರನ್ನು ರಕ್ಷಿಸಿದ ಚಾಲಕ
ಕುಕ್ಕೆ ಸುಬ್ರಮಣ್ಯದ ಬಳಿಕ ಕಾಡಾನೆಯೊಂದು ಶನಿವಾರ ಕಾರಿನ ಮುಂಭಾಗಕ್ಕೆ ಹಾನಿ ಮಾಡಿತ್ತು. ಭಾನುವಾರ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಮತ್ತೊಂದು ಘಟನೆ ನಡೆದಿದೆ.
ಬಂಡೀಪುರದ ಮೂಲೆಹೊಳೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆನೆಗಳ ಗುಂಪೊಂದು ರಸ್ತೆಯಲ್ಲಿ ಸಾಗುತ್ತಿದ್ದವು. ಕಲ್ಲಿಕೋಟೆಯಿಂದ ಗುಂಡ್ಲುಪೇಟೆಯತ್ತ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಅದೇ ಸಮಯಕ್ಕೆ ಅಲ್ಲಿಗೆ ಬಂದಿತು.
ಗುಂಪಿನಲ್ಲಿ ಇದ್ದ ಮರಿಯಾನೆ ಬಸ್ ಅನ್ನು ಕಂಡು ರಸ್ತೆ ದಾಟಲು ಹೆದರಿಕೊಂಡಿದೆ. ಇದರಿಂದ ಸಿಟ್ಟಿಗೆದ್ದ ಆನೆ ಮರಿಯನ್ನು ರಕ್ಷಿಸಲು ಬಸ್ ಮೇಲೆ ಸಿಟ್ಟಿಗೆದ್ದಿತು.
ಪ್ರತ್ಯೇಕ ಘಟನೆ: ಭಕ್ತರಿದ್ದ ಕಾರ್ ಮೇಲೆ ಮುನಿಸಿಕೊಂಡ ಕಾಡಾನೆಗಳು
ಆನೆ ದಾಳಿ ನಡೆಸಲು ಮುಂದಾಗಿದ್ದನ್ನು ಕಂಡ ಚಾಲಕ ಬಸ್ ಅನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ. ನೂರಾರು ಮೀಟರ್ ಹಿಂದಕ್ಕೆ ವೇಗವಾಗಿ ಸಾಗಿದರೂ ಅಟ್ಟಿಸಿಕೊಂಡ ಬಂದ ಆನೆ ಬಸ್ನ ಮುಂಭಾಗಕ್ಕೆ ಸೊಂಡಿಲಿನಿಂದ ಗುದ್ದಿತು. ಆಗ ಬಸ್ ಮುಂಬದಿಯ ಗಾಜು ಬಿರುಕುಬಿಟ್ಟಿತು.
ಅದರ ಆಕ್ರೋಶ ಇನ್ನೂ ತಣಿದಿರಲಿಲ್ಲ. ಮತ್ತೆ ದಾಳಿಗೆ ಮುಂದಾದಾಗ ಬಸ್ ಒಳಗಿದ್ದ ಪ್ರಯಾಣಿಕರು ಜೋರಾಗಿ ಕೂಗಿ ಗದ್ದಲ ಮಾಡಿದರು. ಇದರಿಂದ ಬೆದರಿದ ಆನೆ ಬಸ್ ಅನ್ನು ಬಿಟ್ಟು ತನ್ನ ಮರಿಯತ್ತ ಧಾವಿಸಿತು. ಅಲ್ಲಿ ಮರಿ ರಸ್ತೆ ದಾಟುವವರೆಗೂ ರಸ್ತೆ ಮಧ್ಯೆ ನಿಂತುಕೊಂಡಿತು.
ಗುಂಪಿನ ನಡುವೆ ತೂರಿಕೊಂಡ ಮರಿ ರಸ್ತೆ ದಾಟಿ ಮುಂದೆ ಹೋಗುವವರೆಗೂ ಅಲ್ಲಿಯೇ ನಿಂತುಕೊಂಡಿತು. ಆನೆಗಳ ಹಿಂಡು ಸಂಪೂರ್ಣವಾಗಿ ಮರೆಯಾಗುವವರೆಗೂ ಬಸ್ ಚಲಾಯಿಸಲು ಚಾಲಕ ಮುಂದಾಗಲಿಲ್ಲ.
ಕೆಲ ಸಮಯದ ಬಳಿಕ ಬಸ್ ಅಲ್ಲಿಂದ ಹೊರಟಿತು. ಈ ಘಟನೆಯನ್ನು ಬಸ್ನಲ್ಲಿದ್ದ ಕೆಲವರು ವಿಡಿಯೋ ಮಾಡಿಕೊಂಡಿದ್ದರು. ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.